ಸಾಹಿತ್ಯ ಲೋಕದಲ್ಲಿ ಮಕ್ಕಳಿಂದ ಹಿರಿಯರವರೆಗೆ ಆಪ್ತವಾಗಿ ನೆನಪಾಗುವ ಹೆಸರು “ಮುದ್ದಣ”

0
144

ಮುದ್ದಣ ಎಂದು ಪ್ರಖ್ಯಾತರಾದ ನಂದಳಿಕೆ ಲಕ್ಷ್ಮೀನಾರಣಪ್ಪನವರು ಕನ್ನಡ ಸಾಹತ್ಯಲೋಕದಲ್ಲಿ ಮಕ್ಕಳಿಂದ ಹಿರಿಯರವರೆಗೆ ಆಪ್ತವಾಗಿ ನೆನಪಾಗುವ ಹೆಸರು. ‘ಮುದ್ದಣ ಮನೋರಮೆಯರ ಸಲ್ಲಾಪ’ವನ್ನು ಓದದ ಕನ್ನಡಿಗರೇ ಇಲ್ಲ. ‘ನೀರಿಳಿಯದ ಗಂಟಲಲ್ಲಿ ಕಡುಬುಂ ತುರುಕಿದಂತೆ’ ಎಂಬ ಅವರ ಮಾತು ರಮ್ಯ ಗಾದೆಯಂತೆಯೇ ಸದಾ ಕಾಲ ಪ್ರಖ್ಯಾತವಾದದ್ದು. ಕೇವಲ 32ವರ್ಷ ಜೀವಿಸಿದ್ದ ಮುದ್ದಣನವರನ್ನು ‘ಕನ್ನಡ ನವೋದಯದ ಮುಂಜಾನೆ ಕೋಳಿ’ ಎಂದು ಕನ್ನಡ ಸಾಹಿತ್ಯಲೋಕ ಆಪ್ತವಾಗಿ ನೆನೆಯುತ್ತಿದೆ.

ಲಕ್ಷ್ಮೀನಾರಣಪ್ಪನವರು 1870ರ ಜನವರಿ 24ರಂದು ನಂದಳಿಕೆ ಎಂಬಲ್ಲಿ ಜನಿಸಿದರು. ನಂದಳಿಕೆ ಉಡುಪಿ ಮತ್ತು ಕಾರ್ಕಳದ ಮಧ್ಯದಲ್ಲಿರುವ ಒಂದು ಗ್ರಾಮ. ತಂದೆ ಪಾಠಾಳಿ ತಿಮ್ಮಪ್ಪಯ್ಯನವರು. ತಾಯಿ ಮಹಾಲಕ್ಷ್ಮಮ್ಮ. ನಾರಾಣಪ್ಪನವರ ಪ್ರಾಥಮಿಕ ಶಿಕ್ಷಣ ನಂದಳಿಕೆಯಲ್ಲಿಯೇ ಆಯಿತು. ಮುಂದಿನ ವ್ಯಾಸಂಗಕ್ಕೆ ಉಡುಪಿಯ ಮಠವನ್ನು ಆಶ್ರಯಿಸಿದರು. ಇಂಗ್ಲಿಷ್ ಶಾಲೆಗೆ ಸೇರಲು ಫೀಸು ಕೊಡಲಾರದೆ ಕನ್ನಡ ಶಾಲೆಗೆ ಸೇರಿದರು. ಪ್ರೌಢ ಶಿಕ್ಷಣ ಮುಗಿಸಿ ಉಪಾಧ್ಯಾಯರ ತರಬೇತು ಪಡೆದರು. ಇದರಿಂದ ಕನ್ನಡಕ್ಕೆ ಅದೃಷ್ಟ ಸಂದಿತು. ಇಂಗ್ಲಿಷ್ ಓದಿದ್ದರೆ ಮುದ್ದಣ ಕನ್ನಡಕ್ಕೆ ದಕ್ಕುತ್ತಿರಲಿಲ್ಲವೇನೋ!

ನಾರಾಣಪ್ಪನವರ ದೇಹದಾರ್ಢ್ಯ ನೋಡಿ ವ್ಯಾಯಾಮ ಶಿಕ್ಷಕ ತರಬೇತಿಗಾಗಿ ಅವರನ್ನು ಮದರಾಸಿಗೆ ರವಾನೆ ಮಾಡಲಾಯಿತು. ತರಬೇತಿ ಮುಗಿಸಿ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕರಾದರು. ಇದೇ ಶಾಲೆಯಲ್ಲಿದ್ದ ಮಳಲಿ ಸುಬ್ಬರಾಯರ ಸಾಹಿತ್ಯ ಮಾರ್ಗದರ್ಶನದ ಸೌಭಾಗ್ಯ ನಾರಣಪ್ಪನವರಿಗೆ ಲಭಿಸಿತು. ಬಾಲ್ಯದ ಆಸಕ್ತಿಗನುಗುಣವಾಗಿ ಯಕ್ಷಗಾನ ನಾಟಕಗಳ ರಚನೆಯಲ್ಲಿ ತೊಡಗಿಕೊಂಡರು.

