ಹುಬ್ಬಳ್ಳಿ: ಮಾ.05: ಮಾರ್ಚ್ 9 ರಂದು ಕರೆಯಲಾಗಿದ್ದ ಎ.ಪಿ.ಎಂ.ಸಿ ಸಾಮಾನ್ಯ ಸಭೆ ಮುಂದೂಡಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನೂತವಾಗಿ ನಿರ್ಮಿಸಲಾಗಿರುವ ಎ.ಪಿ.ಎಂ.ಸಿ ಮಹದ್ವಾರದ ಬಳಿ ಪ್ರತಿಭಟನೆ ನಿರತರಾಗಿದ್ದ ಸದಸ್ಯ ಶಂಕರಪ್ಪ ಬಿಜವಾಡ ಧರಣಿ ಹಿಂಪಡೆದಿದ್ದಾರೆ.
ಹುಬ್ಬಳ್ಳಿ ನಗರ ತಹಶೀಲ್ದಾರ ಶಶಿಧರ ಮಾಡ್ಯಾಳ ನೇತೃತ್ವ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಶಂಕರಪ್ಪ ಬಿಜವಾಡ ಅವರ ಮನ ಒಲಿಸಿದರು. ಮಾರ್ಚ್ 9 ರಂದು ಕರೆಯಲಾಗಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲು ಎ.ಪಿ.ಎಂ.ಸಿ ಅಧ್ಯಕ್ಷ ಸುರೇಶ್ ಎಂ ಕಿರೇಸೂರು ಒಪ್ಪಿಗೆ ನೀಡಿದರು. ಶಂಕರಪ್ಪ ಬಿಜವಾಡ ಅವರು ಮುಂದಿನ ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ತಿಳಿಸುವಂತೆ ಕೋರಲಾಯಿತು. ಇದಕ್ಕೆ ಸಮ್ಮತಿಸಿ ಶಂಕರಪ್ಪ ಬಿಜವಾಡ ತಮ್ಮ ಧರಣಿಯನ್ನು ಹಿಂಪಡೆದಿದ್ದಾರೆ.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಉಪಾಧ್ಯಕ್ಷ ಬಸವರಾಜ ನಾಯ್ಕರ್, ಕಾರ್ಯದರ್ಶಿ ಆದಪ್ಪ, ಎಸಿಪಿ ವಿನೋದ್ ಮುಕ್ತೇದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.