ಶನಿವಾರ ಸಂಜೆ ಯಿಂದ ಸುರಿದ ಭಾರಿ ಮಳೆಗೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದ ಬಳಿ ಗಂಗೆಹಳ್ಳ ಉಕ್ಕಿ ಹರಿಯುತ್ತಿದ್ದು ಇದರಿಂದಾಗಿ ತೊರಣಗಲ್ಲು-ಮೈಲಾರ ರಾಜ್ಯ ಹೆದ್ದಾರಿ ಮೇಲೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಆದರೆ ಯಾವುದೆ ಪ್ರಾಣಪಾಯವಾಗಲಿ, ಅವಘಡ ಸಂಬವಿಸಿಲ್ಲ. ಸುರಿಯುವ ಮಳೆಯನ್ನು ಲೆಕ್ಕಿಸದೆ ಜನರು ಹಳ್ಳ ಭರ್ತಿಯಾಗಿ ಹರಿಯುವುದನ್ನು ಕಣ್ಣತುಂಬಿಕೊಂಡರು.
ಹೆದ್ದಾರಿ ಮೇಲೆ ಹಳ್ಳ ಉಕ್ಕಿದ ಪರಿಣಾಮ ಬೈಕ್, ಸಣ್ಣ ಕಾರುಗಳು ಬಹು ಹೊತ್ತಿನ ತನಕವೂ ರಸ್ತೆ ಮೇಲೆ ನಿಂತಿದ್ದವು. ಟ್ರಾಕ್ಟರ್, ಲಾರಿಗಳ ಚಾಲಕರು ಹರಸಾಹಸ ಪಟ್ಟು ತಮ್ಮವಾಹನಗಳನ್ನು ಹಳ್ಳ ಧಾಟಿಸಿದರು.
ತಾಲೂಕಿನ ಬಹುತೇಕ ಕಡೆಗಳಲ್ಲಿ ಶನಿವಾರ ಸಂಜೆ ಯಿಂದ ಆರಂಭವಾದ ಮಳೆ ರಾತ್ರಿ ಒಂಭತ್ತು ಗಂಟೆ ತನಕವೂ ಸುರಿಯಿತು. ಇತ್ತ ಗಂಗೆಹಳ್ಳ ಹರಿದು ಬರುವ ಚಿಲಕನಹಟ್ಟಿ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದಿದೆ. ಅರಣ್ಯ ಮತ್ತು ಬೆಟ್ಟದ ಸಾಲುಗಳಿಂದ ಆಪಾರ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದು ಹಳ್ಳ ಸೇರಿದೆ. ಹೀಗಾಗಿ ಗಂಗೆಹಳ್ಳ ಭೊರ್ಗೆರೆಯಿತು.
ಗಂಗೆಹಳ್ಳದ ಮೇಲೆಯೇ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಿಸಿಲ್ಲ. ಕೇವಲ ಜಾರು ಬಂಡೆಯನ್ನು ನಿರ್ಮಿಸಲಾಗಿದೆ. ಪ್ರತಿ ಮಳೆಗಾಲದಲ್ಲಿ ಗಂಗೆಹಳ್ಳ ಭರ್ತಿ ಆಗಿ ಹರಿಯುವುದು ವಾಡಿಕೆ. ಆ ವೇಳೆ ಹೆದ್ದಾರಿ ಮೇಲೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತೆ. ಹಲವು ಬಾರಿ ಮಧ್ಯರಾತ್ರಿ ಹಳ್ಳ ಭರ್ತಿಯಾದಾಗ ಹೆದ್ದಾರಿ ಮೇಲಿನ ಸಂಚಾರ ಬಲು ಅಪಾಯಕಾರಿ. ಹೀಗಾಗಿ ಇಲ್ಲಿ ಸೇತುವೆ ನಿರ್ಮಿಸಿದರೆ ಉತ್ತಮ ಎನ್ನುತ್ತಾರೆ ದಶಮಾಪುರ ಗ್ರಾಮದ ಮುಖಂಡರಾದ ಬಸ್ ಏಜೆಂಟ್ ನಾಗರಾಜ.
ಈ ಹಳ್ಳದ ನೀರು ಹಗರಿಬೊಮ್ಮನಹಳ್ಳಿ ಪಟ್ಟಣ ವ್ಯಾಪ್ತಿಯ ಐತಿಹಾಸಿಕ ಚಿಂತ್ರಪಳ್ಳಿ ಕೆರೆಗೆ ಸೇರುತ್ತೆ.
ಹುಳ್ಳಿಪ್ರಕಾಶ
ಸಂಪಾದಕರು
ಬಳ್ಳಾರಿ ಸುನಾಮಿಪತ್ರಿಕೆ
9448234961