ಮೈಲಾರ ಕಾರ್ಣಿಕೋತ್ಸವ ಪೂರ್ವಭಾವಿ ಸಿದ್ಧತಾ ಸಭೆ, ಫೆ.8ರಿಂದ ಫೆ.19ರವರೆಗೆ ಕಾರ್ಣಿಕೋತ್ಸವ ಜಾತ್ರೆ, ಮೈಲಾರ ಕ್ಷೇತ್ರದ ಕಾರ್ಣಿಕೋತ್ಸವಕ್ಕೆ ಈ ಬಾರಿಯೂ ಸಾರ್ವಜನಿಕರ ನಿರ್ಬಂಧ:ಡಿಸಿ ಅನಿರುದ್ಧ ಶ್ರವಣ್

0
157

ಹೊಸಪೇಟೆ(ವಿಜಯನಗರ ಜಿಲ್ಲೆ),ಜ.21: ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವವು ಫೆ.8ರಿಂದ ಫೆ.19ರವರೆಗೆ ನಡೆಯಲಿದೆ.11 ದಿನಗಳ ಕಾಲ ನಡೆಯಲಿರುವ ಈ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಾರ್ವಜನಿಕರು,ಭಕ್ತಾದಿಗಳ ನಿರ್ಬಂಧ ವಿಧಿಸಲಾಗಿದೆ.
ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಅನಾರೋಗ್ಯದ ಹಿನ್ನೆಲೆ ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ದೇವಸ್ಥಾನದ ರೂಢಿ,ಸಂಪ್ರದಾಯದ ಪೂಜಾ ಕಾರ್ಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ಯಾವುದೇ ರೀತಿಯ ಆಡಚಣೆ ಇಲ್ಲದಂತೆ ಸುಸೂತ್ರವಾಗಿ ಜರುಗಲಿವೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಸಭೆಯಲ್ಲಿ ತಿಳಿಸಿದರು.
ಫೆ.8ರಿಂದ ಫೆ.19ರವರೆಗೆ ಮೈಲಾರ ಕ್ಷೇತ್ರದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜರುಗಲಿದ್ದು, ಫೆ.8ರಂದು ಕಂಕಣಧಾರಣೆ, ಫೆ.16ರಂದು ಹುಣ್ಣಿಮೆ,ಫೆ.18ರಂದು ಕಾರ್ಣಿಕೋತ್ಸವ ಮತ್ತು ಫೆ.19ರಂದು ಸರಪಳಿ ಪವಾಡ ಜರುಗಲಿವೆ ಎಂದು ತಿಳಿಸಿದ ಡಿಸಿ ಅನಿರುದ್ಧ ಶ್ರವಣ್ ಅವರು ಸಾರ್ವಜನಿಕರು ಮತ್ತು ಭಕ್ತಾದಿಗಳು 11 ದಿನಗಳ ಕಾಲ ಇತ್ತ ಬರದಂತೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಸಾರ್ವಜನಿಕರ ಪ್ರವೇಶ ನಿರ್ಬಂದಕ್ಕೆ ಅಗತ್ಯ ವ್ಯವಸ್ಥೆ ಕೈಗೊಳ್ಳಿ
ಮೈಲಾರ ಗ್ರಾಮಕ್ಕೆ ಸಾರ್ವಜನಿಕರು/ಭಕ್ತಾದಿಗಳು ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕುರುವತ್ತಿ,ಹ್ಯಾರಡ,ಹೊಳಲು,ಹಾವೇರಿ,ಹೊಳಕಡೆ,ಡೆಂಕನಮರಡಿಯ ಎಲ್ಲ ದಾರಿಗಳಿಗೆ ಸೂಕ್ತ ಬ್ಯಾರಿಕೆಡ್ ವ್ಯವಸ್ಥೆ ಮಾಡಿಕೊಂಡು ಪ್ರವೇಶ ನಿರ್ಬಂಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಡಿಸಿ ಅನಿರುದ್ಧ ಶ್ರವಣ್ ಅವರು ಸೂಚಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಫೆ.8ರಿಂದ ಫೆ.19ರವರೆಗೆ ಮೈಲಾರಕ್ಕೆ ಬರುವುದರಿಂದ ಹೊರಡಗೆಯಿಂದ ಬಂದಂತ ಭಕ್ತಾದಿಗಳು ಗ್ರಾಮಕ್ಕೆ ಪ್ರವೇಶ ಮಾಡದಂತೆ ಅಗತ್ಯ ಕ್ರಮಜರುಗಿಸಬೇಕು ಎಂದು ತಿಳಿಸಿದ ಅವರು ದರ್ಶನಕ್ಕೂ ಸಹ ನಿರ್ಬಂಧ ವಿಧಿಸಲಾಗುತ್ತಿದ್ದು,ಈ ಕುರಿತು ಪ್ರತ್ಯೇಕ ಆದೇಶವನ್ನು ಜಿಲ್ಲಾಡಳಿತದಿಂದ ಹೊರಡಿಸಲಾಗುವುದು ಎಂದರು.
