ನೂತನ ಸಿಎಂ ಆಯ್ಕೆಗೆ ಮುಂದಾಗಿರುವ ಬಿಜೆಪಿ ವೀಕ್ಷಕರು ರಾಜಧಾನಿಗೆ ಬಂದಿಳಿದಿದ್ದು, ಬಿಜೆಪಿ ಪಾಳೆಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ಈ ನಾಯಕರು ಭಾಗಿಯಾಗಲಿದ್ದು, ನೂತನ ಸಿಎಂ ಅಭ್ಯರ್ಥಿ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ವೀಕ್ಷಕರಾದ ಬಿಜೆಪಿ ಯ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಅವರನ್ನು ಆರ್, ಅಶೋಕ್, ಅಶ್ವಥ್ ನಾರಾಯಣ್,ಎಸ್.ಆರ್.ವಿಶ್ವನಾಥ,ರಘು, ಮುನಿರತ್ನ, ಭೈರತಿ ಬಸವರಾಜ್, ಪ್ರಭು ಚೌಹಾಣ್ ಸೇರಿದಂತೆ ಕೆಲ ಶಾಸಕರು ಸ್ವಾಗತಿಸಿದರು. ಶಾಸಕಾಂಗ ಸಭೆಗೂ ಮುನ್ನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ವೀಕ್ಷಕರು ಈಗಾಗಲೇ ಸಿಎಂ ಅಭ್ಯರ್ಥಿ ಯಾರು ಎಂಬದನ್ನು ನಿರ್ಧರಿಸಿದ್ದು, ಅದನ್ನು ಶಾಸಕಾಂಗ ಸಭೆಯಲ್ಲಿ ಬಹಿರಂಗ ಪಡಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿಟಿ ರವಿ ಕೂಡ ಕೇಂದ್ರ ವೀಕ್ಷಕರ ತಂಡದೊಂದಿಗೆ ಆಗಮಿಸಿದರು. ರಾಜ್ಯಕ್ಕೆ ಬಂದಿಳಿದಿರುವ ವೀಕ್ಷಕರ ಲೆಕ್ಕಾಚಾರ ಏನು? ಯಾರನ್ನು ಅವರು ಸಿಎಂ ಆಗಿ ಘೋಷಿಸಬಹುದು ಎಂಬ ಕುತೂಹಲ ಈಗ ರಾಜ್ಯದಲ್ಲಿ ಮೂಡಿದೆ