ಬಳ್ಳಾರಿಯಲ್ಲಿ ಪೊಲೀಸ್ ಹುತಾತ್ಮರ ದಿನ ಆಚರಣೆ, ಸಮಾಜದ ಒಳಿತಿಗಾಗಿ ಪ್ರಾಣ ಮುಡುಪಾಗಿಟ್ಟವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ: ಡಿಸಿ ಮಾಲಪಾಟಿ

0
55

ಬಳ್ಳಾರಿ,ಅ.21: ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾ, ಸಮಾಜದ ಒಳಿತಿಗಾಗಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಪೆÇಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ವೇಳೆ ನೂರಾರು ಜನ ಸಾವಿಗೆ ಈಡಾಗುತ್ತಿದ್ದಾರೆ, ಇದು ನಿಲ್ಲಬೇಕು. ಮುಂದಿನ ವರ್ಷ ಹುತಾತ್ಮಾದವರ ಪಟ್ಟಿಯಲ್ಲಿ ಒಂದೇ ಒಂದು ಹೆಸರು ಇಲ್ಲದ ಹಾಗೆ ಆಗಬೇಕು ಎಂದು ಅವರು ಆಶಿಸಿದರು.
ಸಮಾಜದಲ್ಲಿ ಯಾವುದೇ ಸಂಘರ್ಷಗಳು ನಡೆದಾಗ ಪೊಲೀಸರು ಮೊದಲು ನೆನಪಾಗುತ್ತಾರೆ, ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ನೆರವಾಗುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಪ್ರಾಮಾಣಿಕತೆ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಾ, ಪ್ರಾಣ ಕಳೆದುಕೊಂಡ ಅಧಿಕಾರಿಗಳ ಸ್ಪೂರ್ತಿಯನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ಸರ್ಕಾರ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹಾಗೂ ಈ ಸಿಬ್ಬಂದಿಯ ಕುಟುಂಬದವರಿಗೆ ಎಲ್ಲಾ ರೀತಿಯಲ್ಲಿ ನೆರವಾಗಲಿದೆ. ಪೊಲೀಸ್ ಸಿಬ್ಬಂದಿ ಸಮಾಜದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಾಲು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಅನೇಕ ಒತ್ತಡಗಳ ಮಧ್ಯೆಯೂ ಅನನ್ಯವಾದ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಅನೇಕ ಬದಲಾವಣೆಗಳು ಆಗುತ್ತಿವೆ. ಹಲವಾರು ತಂತ್ರಜ್ಞಾನ ಬಳಕೆ ಮಾಡಿಕೊಂಡು ಸಮಾಜದಲ್ಲಾಗುವ ಅಪರಾಧಗಳನ್ನು ತಡೆಯುವ ಮೂಲಕ ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವ ಕೆಲಸ ಪೊಲೀಸ್ ಇಲಾಖೆಯು ಮಾಡುತ್ತಿದ್ದು, ಜನರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇಲಾಖೆಯು ಜನಸ್ನೇಹಿ ಪೊಲೀಸ್, ನಿಮ್ಮೊಂದಿಗೆ ಪೊಲೀಸ್ ಸೇರಿದಂತೆ ಹತ್ತು ಹಲವು ವಿಶಿಷ್ಟವಾದ ಕೆಲಸಗಳ ಮೂಲಕ ಜನಪರ ಸೇವೆ ಒದಗಿಸುವಲ್ಲಿ ನಿರತವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ಅವರು ಮಾತನಾಡಿ, 1959 ರ ಚೀನಾ ಯುದ್ದದಲ್ಲಿ ವೀರಮರಣ ಹೊಂದಿದ 10 ಜನ ಸಿಆರ್‍ಪಿಎಫ್ ಯೋಧರ ಸ್ಮರಣಾರ್ಥ ಪ್ರತಿ ವರ್ಷ ಅ.21ರಂದು ಪೊಲೀಸ್ ಹುತಾತ್ಮರ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
2021-22ನೇ ಸಾಲಿನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಭಾರತದಲ್ಲಿ ಒಟ್ಟು 264 ಜನ, ಕರ್ನಾಟಕದಲ್ಲಿ 11 ಜನ ಕರ್ತವ್ಯದ ಸಮಯದಲ್ಲಿ ಮರಣ ಹೊಂದಿದ್ದಾರೆ ಎಂದು ಹೇಳಿದ ಅವರು ಅವರ ಕುಟುಂಬಕ್ಕೆ ನೆರವಾಗುವ ಕೆಲಸ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮಾಡಲಿದೆ ಎಂದ ಅವರು ಹುತಾತ್ಮರಾದ ಎಲ್ಲ ಪೊಲೀಸ್ ಸಿಬ್ಬಂದಿಯ ನಾಮಸ್ಮರಣೆ ಮಾಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಟರಾಜ, ಲೋಕಾಯುಕ್ತ ಎಸ್ಪಿ ಶ್ರೀಹರಿ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here