ಹಗರಿಬೊಮ್ಮನಹಳ್ಳಿ, ಮಾರ್ಚ್,25: ದೇಶ ಮತ್ತು ರಾಜ್ಯದ ಸಾಹಿತ್ಯ, ಸಾಂಸ್ಕೃತಿಕ ವಲಯಗಳಲ್ಲಿನ ಪ್ರಸ್ತುತ ವಿದ್ಯಮಾನಗಳನ್ನು ನೋಡ್ತಾಯಿದ್ರೇ ಬಂಡಾಯ ಸಾಹಿತ್ಯ ಸಂಘಟನೆಗೆ ಮರು ಜೀವಂತಿಕೆ ಕೊಡುವುದು ಈ ಹಿಂದಿ ಗಿಂತಲೂ ಪ್ರಸ್ತುತ ತೀರಾ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತರಾದ ಹುಳ್ಳಿಪ್ರಕಾಶ ಹೇಳಿದ್ದಾರೆ.
ಬಂಡಾಯ ಸಾಹಿತ್ಯ ಸಂಘಟನೆಗೆ 44 ವರ್ಷ ತುಂಬಿರುವ ನಿಮಿತ್ತ ಶನಿವಾರ ಮುಂಜಾನೆ ಹಗರಿಬೊಮ್ಮನಹಳ್ಳಿ ಪಟ್ಟಣದ ಕೃಷಿಕ ಸಮಾಜದ ಕಚೇರಿಯಲ್ಲಿ ತಾಲೂಕ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ ವಿಚಾರ ಸಂಕೀರ್ಣ ಮತ್ತು ಕವಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಭುತ್ವದ ದೌರ್ಜನ್ಯ, ಅನಾಚಾರ, ಜನ ವಿರೋಧಿತನವನ್ನು, ಪ್ರಜಾತಂತ್ರವನ್ನು ಬುಡಮೇಲು ಮಾಡುವಂತಹ ನಿಲುವುಗಳನ್ನು ಗಟ್ಟಿಧ್ವನಿಯಲ್ಲಿ ಪ್ರಶ್ನಿಸಿ, ಪ್ರತಿರೋಧ ವ್ಯಕ್ತಪಡಿಸುವಂತಹ ಗಟ್ಟಿತನದ ಸಾಹಿತ್ಯ ಪ್ರಸ್ತುತ ದಿನಮಾನಗಳಲ್ಲಿ ತೀರಾ ಅಗತ್ಯವಾಗಿದೆಂದರು.
ಬಂಡಾಯ ಸಾಹಿತ್ಯದ ವ್ಯಾಪ್ತಿ ಮತ್ತು ಅದರ ಅರ್ಥ ಅತ್ಯಂತ ವಿಶಾಲವಾಗಿದೆ. ಸಮಾಜದಲ್ಲಿನ ಶೋಷಿತ ಸಮುದಾಯಗಳ ಅಭಿವೃದ್ಧಿಗೆ, ಬೆಳವಣಿಗೆಗೆ ಬಂಡಾಯ ಸಾಹಿತ್ಯ ಸಾಕಷ್ಟು ಪೂರಕವಾಗಿದೆ. ಧ್ವನಿ ಇಲ್ಲದವರಿಗೆ ಧ್ವನಿ ಕೊಡುವ ಶಕ್ತಿ ಬಂಡಾಯ ಚಿಂತನೆಗಿದೆ. ಹೀಗಾಗಿ ಬಂಡಾಯ ಸಾಹಿತ್ಯ ಸಂಘಟನೆಯ ಬೇರುಗಳನ್ನು ಸಮಾಜದ ಎಲ್ಲಾ ಸ್ತರಗಳಲ್ಲೂ ಅಳಕ್ಕೀಳಿಸಿ, ಬಂಡಾಯದ ಧ್ವನಿಯನ್ನು ಗಟ್ಟಿಗೊಳಿಸುವಂತಹದು ಅತಿತುರ್ತಿನ ಅಗತ್ಯವೂ ಹೌದಾಗಿದೆ ಎಂದರು.
ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ವೀರಣ್ಣ ಕಲ್ಮನಿ ಬಂಡಾಯ ಸಾಹಿತ್ಯ ನಡೆದು ಬಂದ ಹಾದಿಯ ಕುರಿತಂತೆ ವಿಚಾರ ಮಂಡನೆ ಮಾಡಿದರು. ತಾಲೂಕ ಕೃಷಿಕ ಸಮಾಜದ ಅಧ್ಯಕ್ಷ ಕೆ.ಪಿ.ದೇವರಾಜ, ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಸಂಚಾಲಕ ಪಿ.ಆರ್.ವೆಂಕಟೇಶ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಂಡಾಯ ಸಾಹಿತ್ಯ ಸಂಘಟನೆ ಸಂಚಾಲಕ ಜಯಸೂರ್ಯ ಪ್ರಸ್ತಾವಿಕ ಮಾತನಾಡಿ, ವರದರಾಜ ಸ್ವಾಗತಿಸಿ, ಶಾಹೀನ್ ನಿರೂಪಿಸಿದರು.