ಮಡಿಕೇರಿ ಜ.05 :-ಕರ್ನಾಟಕ ರಾಜ್ಯ ‘ಸಹಕಾರ ಮಹಾ ಮಂಡಳದ ನಡಿಗೆ ಸಹಕಾರ ಸಂಘಗಳ ಕಡೆಗೆ’ ಅಭಿಯಾನವು ಇತ್ತೀಚೆಗೆ ಆರಂಭವಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಯೂನಿಯನ್ ಸಿಬ್ಬಂದಿಗಳು ಹಾಗೂ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ನ ಸಿಬ್ಬಂದಿಗಳು, ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಹಕಾರ ಸಂಘ/ ಸಂಸ್ಥೆಗಳಿಗೆ ಭೇಟಿ ನೀಡಿ 2022 ನೇ ಸಾಲಿನ ಕ್ಯಾಲೆಂಡರ್, ಡೈರಿ, ವಾರಪತ್ರಿಕೆ ನೀಡಿ ಸಹಕಾರ ಸಂಘ/ ಸಂಸ್ಥೆಗಳ ಮಾಹಿತಿ ಪಡೆದುಕೊಳ್ಳಲಾಯಿತು.
ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಯೂನಿಯನ್ಗಳು ಹಾಗೂ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ಗಳನ್ನು ಮಾಹಿತಿ ಕೇಂದ್ರವನ್ನಾಗಿಸಲು ಸಹಕಾರ ಸಂಘ/ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರಾದ ಡಾ.ಆರ್.ಎಸ್.ರೇಣುಕ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸಹಕಾರ ವಾರಪತ್ರಿಕೆ, ವಿಶೇಷ ಸಂಚಿಕೆ, ಕ್ಯಾಲೆಂಡರ್ ಹಾಗೂ ಡೈರಿಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಎಂದು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ನ ಪ್ರಾಂಶುಪಾಲರಾದ ಡಾ.ರೇಣುಕಾ ಆರ್.ಎಸ್ ತಿಳಿಸಿದ್ದಾರೆ.