ಕೊಟ್ಟೂರು;ನಿತ್ಯದ ಜೀವನಕ್ಕೆ ಆರೋಗ್ಯ ಹಾಗೂ ಜೀವನಾಂಶಕ್ಕೆ ಫಲವತ್ತಾದ ಈ ಮಣ್ಣೇ ನಮಗೆ ಆಶ್ರಯ ಹಾಗಾಗಿ ಈ ನೆಲವನ್ನು ಪೂಜಿಸಿ ಗೌರವಿಸಬೇಕು ಹಾಗೂ ಸೂಕ್ತ ರೀತಿಯಲ್ಲಿ ಕಾಪಾಡಬೇಕು ಎಂದು ವೀರಭದ್ರೇಶ್ವರ ಕಲಾ ತಂಡದ ಮುಖ್ಯಸ್ಥ ಕೆ.ಶಿವರಾಜ್ ಹೇಳಿದರು.
ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ವೀರಭದ್ರೇಶ್ವರ ಕಲಾ ತಂಡದವರು ಗುರುವಾರ ನಡೆಸಿದ ನಮ್ಮ ನಮ್ಮ ಮಣ್ಣು ನಮ್ಮ ದೇಶ ಅಭಿಯಾನದಡಿಯಲ್ಲಿ ಅಮೃತ ಕಳಸ ಉತ್ಸವಕ್ಕೆ ಚಾಲನೆ ನೀಡಿ ನಮ್ಮ ನಾಡಿನ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುವುದಕ್ಕೆ ಹಾಗೂ ನಾಡಿನ ಪವಿತ್ರ ನೆಲಕ್ಕೆ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವ ಈ ಅಭಿಯಾನಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಕೆ.ಮಂಜುನಾಥ್, ಕೆ.ಕೊಟ್ರೇಶ್, ಶ್ರೀಕಾಂತ್, ಅಜ್ಜಯ್ಯ, ಪ್ರವೀಣ ನಾಗರಾಜ್, ವೀರಭದ್ರಪ್ಪ, ಗುರು ಹಾಗೂ ಕೆ.ಸಂತೋಷ್ ಮುಂತಾದವರು ಇದ್ದರು.