ಕೋವಿಡ್ ನಿಯಂತ್ರಣ ಕುರಿತು ತಜ್ಞ ವೈದ್ಯರ ಸಲಹೆ ಕೇಳಿದ ಸಿಎಂ, ಬಳ್ಳಾರಿ ತಜ್ಞವೈದ್ಯ ಡಾ.ಶ್ರೀನಿವಾಸಲು ಭಾಗಿ ವೈದ್ಯಕೀಯ ಸಿಬ್ಬಂದಿ ಅಮೂಲ್ಯ ಆಸ್ತಿ:ಸಿಎಂ ಬಿಎಸ್‍ವೈ

0
106

ಬಳ್ಳಾರಿ, ಕೋವಿಡ್ ಕರ್ತವ್ಯ ನಿರತ ವೈದ್ಯರು ಹಾಗೂ ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣದಿಂದ ವರ್ಚುವಲ್ ಮೂಲಕ ಶನಿವಾರ ಸಂವಾದ ನಡೆಸಿದರು ಮತ್ತು ಕೋವಿಡ್ ನಿಯಂತ್ರಣಕ್ಕೆ ತಜ್ಞವೈದ್ಯರ ಸಲಹೆಗಳನ್ನು ಈ ಸಂದರ್ಭದಲ್ಲಿ ಕೇಳಿದರು.
ಬೆಂಗಳೂರಿನ ಡಾ.ಲಕ್ಷ್ಮೀಪತಿ, ಮಣಿಪಾಲ್‍ನ ಡಾ. ಶಶಿಕಿರಣ ಉಮಾಕಾಂತ,ಬಳ್ಳಾರಿಯ ಅರಿವಳಿಕೆ ತಜ್ಞರು ಹಾಗೂ ತೀವ್ರಚಿಕಿತ್ಸಾ ತಜ್ಞರಾದ ಡಾ.ಶ್ರೀನಿವಾಸಲು,ವಿಜಯಪುರದ ಡಾ.ಮೀನಾಕ್ಷಿ ಮುತ್ತಪ್ಪನವರ್,ಮಂಗಳೂರಿನ ಡಾ.ಶರತ್ ಬಾಬು,ಗೋಕಾಕ್ ನ ಡಾ.ಮಹಾಂತೇಶ ಶೆಟ್ಟಪ್ಪನವರ್,ಅರಕಲಗೂಡಿನ ಡಾ.ದೀಪಕ್, ಮೈಸೂರಿನ ಡಾ.ತ್ರೀವೇಣಿ,ತುಮಕೂರಿನ ಡಾ.ಭಾನುಪ್ರಕಾಶ,ಕಲಬುರಗಿಯ ಡಾ.ಧನರಾಜ್,ತೀರ್ಥಹಳ್ಳಿಯ ಡಾ.ಗಣೇಶ ಭಟ್ ಅವರು ಈ ವರ್ಚುವಲ್ ಸಂವಾದದಲ್ಲಿ ಭಾಗಿಯಾಗಿದ್ದರು.
ಸಂವಾದದಲ್ಲಿ ಭಾಗಿಯಾಗಿದ್ದ ತಜ್ಞವೈದ್ಯರುಗಳಿಗೆ ತಮ್ಮ ಜಿಲ್ಲೆಗಳಲ್ಲಿ ಕೋವಿಡ್ ಸೊಂಕಿನ ಸ್ಥಿತಿಗತಿ ಹೇಗಿದೆ..?,ಆಕ್ಸಿಜನ್, ಹಾಸಿಗೆಗಳ ಲಭ್ಯತೆ, ಔಷಧಿಗಳ ಲಭ್ಯತೆ…?, ಸೊಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು, ಗ್ರಾಮೀಣ ಭಾಗದಲ್ಲಿ ಸೊಂಕು ಹರಡದಂತೆ ನಿಯಂತ್ರಿಸಲು ಯಾವ ಸಲಹೆಗಳನ್ನು ನೀಡುವಿರಿ, ತಾವು ತಜ್ಞವೈದ್ಯರಾಗಿ ಕೋವಿಡ್ ಸೊಂಕಿತರಿಗೆ ಯಾವ ರೀತಿಯ ಚಿಕಿತ್ಸೆ ನೀಡಿದ್ದೀರಿ ಮತ್ತು ಸಲಹೆಗಳೇನು, ತಮಗೆ ಸೊಂಕು ತಗುಲಿದ ನಂತರ ಗುಣಮುಖರಾಗಿದ್ದೀರಿ;ಈಗ ಆರೋಗ್ಯ ಹೇಗಿದೆ ಎಂಬುದು ಸೇರಿದಂತೆ ವಿವಿಧ ರೀತಿಯ ಪ್ರಶ್ನೆಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಜ್ಞ ವೈದ್ಯರುಗಳೊಂದಿಗೆ ಸಂವಾದ ನಡೆಸಿದರು.
