ಸಾರ್ವಜನಿಕ ಸುರಕ್ಷತಾ ಕಾಯ್ದೆ-2017 550 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ; ಎಸ್ಪಿ ಸೈದುಲು ಅಡಾವತ್

0
271

ಬಳ್ಳಾರಿ,ಮಾ.4 : ನಾಗರಿಕರ ಕಷ್ಟಗಳಿಗೆ ಸ್ಪಂದಿಸುವ ಮತ್ತು ಅವರ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಬಗೆಹರಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ದಿನದ 24 ಗಂಟೆಯೂ ಪೊಲೀಸ್ ಸೇವೆಯನ್ನು ಒದಗಿಸಲು ಒಂದು ತಿಂಗಳ ಅವಧಿಯೊಳಗೆ ನಾಲ್ಕೈದು ಪೊಲೀಸ್ ವಾಹನಗಳು ಕಾರ್ಯರೂಪಕ್ಕೆ ಬರಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಹೇಳಿದರು.
ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಡೆದ ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆ-2017 ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೈದುಲು ಅಡಾವತ್ ಅವರು ಈ ಹಿಂದೆ ಬಳ್ಳಾರಿ ನಗರದಲ್ಲಿ ಯಾವುದೇ ರೀತಿಯ ಇಂತಹ ವ್ಯವಸ್ಥೆ ಇರಲಿಲ್ಲ, ಮುಂದಿನ ದಿನಗಳಲ್ಲಿ ದಿನದ 24 ಗಂಟೆಯೂ ಸಾರ್ವಜನಿಕರಿಗೆ ಪೊಲೀಸ್ ಸೇವೆಯನ್ನು ಒದಗಿಸುವ ಉದ್ದೇಶವಿದೆ ಎಂದರು.
ನಾಗರಿಕರ ಹಿತರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಕಳೆದ ವರ್ಷ ನಗರದಲ್ಲಿ ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆ-2017ಗೆ ಒಳಪಡುವ 550 ಕಮರ್ಷಿಯಲ್ ಸ್ಥಳಗಳನ್ನು ಗುರುತಿಸಲಾಗಿದೆ. ನಾಳೆಯಿಂದಲೇ ಆ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸುವುದರ ಕುರಿತು ನೋಟಿಸ್ ಹೊರಡಿಸಲಾಗುತ್ತದೆ. ಒಂದು ತಿಂಗಳ ಅವಧಿಯಲ್ಲಿ ಈ ಕಾರ್ಯ ಸಂಪೂರ್ಣವಾಗಲಿದೆ. ಇದರ ಪ್ರಕಾರ 100 ರಿಂದ 500 ಜನ ಒಂದು ಕಡೆ ಸೇರುವಂತಹ ಸ್ಥಳಗಳಿಗೆ ಈ ಕಾಯ್ದೆ ಅನ್ವಯವಾಗುತ್ತದೆ. ಕಾಯ್ದೆ ಅನ್ವಯ ಸಿನಿಮಾ ಥಿಯೇಟರ್, ಪೆಟ್ರೋಲ್ ಬಂಕ್, ಶಾಲೆ-ಕಾಲೇಜು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಕಲ್ಯಾಣ ಮಂಟಪ್ಪ, ಚರ್ಚ್, ಆಸ್ಪತ್ರೆಗಳು, ಕಾಂಪ್ಲೆಕ್ಸ್‍ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಅವರು ಸೂಚಿಸಿದರು.

ದಂಡದ ವಿವರ;
ಸಿಸಿ ಕ್ಯಾಮೆರಾ ಅಳವಡಿಸದಿರುವವರಿಗೆ ಮೊದಲ ಬಾರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಒಂದು ತಿಂಗಳ ಅವಧಿಯಲ್ಲಿ ಅಳವಡಿಸದಿದ್ದಲ್ಲಿ 5 ಸಾವಿರ ದಂಡ ವಿಧಿಸಲಾಗುತ್ತದೆ.ಎರಡನೇ ಬಾರಿ ನೋಟಿಸ್ ನೀಡಿದಾಗ 10 ಸಾವರಿ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿಯೂ ಸಹ ಇದೇ ರೀತಿ ಪುನರಾವರ್ತನೆಯಾದಲ್ಲಿ ಅಂತಹ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ತಾತ್ಕಾಲಿಕವಾಗಿ ಸೀಜ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಸೂಪರ್ವೈಸರ್ ಕಮಿಟಿ;
ಡಿವೈಎಸ್ಪಿ, ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಕಮಿಷನರ್,ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿ ಒಂದು ಸೂಪರ್ವೈಸರ್ ಕಮಿಟಿಯನ್ನು ಮಾಡಿಕೊಂಡು ಸಿಸಿ ಕ್ಯಾಮೆರಾಗಳ ಕಾರ್ಯನಿರ್ವಹಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯುವುದರ ಜೊತೆಗೆ ದಂಡವಿಧಿಸುವ ಕಾರ್ಯ ಮಾಡಲಿದ್ದಾರೆ ಎಂದು ಹೇಳಿದರು.

ಸೆಕ್ಟೋರಿಯಲ್ ಕಮಿಟಿ;
ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಐದಾರು ಜನ ಸೇರಿಕೊಂಡು ಒಂದು ತಂಡ ತಯಾರು ಮಾಡಿಕೊಳ್ಳಿ, ನಿಮ್ಮ ನಿಮ್ಮ ಏರಿಯಾಗಳಲ್ಲಿ ಎಲ್ಲಿ ಸಿಸಿ ಕ್ಯಾಮೆರಾ ಅವಶ್ಯಕತೆಯಿದೆ ಎನ್ನವುದನ್ನು ಪೊಲೀಸರ ಗಮನಕ್ಕೆ ತರುವ ಕೆಲಸವನ್ನು ಮಾಡಿ. ಇದಕ್ಕೆ ಕಾಯ್ದೆಯಲ್ಲಿ ಅವಕಾಶವಿದೆ. ಒಂದೆರೆಡು ತಿಂಗಳಿಗೊಮ್ಮೆ ನೀವು ಓಡಾಡುವ ಪ್ರದೇಶಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಆಯಾ ಪೊಲೀಸ್ ಠಾಣೆಯ ಅಧಿಕಾರಿಗಳ ಗಮನಕ್ಕೆ ತನ್ನಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕೌಲ್‍ಬಜಾರ್ ಸಿಪಿಐ ಸುಭಾಷ್ ಚಂದ್ರ, ಸಂಚಾರಿ ಪೊಲೀಸ್ ಇನ್ಸ್‍ಪೆಕ್ಟರ್ ನಾಗರಾಜ ಎಂ ಮಾಡಳ್ಳಿ, ಬ್ರೂಸ್‍ಪೇಟೆ ಸಿಪಿಐ ಆರ್.ನಾಗರಾಜ,ಬಳ್ಳಾರಿ ಗ್ರಾಮಾಂತರ ಸಿಪಿಐ ಬಿ,ನಿರಂಜನ್,ಗಾಂಧಿನಗರ ಸಿಪಿಐ ಹಾಲೇಶ್, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here