ಜಿಲ್ಲೆಯಾದ್ಯಂತ ಕೋವಿಡ್ ಕೇರ್ ಆಸ್ಪತ್ರೆಗಳ ಆರಂಭಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ 1 ಸಾವಿರ ಹಾಸಿಗೆಯ ತಾತ್ಕಾಲಿಕ ಆಸ್ಪತ್ರೆ, ಕೋವಿಡ್ ಕೇರ್ ಆಸ್ಪತ್ರೆಗಳಿಗೆ ವೈದ್ಯ ಸಿಬ್ಬಂದಿಗಳ ತಾತ್ಕಾಲಿಕ ನೇಮಕ ಆರಂಭ

0
102

ಬಳ್ಳಾರಿ,ಮೇ04: ಬಳ್ಳಾರಿ ಜಿಲ್ಲಾಡಳಿತದಿಂದ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕೋವಿಡ್ ಕೇರ್ ಆಸ್ಪತ್ರೆಗಳನ್ನು ತೆರೆಯಲು ನಿರ್ಧರಿಸಿದೆ. ಇದರ ಜೊತೆಗೆ ತೋರಣಗಲ್ ಬಳಿಯ ಜಿಂದಾಲ್ ಎದುರುಗಡೆಯ ವಿಶಾಲ ಮೈದಾನದಲ್ಲಿ 1 ಸಾವಿರ ಹಾಸಿಗೆ ಸೌಕರ್ಯವುಳ್ಳ ತಾತ್ಕಾಲಿಕ ಆಸ್ಪತ್ರೆಯು ಆರಂಭಿಸಲಾಗುತ್ತಿದೆ. ಈ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ತಜ್ಞವೈದ್ಯರು,ವೈದ್ಯರು ಸೇರಿದಂತೆ ವಿವಿಧ ಹುದ್ದೆಗಳಿಗೆ ಸಿಬ್ಬಂದಿಯ ಅಗತ್ಯತೆ ಇರುವುದರಿಂದ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲಿನ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಂದರ್ಶನ ಪ್ರಕ್ರಿಯೆಯು ಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರರ ಕಚೇರಿಯಲ್ಲಿ ಆರಂಭವಾಗಿದ್ದು, ಮೆ11ರವರೆಗೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ1ರವರೆಗೆ ನಡೆಯಲಿದ್ದು, ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಂದರ್ಶನದ ವೇಳೆ ಮೂಲ ದಾಖಲೆಗಳನ್ನು ಒಂದು ಸೆಟ್ ನಕಲು ಪ್ರತಿ ಸಲ್ಲಿಸುವುದು. ಈ ನೇಮಕಾತಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರವಾಗಿದ್ದು ಖಾಯಂ ನೌಕರಿಯಾಗಿರುವುದಿಲ್ಲ. ನಿಯಮ ಮತ್ತು ಷರತ್ತುಗಳನ್ನು ಸಂದರ್ಶನದಲ್ಲಿ ತಿಳಿಸಲಾಗುವುದು. ನೇಮಕಾತಿಯ ನಂತರ ಕಾರ್ಯನಿರ್ವಹಿಸುವ ಸ್ಥಳ, ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಇರಬಹುದಾಗಿದೆ. ಗುತ್ತಿಗೆ ಅವಧಿ ಆರು ತಿಂಗಳುಗಳಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಜಿಂದಾಲ್ ಸಂಜೀವಿನಿ ಸಾವಿರ ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ, ತೋರಣಗಲ್ಲಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಊಟ, ವಸತಿ ಉಚಿತವಾಗಿ ಕಲ್ಪಿಸಲಾಗುವುದು. ಜಿಲ್ಲಾ ಆಸ್ಪತ್ರೆ, ವಿಮ್ಸ್ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶುಶ್ರ್ರೂಷಕರಿಗೆ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿಗೆ ಅವಶ್ಯಕತೆ ಇದ್ದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಪರಿಗಣಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಹುದ್ದೆಗಳ ವಿವರ: ಫಿಸಿಶಿಯನ್(21), ಅರಿವಳಿಕೆ ತಜ್ಞರು(16), ಪ್ರಸೂತಿ ಮತ್ತು ಸ್ರೀರೋಗ ತಜ್ಞರು(1), ಸಾಮಾನ್ಯ ಔಷಧ, ಉಸಿರಾಟ ಔಷಧ, ಕಿವಿ ಮೂಗು ಗಂಟಲು ತಜ್ಞರು(20), ಫಿಸಿಯೋ ಥೆರಪಿಸ್ಟ್(6), ಸ್ಟಾಫ್ ನರ್ಸ್(146), ಪ್ರಯೋಗಾಲಯ ತಜ್ಞರು(39), ಫಾರ್ಮಾಸಿಸ್ಟ್(12), ಕ್ಷ-ಕಿರಣ ತಜ್ಞರು(13), ಡಿ ಗ್ರೂಪ್ ನೌಕರರು(141) ಹಾಗೂ ಚಾಲಕರು (4) ಹುದ್ದೆಗಳಿಗೆ ಆಯಾ ತಹಶೀಲ್ದಾರ್ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ತಜ್ಞವೈದ್ಯರಿಗೆ ಮಾಸಿಕ 2.50 ಲಕ್ಷ ವೇತನ ನಿಗದಿ ಮಾಡಲಾಗಿದೆ.
ಜಿಂದಾಲ್ ಆಸ್ಪತ್ರೆಗಾಗಿ ತಜ್ಞ ವೈದ್ಯರು(31), ವೈದ್ಯರು(75), ಶುಶ್ರೂಷಕರು(155), ಶುಶ್ರೂಷಕ ಮೇಲ್ವಿಚಾರಕರು(19), ತಲಾ 12 ರೇಡಿಯಾಲಜಿ ತಂತ್ರಜ್ಞರು ಮತ್ತು ಫಿಸಿಯೋಥೆರಪಿಸ್ಟ್‍ಗಳು, 300 ಗ್ರೂಪ್ ಡಿ ನೌಕರರೊಂದಿಗೆ ಫಾರ್ಮಾಸಿಸ್ಟ್, ಆಪ್ತಸಮಾಲೋಚಕರು, ಸ್ಟೋರ್ ಕೀಪರ್‍ಗಳು, ಬಯೋ ಮೆಡಿಕಲ್ ಎಂಜಿನಿಯರ್‍ಗಳು ಹಾಗೂ ಆಹಾರ ತಜ್ಞರ ನೇಮಕವೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿರುವ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಮೊದಲ ಬಂದವರಿಗೆ ಮೊದಲ ಆದ್ಯತೆ ಮೇರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.08392-277100 ಗೆ ಸಂಪರ್ಕಿಸಬಹುದಾಗಿದೆ

LEAVE A REPLY

Please enter your comment!
Please enter your name here