ಸಂವಾದದಲ್ಲಿ ಪಾಲ್ಗೊಂಡಿದ್ದ ಬಳ್ಳಾರಿಯ ಅರಿವಳಿಕೆ ತಜ್ಞರು ಹಾಗೂ ತೀವ್ರಚಿಕಿತ್ಸಾ ತಜ್ಞರಾದ ಡಾ.ಶ್ರೀನಿವಾಸಲು ಅವರು ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ,ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ಹಾಗೂ ಇನ್ನೀತರ ಪ್ರಮುಖ ವಿಷಯಗಳನ್ನು ಮುಖ್ಯಮಂತ್ರಿಗಳ ಎದುರು ಬಿಚ್ಚಿಟ್ಟರು.
ಜಿಲ್ಲೆಯಲ್ಲಿ ಸೊಂಕಿನ ತೀವ್ರತೆ ಜಾಸ್ತಿ ಇರುವುದರಿಂದ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾಡಳಿತವು ವಿವಿಧ ರೀತಿಯ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಾಡುತ್ತಿದೆ.
ಬಳ್ಳಾರಿ ಜಿಲ್ಲೆಯಲ್ಲಿ 207 ಐಸಿಯು ಬೆಡ್‍ಗಳಿದ್ದು,ಅವುಗಳಲ್ಲಿ 101 ವೆಂಟಿಲೇಟರ್ ಸೌಲಭ್ಯಗಳಿವೆ. 1268 ಎಚ್‍ಡಿಯು/ಎಚ್‍ಎಫ್‍ಯು ಸೌಲಭ್ಯವಿರುವ ಬೆಡ್‍ಗಳಿವೆ ಮತ್ತು 378 ಸಾಮಾನ್ಯ ಹಾಸಿಗೆಗಳಿವೆ ಎಂದು ಅವರು ವಿವರಿಸಿದರು.
ಬಳ್ಳಾರಿಯ ಜಿಂದಾಲ್‍ನಲ್ಲಿ ನಿತ್ಯ 1ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದ್ದು,ಇಲ್ಲಿಂದಲೇ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ನಮ್ಮ ಜಿಲ್ಲೆಗೆ ನಿತ್ಯ 33.7 ಕೆಎಲ್ ಆಕ್ಸಿಜನ್ ಅಗತ್ಯವಿದ್ದು,ಯಾವುದೇ ರೀತಿಯ ಆಕ್ಸಿಜನ್ ಸಮಸ್ಯೆ ನಮ್ಮ ಜಿಲ್ಲೆಯಲ್ಲಿ ಇಲ್ಲ ಎಂದು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಸಮನ್ವಯದ ಮೂಲಕ ಅಗತ್ಯ ಇರುವೆಡೆ ಆಕ್ಸಿಜನ್ ಒದಗಿಸುವ ಕೆಲಸವನ್ನು ಬಳ್ಳಾರಿ ಜಿಲ್ಲಾಡಳಿತ ಮಾಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್,ಔಷಧ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ ತಜ್ಞವೈದ್ಯ ಡಾ.ಶ್ರೀನಿವಾಸಲು ಅವರು ಜಿಂದಾಲ್ ಎದುರುಗಡೆ 1 ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು,ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದನ್ನು ಸಿಎಂ ಅವರ ಗಮನಕ್ಕೆ ತಂದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ತಾತ್ಕಾಲಿಕ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದಾಗಿಯೂ ನಿರೀಕ್ಷಿಸಿದಷ್ಟು ಅರ್ಜಿಗಳು ಬರದ ಹಿನ್ನೆಲೆಯಲ್ಲಿ ಕೊರತೆಯಾದ ಕಾರಣ ವಿಮ್ಸ್‍ನಿಂದ ವೈದ್ಯರು ಹಾಗೂ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದರು. ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅರಿವಳಿಕೆ ಹಾಗೂ ತೀವ್ರ ಚಿಕಿತ್ಸಾ ತಜ್ಞವೈದ್ಯರಾಗಿ ನೂರಾರು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿರುವ ಡಾ.ಶ್ರೀನಿವಾಸಲು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇದೇ ರೀತಿಯ ಕಾರ್ಯವನ್ನು ಮುಂದುವರೆಸುವ ಹಾಗೂ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಕೈಜೋಡಿಸುವಂತೆ ತಿಳಿಸಿದರು.