ಜಾತ್ರಾಪ್ರದೇಶದಲ್ಲಿ ಯಾವುದೇ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಡಿಸಿ ಅನಿರುದ್ಧ ಶ್ರವಣ್ ಅವರು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯ ಇರುವ ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಡೆಂಕನಮರಡಿ, ಕಾರ್ಣಿಕ ಮೈದಾನ, ಮೈಲಾರ ಗ್ರಾಮ ಸುತ್ತಲು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಬಂದೋಬಸ್ತ್ ಕೈಗೊಳ್ಳಬೇಕು. ಡೆಂಕನಮರಡಿ ಪ್ರದೇಶ, ಕಾಗಿನೆಲೆ ಮುಖ್ಯರಸ್ತೆಗೆ,ಮೈಲಾರ ದೇವಸ್ಥಾನದ ದ್ವಾರಬಾಗಿಲು ಹತ್ತಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಅವರು ತಿಳಿಸಿದರು.
ಆರೋಗ್ಯ ಸೇವೆ, ಸ್ವಚ್ಛತೆ ಮತ್ತು ನೈರ್ಮಲ್ಯೀಕರಣಕ್ಕೆ ಒತ್ತು ನೀಡಿ
ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡಿದ್ದ ಹೂವಿನಹಡಗಲಿ ಶಾಸಕರಾದ ಪಿ.ಟಿ.ಪರಮೇಶ್ವರ ನಾಯಕ್ ಅವರು ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವದಲ್ಲಿ ಆರೋಗ್ಯ ಸೇವೆ,ಸ್ವಚ್ಛತೆ ಮತ್ತು ನೈರ್ಮಲ್ಯೀಕರಣಕ್ಕೆ ವಿಶೇಷ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುರ್ತು ಚಿಕಿತ್ಸೆಗಾಗಿ ಎರಡು ತಾತ್ಕಾಲಿಕ ಆಸ್ಪತ್ರೆಗಳನ್ನು ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಿಟ್ಟುಕೊಳ್ಳಿ,ಬೇಕಾಗುವಷ್ಟು ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಬೇಕು ಮತ್ತು ಅಗತ್ಯವಿರುವ ಔಷಧಿಗಳು ಮತ್ತು ಆಂಬ್ಯುಲೆನ್ಸ್‍ಗಳನ್ನು ಸಜ್ಜಾಗಿಟ್ಟುಕೊಳ್ಳಿ ಎಂದರು.
ಮೈಲಾರ ಗ್ರಾಮದಲ್ಲಿ ಸ್ವಚ್ಚತೆಗಾಗಿ ಎಲ್ಲಾ ಅಗತ್ಯ ಕ್ರಮ ಜರುಗಿಸಲು ಸ್ಥಳೀಯ ಪಿಡಿಒ ಹಾಗೂ ತಾಪಂ ಇಒ ಅವರಿಗೆ ಸೂಚನೆ ನೀಡಿದ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರು ಗ್ರಾಮದಲ್ಲಿ ಶೇಕರಣೆಯಾಗಿರುವ ಎಲ್ಲಾ ತ್ಯಾಜ್ಯವನ್ನು ಸಾಗಿಸಲು ಅಗತ್ಯ ಕ್ರಮ ಜರುಗಿಸಬೇಕು.
ಗ್ರಾಮದ ಎಲ್ಲಾ ಬೀದಿಗಳು ಸ್ವಚ್ಚಾಗಿಡಲು, ಚರಡಿಗಳನ್ನು ಕ್ಲೀನ್ ಮಾಡಲು, ನಿತ್ಯ ಫಾಗಿಂಗ್ ಮಾಡಲು ಅಗತ್ಯ ಕ್ರಮ ಜರುಗಿಸಬೇಕು ಎಂದರು.