ಮುದ್ದಣನವರ ಪ್ರಥಮಕೃತಿ ‘ರತ್ನಾವತೀ ಕಲ್ಯಾಣ’. ನಂತರದಲ್ಲಿ ಮೂಡಿದ್ದು ‘ಕುಮಾರ ವಿಜಯ’. ತಮ್ಮ ಮಾರ್ಗದರ್ಶಕ ಗುರುಗಳಾದ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗಾವಣೆಯಾದಾಗ ಅವರ ಸಾನಿಧ್ಯ ಬಯಸಿದ ಮುದ್ದಣ ತಾವೂ ವರ್ಗ ಮಾಡಿಸಿಕೊಂಡರು. ಮುಂದೆ ಸಂಸ್ಕೃತ ಕಲಿಯಲು ಪ್ರಾರಂಭಿಸಿದರು. ಅದ್ಭುತ ರಾಮಾಯಣವನ್ನು ಹೇಳಿಸಿಕೊಂಡು ಹಳಗನ್ನಡದಲ್ಲಿ ರಚನೆ ಮಾಡಿದರು. ಮೈಸೂರಿನ ‘ಕಾವ್ಯಮಂಜರಿ ಪತ್ರಿಕೆ’ಯ ಸಂಪಾದಕರಲ್ಲಿ ಪ್ರಕಟಣೆಯ ಕೋರಿಕೆ ಸಲ್ಲಿಸಿ ಕರ್ತೃ ಗೊತ್ತಿಲ್ಲವೆಂದು ತಿಳಿಸಿದರು. ಈ ಕೃತಿ 1895ರಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂತಸ ಅವರದ್ದಾಯಿತು. ‘ಶ್ರೀರಾಮ ಪಟ್ಟಾಭಿಷೇಕಂ’ ಅನ್ನು ಷಟ್ಪದಿಯಲ್ಲಿ ರಚಿಸಿದರು. ಮಹಾಲಕ್ಷ್ಮಿ ಎಂಬ ಕವಯಿತ್ರಿ ಹೆಸರಿನಲ್ಲಿ ಈ ಕೃತಿ ಪ್ರಕಟಣೆಗೊಂಡಿತು. ಎರಡೂ ಪುಸ್ತಕಗಳೂ ಮದರಾಸು ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳಾದವು. ಕೃತಿಕಾರನ ಹೆಸರು ತಿಳಿಸದಿದ್ದುದರಿಂದ ಮುದ್ದಣನವರಿಗೆ ಇದಕ್ಕೆ ಸಲ್ಲಬೇಕಾದ ಹಣ ಮಾತ್ರ ಸಲ್ಲಲಿಲ್ಲ.

‘ಓರ್ವ ಕನ್ನಡಿಗ’, ‘ಚಕ್ರಧಾರಿ’, ‘ರಂಗಭಟ್ಟನಾತ್ಮಜೆ’, ‘ಲಕ್ಷ್ಮೀನಾರಾಯಣ’ ಎಂಬ ಹೆಸರಿನಿಂದ ಮುದ್ದಣ ಕೃತಿ ರಚನೆ ಮಾಡಿದರು. ‘ರಾಮಾಶ್ವಮೇಧ’ವನ್ನು ರಚಿಸುವಾಗ ಯಾವ ರೀತಿಯಲ್ಲಿ ಕಾವ್ಯವನ್ನು ರಚಿಸಲಿ ಪದ್ಯದಲ್ಲೋ ಗದ್ಯದಲ್ಲೋ ಎಂದಾಗ ‘ಪದ್ಯವದ್ಯಂ, ಗದ್ಯ ಹೃದ್ಯಂ, ಹೃದ್ಯಮಪ ಗದ್ಯದೊಳೆ ಪೇಳ್ವುದು’ ಎಂದಾಗ ಮುದ್ದಣ-ಮನೋರಮ ಎಂಬ ನಲ್ಲ ನಲ್ಲೆಯರ ಸರಸ ಸಂಭಾಷಣೆಯ ಮೂಲಕ ಆ ಕೃತಿ ರಚನೆಗೊಂಡಿತು. ನಮ್ಮ ಕಾಲದಲ್ಲಿ ಈ ಭಾಗ ‘ಮುದ್ದಣ ಮನೋರಮೆಯರ ಸಲ್ಲಾಪ’ ಎಂಬ ಆಕರ್ಷಕ ಪಠ್ಯಪುಸ್ತಕದ ಪಾಠವಾಗಿತ್ತು.

‘ಕನ್ನಡ ನವೋದಯದ ಮುಂಜಾನೆ ಕೋಳಿ’ ಎಂಬ ಕೀರ್ತಿ ಮುದ್ದಣನವರಿಗೆ ಸಂದಿತು. ‘ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು’ ಎಂದು ಎಸ್.ವಿ. ರಂಗಣ್ಣನವರು ವಿಮರ್ಷಿಸಿದ್ದಾರೆ. ಮುದ್ದಣನವರು ಬೆನಗಲ್ ರಾಮರಾಯರ ಶಿಫಾರಸ್ಸಿನ ಮೇರೆಗೆ ಮದರಾಸಿನ ಕ್ರಿಶ್ಚಿಯನ್ ಕಾಲೇಜಿಗೆ ಕನ್ನಡ ಪಂಡಿತರಾಗಿ ಆಯ್ಕೆಗೊಂಡರು.

ಮುದ್ದಣನವರು ಕ್ಷಯರೋಗ ತಗುಲಿದ ಕಾರಣ ತಮ್ಮ 32ನೇ ವಯಸ್ಸಿನಲ್ಲಿ (16-2-1901) ನಿಧನರಾದರು. ಇವರ 75ನೆಯ ವರ್ಷದ ಸ್ಮರಣೆಯ ನೆನಪಿಗಾಗಿ 1976ರಲ್ಲಿ ‘ಮುದ್ದಣ ಪ್ರಶಸ್ತಿ’ ಗ್ರಂಥವನ್ನು ಪ್ರಕಟಿಸಲಾಯಿತು.

ಚಿತ್ರ: ಚಂದ್ರನಾಥ ಆಚಾರ್ಯ Chandranath Acharya

ಕೃಪೆ:- ‘ಕನ್ನಡ ಸಂಪದ’

LEAVE A REPLY

Please enter your comment!
Please enter your name here