ಕೊಟ್ಟೂರು:ಏ:22: ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಕೋರ್ಕಮಿಟಿಗೆ ನನ್ನ ಹೆಸರನ್ನು ಇದೀಗ ಬಿಜೆಪಿ ಸೇರಿಕೊಂಡು ಜೆಡಿಎಸ್ ಅಭ್ಯರ್ಥಿಯಾಗಿ ನಿಂತಿರುವ ಕೆ.ನೇಮಿರಾಜ್ ನಾಯ್ಕ ಶಿಫಾರಸ್ಸು ಮಾಡಿದ್ದರು ಅಲ್ಲದೇ ರಾಮಣ್ಣ ಅಭ್ಯರ್ಥಿಯನ್ನಾಗಿ ಘೋಷಿಸಿ ಕಣಕ್ಕಿಳಿಸಿದರೇ ನೇಮಿರಾಜ್ನಾಯ್ಕ 2 ಕೋಟಿ ರೂಗಳನ್ನು ಪಕ್ಷದ ಪ್ರಚಾರಕ್ಕೆ ಕೊಡುವೆ ಎಂದು ಹೇಳಿ ಇದೀಗ ಆ ವ್ಯಕ್ತಿ ಪಕ್ಷದಿಂದ ಹೊರಹೋಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ ಪ್ರಶ್ನಿಸಿದರು.
ಕೊಟ್ಟೂರು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದರ್ಶನವನ್ನು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ ಅವರು ಆರ್ಶೀವಾದ ಪಡೆದುಕೊಂಡರು.
ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಕೆ.ನೇಮಿರಾಜ್ ನಾಯ್ಕ ಸೇರಿದಂತೆ 8 ಜನ ಅಕಾಂಕ್ಷಿಗಳು ಬಿಜೆಪಿ ಅಭ್ಯರ್ಥಿಗಳಾಗಲು ಅರ್ಜಿ ಸಲ್ಲಿಸಿದ್ದೆವು.
ಈ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಿದರೂ ಉಳಿದ ಅಕಾಂಕ್ಷಿಗಳು ಹೈಕಮಾಂಡ್ ಸೂಚಿಸಿದ ವ್ಯಕ್ತಿಗೆ ಪ್ರಚಾರ ಕೈಗೊಂಡು ಗೆಲ್ಲಿಸುವ ಭಾಷೆ ಕೊಟ್ಟಿದ್ದರು ಎಂದು ಅವರು ಹೇಳಿದರು.
ಸಂಸದ ವೈ.ದೇವೇಂದ್ರಪ್ಪ ಮಾತನಾಡಿ ಹಗರಿಬೊಮ್ಮನಹಳ್ಳಿ, ಹಡಗಲಿ, ಸೇರಿದಂತೆ ಜಿಲ್ಲೆಯ ಇತರ ವಿಧಾನ ಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ನನ್ನ ಮತ್ತು ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ ಪಾತ್ರ ಇಲ್ಲವೇ ಇಲ್ಲ. ಕೆಲವರು ಇಲ್ಲ ಸಲ್ಲದ ಆರೋಪಗಳನ್ನು ನಮ್ಮ ಮೇಲೆ ಮಾಡುತ್ತಿದ್ದು ಈ ಬಗ್ಗೆ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಮುಂಭಾಗದಲ್ಲಿ ನಮ್ಮ ಪಾತ್ರ ಇಲ್ಲವೆಂದು ಪ್ರಮಾಣ ಮಾಡುತ್ತೇನೆ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವಗೌಡ ಮಾತನಾಡಿ ಬಿಜೆಪಿ ಬಿಟ್ಟು ಇದೀಗ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿರುವ ಬಿಜೆಪಿ ಕಾರ್ಯಕರ್ತರು ಮತ್ತಿತರರ ವಿರುದ್ದ ಪಕ್ಷ ಶಿಸ್ತಿನ ಕ್ರಮ ಶೀಘ್ರವೇ ಕೈಗೊಳ್ಳುತ್ತದೆ ಎಂದರು.
-ಶಿವರಾಜ್ ಕನ್ನಡಿಗ