ಸಂಡೂರು. ರೋಗ ಹಲವಾರು ಕಾರಣಗಳಿಗೆ ಬರುತ್ತವೆ ಅದರೆ ಅವು ಬರದಂತೆ ತಡೆಯುವುದು ಒಂದು ನಿಯಮವಾದರೆ ಮತ್ತೊಂದು ಬಂದ ತಕ್ಷಣ ಚಿಕಿತ್ಸೆ ಪಡೆಯಲು ಮುಂದಾದರೆ ಕ್ಷಯದಂತಹ ರೋಗವನ್ನು ಈ ದೇಶ ಬಿಟ್ಟು ತೊಲಗಿಸಲು ಸಾಧ್ಯವಾಗುತ್ತದೆ ಎಂದು ಡಾ. ಫರಾನಾ ಅಹ್ಮದ್ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲು ಹೋಬಳಿಯ ತೋರಣಗಲ್ಲಿನಲ್ಲಿ ವೈರಾಡ್ ಟಿ.ಬಿ. ರೀಚ್ ಯೋಜನೆ ಮತ್ತು ಸ್ಪೂರ್ತಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳು, ಆರೋಗ್ಯ ಇಲಾಖೆಯ ಸಂಯುಕ್ತಾಶ್ಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆಯ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ ಈಗಾಗಲೇ ತೋರಣಗಲ್ಲು ಮತ್ತು ತೋರಣಗಲ್ಲು ರೈಲ್ವೆ ನಿಲ್ದಾಣದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ಮಾಡಲಾಗಿದ್ದು ಇದರಲ್ಲಿ ಅನುಮಾನ ಬಂದ 34 ಜನರ ಟಿ.ಬಿ ಲಕ್ಷಣ ಉಳ್ಳ ಜನರ ಕಫ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ 2 ಪಾಜಿಟೀವ್ ಬಂದ ಪರಿಣಾಮ ಸರ್ಕಾರ ಅವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದೆ,
ಅದ್ದರಿಂದ ಯಾರಾದರೂ ಕ್ಷಯ ರೋಗದ ಲಕ್ಷಣಗಳು ಕಂಡ ಬಂದ ತಕ್ಷಣ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿದರೆ ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ, ಅದರಲ್ಲಿ ರೋಗಬರದಂತೆ ತಡೆಯಲು ಪ್ರಯತ್ನ ಮಾಡುವುದು ಮತ್ತು ರೋಗ ಬಂದಾಗ ತಕ್ಷಣ ಚಿಕಿತ್ಸೆ ಪಡೆದರೆ ಅದು ಹರಡದಂತೆ ತಡೆಯಲು ಸಹಕಾರಿಯಾಗುತ್ತದೆ, ಇಂತಹ ರೋಗವನ್ನು ಇಡೀ ದೇಶದಿಂದಲೇ ಮುಕ್ತ ಗೊಳಿಸಲು ಆರೋಗ್ಯ ಇಲಾಖೆ ಪಣ ತೊಟ್ಟಿದೆ, ಅದರೆ ಅದಕ್ಕೆ ಸಾರ್ವಜನಿಕರ ಸಹಕಾರಿ ಅತಿ ಅಗತ್ಯವಾಗಿದೆ ಎಂದರು.