ಇದೇ ರೀತಿ ಇನ್ನೀತರ ತಜ್ಞ ವೈದ್ಯರೊಂದಿಗೂ ಅವರು ಸಂವಾದ ನಡೆಸಿದರು.
*ಅಂತಿಮ ವರ್ಷದ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಲು ನಿರ್ಧಾರ: ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಕೆಲಸಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದರು.
ನುರಿತ ವೈದ್ಯರ ಮುಂದಾಳತ್ವದಲ್ಲಿ ಅಂತಿಮ ವರ್ಷದ ವೈದ್ಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು;ಈ ಮೂಲಕ ಸಿಬ್ಬಂದಿ ಕೊರತೆಯೂ ನೀಗಲಿದೆ ಹಾಗೂ ಈಗ ವೈದ್ಯರ ಮೇಲೆ ಉಂಟಾಗಿರುವ ಒತ್ತಡವೂ ಕಡಿಮೆಯಾಗಲಿದೆ ಎಂದರು.
ತಜ್ಞವೈದ್ಯರು ಸಹ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ ಕೋವಿಡ್ ಚಿಕಿತ್ಸೆ ಎಂಬುದು ಸಾಮಾನ್ಯ ರೋಗಗಳಿಗೆ ನೀಡಿದ ಚಿಕಿತ್ಸೆ ರೀತಿಯಲ್ಲ;ಇದು ಸಂಪೂರ್ಣ ವಿಭಿನ್ನವಾಗಿದ್ದು,ಅಂತಿಮ ವರ್ಷದ ವೈದ್ಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಬಳಸಿಕೊಂಡರೇ ಒಳ್ಳೆಯದು ಎಂದರು.

ಸಂವಾದ ನಡೆಸಿ;ಒತ್ತಡ ನೀಗಿಸಿ;
ಕೋವಿಡ್ ಶುರುವಾದಾಗಿನಿಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಹಳಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ;ಅವರಿಗೆ ಒತ್ತಡ ನೀಗಿಸುವ ಕೆಲಸವಾಗಬೇಕಿದೆ.ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಂವಾದ ನಡೆಸುವ ಮತ್ತು ಸಮಸ್ಯೆ ಆಲಿಸುವ ಹಾಗೂ ಸ್ಪಂದಿಸುವ ಕೆಲಸವಾಗಬೇಕು ಎಂದು ತಜ್ಞವೈದ್ಯರು ಅಭಿಪ್ರಾಯ ಮಂಡಿಸಿದರು.
ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಕೂಡ ಸಮ್ಮತಿ ವ್ಯಕ್ತಪಡಿಸಿ,ಶೀಘ್ರ ಈ ರೀತಿಯ ಸಂವಾದ ಏರ್ಪಡಿಸಲಾಗುವುದು ಎಂದರು.

ವೈದ್ಯಕೀಯ ಸಿಬ್ಬಂದಿ ನಾಡಿನ ಅಮೂಲ್ಯವಾದ ಆಸ್ತಿ:
ಕೋವಿಡ್ ಸೊಂಕಿನ ಅಪಾಯವನ್ನು ಲೆಕ್ಕಿಸದೇ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅಮೂಲ್ಯ ಆಸ್ತಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಣ್ಣಿಸಿದರು.
ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆ ಸರಕಾರ ಬದ್ಧವಿದೆ.ಸೊಂಕು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮಾನವೀಯತೆಯ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ ಸಿಎಂ ಬಿಎಸ್‍ವೈ ಅವರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here