ಹೆಚ್ಚುವರಿ ಬಸ್‍ಗಳು,ವಾಹನಗಳು ಬಿಡದಂತೆ ಕ್ರಮ ಜರುಗಿಸಿ
ಫೆ.8ರಿಂದ ಫೆ.20ರವರೆಗೆ ಮೈಲಾರಕ್ಕೆ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ದಾವಣಗೇರೆ, ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಹೊಸಪೇಟೆ,ಬಳ್ಳಾರಿ,ಗದಗ,ರಾಯಚೂರು ಕಡೆಯಿಂದ ಮೈಲಾರ ಜಾತ್ರಾ ಸಂಬಂಧ ಹೆಚ್ಚುವರಿ ಬಸ್ಸುಗಳು ಹಾಗೂ ವಾಹನಗಳು ಬಿಡದಂತೆ ಅಗತ್ಯ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಡಿಸಿ ಅನಿರುದ್ಧ ಶ್ರವಣ್ ಅವರು ಖಡಕ್ ಸೂಚನೆ ನೀಡಿದರು ಮತ್ತು ಈ ಕುರಿತು ಸದರಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಪತ್ರಬರೆಯಲು ಅವರು ತಿಳಿಸಿದರು.
ಖಾಸಗಿ ಬಸ್ಸು, ಟ್ಯಾಕ್ಸಿ, ಕ್ಯಾಬ್, ಟೆಂಪೊ ಇತ್ಯಾದಿಗಳು ಸಂಚರಿಸದಂತೆ ಅಗತ್ಯ ಕ್ರಮ ಜರುಗಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಣಿಕ ನುಡಿಯು ಸಾಕಷ್ಟು ಸ್ಪಷ್ಟವಾಗಿ ಕೇಳುವಂತೆ ಅಗತ್ಯ ಇರುವ ದ್ವನಿವರ್ಧಕಗಳನ್ನು ಬಾಡಿಗೆಯಲ್ಲಿ ಪಡೆದುಕೊಂಡು ಫೆ.17ರೊಳಗೆ ಸಜ್ಜಾಗಿಡಿ ಎಂದು ಹೇಳಿದರು.
ಸಾರ್ವಜನಿಕರ ಪಾಲ್ಗೊಳ್ಳುವಿಕೆ ನಿರ್ಬಂಧ ಕುರಿತು ಹೆಚ್ಚಿನ ಪ್ರಚಾರಕ್ಕೆ ಸೂಚನೆ:
ಶ್ರೀ ಮೈಲಾರಲಿಂಗ ಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವ ಜಾತ್ರೆಯಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸಿರುವ ವಿಷಯದ ಕುರಿತು ಹೆಚ್ಚಿನ ಪ್ರಚಾರವನ್ನು ಮುದ್ರಣ,ವಿದ್ಯುನ್ಮಾನ ಮಾಧ್ಯಮಗಳು,ಸೋಶಿಯಲ್ ಮಿಡಿಯಾಗಳ ಮೂಲಕ ಮಾಡುವಂತೆ ಡಿಸಿ ಅನಿರುದ್ಧ ಶ್ರವಣ್ ಅವರು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಮೈಲಾರ ಕ್ಷೇತ್ರದ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ನಿರ್ಧಾರಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಆಗುವಂತೆ ನೋಡಿಕೊಳ್ಳಿ ಎಂದರು.
ಮೈಲಾರ ಗ್ರಾಮಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಹಿಂದಿನಿಂದಲೂ ಬಂದ ರೂಡಿ ಸಂಪ್ರದಾಯದ ಪೂಜಾ ಕಾರ್ಯಗಳನ್ನು ಯಾವುದೆ ಲೋಪವಾಗದಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಪಿ ಡಾ.ಅರುಣ ಎಸ್.ಕೆ, ಜಿಪಂ ಸಿಇಒ ಹರ್ಷಲ್ ಬೊಯರ್ ಅವರು ಮಾತನಾಡಿ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್,ಅಪರ ಜಿಲ್ಲಾಧಿಕಾರಿ ಮಹೇಶಬಾಬು, ಹರಪನಳ್ಳಿ ಸಹಾಯಕ ಆಯುಕ್ತರಾದ ಚಂದ್ರಶೇಖರಯ್ಯ, ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶರಾವ್, ಹಡಗಲಿ ತಹಸೀಲ್ದಾರ್ ಮಹೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here