ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ಭಾಗಮಂಡಲ ಭಗಂಡೇಶ್ವರ ದೇವಾಲಯ ಅರ್ಚಕರಿಂದ ಪೂಜೆ ಆರಂಭಿಸಲು ತೀರ್ಮಾನ.

0
163

ಮಡಿಕೇರಿ ಆ.10-ಇತ್ತೀಚೆಗೆ ತಲಕಾವೇರಿ ಕ್ಷೇತ್ರದಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಶ್ರೀ ತಲಕಾವೇರಿ ದೇವಾಲಯದಲ್ಲಿ ದೈನಂದಿನ ಪೂಜಾ ಕೈಕಂಕರ್ಯಗಳಿಗೆ ಅಡಚಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ ಪುನರ್ ಆರಂಭಿಸುವ ಬಗ್ಗೆ ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.

ಭಾಗಮಂಡಲದ ಹೋಟೆಲ್ ಮಯೂರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಸಂಸದರಾದ ಪ್ರತಾಪ್‍ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ್ರಾ, ಭಾಗಮಂಡಲ ಮತ್ತು ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ, ಸಮಿತಿ ಸದಸ್ಯರು ಹಾಗೂ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಸಮಿತಿ ಸದಸ್ಯರಾದ ಸಣ್ಣುವಂಡ ಡಾ.ಕಾವೇರಪ್ಪ, ಉದಿಯಂಡ ಸುಭಾಷ್, ನಿಡ್ಯಮಲೆ ಮೀನಾಕ್ಷಿ ಸುರೇಶ್, ತಲಕಾವೇರಿ ದೇವಾಲಯದ ಅರ್ಚಕ ಕುಟುಂಬದವರು ಇತರರು ಪಾಲ್ಗೊಂಡಿದ್ದರು.

ತಲಕಾವೇರಿ ಕ್ಷೇತ್ರವು ಕೊಡಗಿನ ಪುಣ್ಯಕ್ಷೇತ್ರವಾಗಿದ್ದು, ಕ್ಷೇತ್ರದ ಭಕ್ತಾಧಿಗಳ ಭಾವನೆಗೆ ಧಕ್ಕೆಯಾಗದಂತೆ ತಂತ್ರಿಯವರ ಸಲಹೆ ಮಾರ್ಗದರ್ಶನದಂತೆ ತಲಕಾವೇರಿ ದೇವಾಲಯದ ರಸ್ತೆ ಸಂಚಾರಕ್ಕೆ ಯೋಗ್ಯವಾದ ನಂತರ ಧಾರ್ಮಿಕ ಪರಿಹಾರ ಕಾರ್ಯಗಳನ್ನು ಕೈಗೊಂಡು ದೈನಂದಿನ ಪೂಜಾ ಕಾರ್ಯ ಹಾಗೂ ವಿಧಿ ವಿಧಾನಗಳನ್ನು ಕೈಗೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
‘ತಲಕಾವೇರಿಗೆ ತೆರಳಲು ರಸ್ತೆಯಾದ ನಂತರ ಭಾಗಮಂಡಲದ ಅರ್ಚಕರಿಂದ ಪೂಜೆ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.’

ಸಭೆಯ ಆರಂಭದಲ್ಲಿ ಭಾಗಮಂಡಲ ಭಗಂಡೇಶ್ವರ-ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಅವರು ಮಾತನಾಡಿ ತಲಕಾವೇರಿ ದೇವಾಲಯ ಬಳಿ ಭೂಕುಸಿತ ಉಂಟಾಗಿ ಅವಘಡ ಸಂಭವಿಸಿದೆ. ಇದು ಆಗಬಾರದಿತ್ತು, ಆಗಿ ಹೋಗಿದೆ. ತಂತ್ರಿಗಳ ಸಲಹೆಯಂತೆ ಪೂಜಾ ಕಾರ್ಯ ಆರಂಭಿಸಬೇಕಿದೆ ಎಂದು ಅವರು ಕೋರಿದರು.

ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ದೇವಾಲಯದಲ್ಲಿ ಇದುವರೆಗೆ ಪೂಜಾ ಕಾರ್ಯಗಳು ನಿಂತಿರಲಿಲ್ಲ. ಭೂಕುಸಿತದಿಂದಾಗಿ ತಲಕಾವೇರಿ ದೇವಾಲಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದು ವಾರದಿಂದ ಪೂಜೆ ಕಾರ್ಯ ನಿಂತು ಹೋಗಿದೆ. ರುದ್ರಾಭಿಷೇಕ, ಗಣಪತಿ ಹೋಮ ಮತ್ತಿತರ ಪೂಜಾ ಕಾರ್ಯ ಕೈಗೊಂಡು ತಂತ್ರಿಗಳ ಮಾರ್ಗದರ್ಶನ ಹಾಗೂ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಪೂಜಾ ಕಾರ್ಯವನ್ನು ಪುನರ್ ಆರಂಭಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.

ಮತ್ತೊಬ್ಬ ಸಮಿತಿ ಸದಸ್ಯರಾದ ಸಣ್ಣುವಂಡ ಡಾ.ಕಾವೇರಪ್ಪ ಅವರು ಮಾತನಾಡಿ ತಲಕಾವೇರಿಯಲ್ಲಿ ಭಗ್ನಗೊಂಡ ಅಗಸ್ತ್ಯೇಶ್ವರ ವಿಗ್ರಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಆ ವಿಗ್ರಹ ವಿಸರ್ಜನೆಯಾಗದೆ ದೇವಸ್ಥಾನದಲ್ಲಿಯೇ ಉಳಿದಿದೆ. ಅದನ್ನು ಸಂಬಂಧಪಟ್ಟವರ ಜೊತೆ ಚರ್ಚಿಸಿ ವಿಸರ್ಜಿಸುವ ಕಾರ್ಯ ಆಗಬೇಕು ಎಂದರು.
ಅಲ್ಲದೆ ಭಾಗಮಂಡಲ ಪಟ್ಟಣದ ಒಳಚರಂಡಿ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಈ ಕಾರ್ಯ ಭಾಗಮಂಡಲದ ಮೇಲ್ಸೇತುವೆ ಕಾಮಗಾರಿಗೂ ಮೊದಲೇ ಪೂರ್ಣಗೊಳಿಸಬೇಕು ಎಂದು ಅವರು ಕೋರಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಬಳಿಕ ಮಾತನಾಡಿದ ಸಣ್ಣುವಂಡ ಡಾ.ಕಾವೇರಪ್ಪ ಅವರು ಸದ್ಯ ಪ್ರಗತಿಯಲ್ಲಿರುವ ಪಿಂಡ ಪ್ರಧಾನ ಕಾಮಗಾರಿ ಮುಂಬರುವ ತೀರ್ಥೋದ್ಭವದ ಒಳಗಾಗಿ ಪೂರ್ಣಗೊಳಿಸಿ ಭಕ್ತಾಧಿಗಳಿಗೆ ಅನುಕೂಲ ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

ಅರ್ಚಕ ರಾಜೇಶ್ ಆಚಾರ್ ಅವರು ತಲಕಾವೇರಿಯಲ್ಲಿ ರುದ್ರಾಭಿಷೇಕ, ನೈವೇದ್ಯ ಪೂಜಾ ಕಾರ್ಯ ಮಾಡಬೇಕಿದೆ. ನಿತ್ಯ ಪೂಜೆ ಜೊತೆಗೆ ಎಷ್ಟು ದಿನ ಪೂಜೆ ನಡೆದಿಲ್ಲ, ಅದೂ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ಏರ್ಪಡಿಸಬೇಕಿದೆ ಎಂದು ಅವರು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಲಕಾವೇರಿ ಕ್ಷೇತ್ರಕ್ಕೆ ತೆರಳಲು ರಸ್ತೆ ಸರಿಪಡಿಸುವ ತನಕ ಅಭ್ಯಂತರವಿಲ್ಲವೇ ಎಂದು ಅವರು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಯಾವುದೇ ಕಾರಣಕ್ಕೂ ಪೂಜೆ ಸ್ಥಗಿತಗೊಳಿಸಬಾರದು. ಸಂಪ್ರದಾಯದಂತೆ ಪೂಜಾ ಕಾರ್ಯಗಳನ್ನು ಕೈಗೊಳ್ಳುವಂತೆ ಅವರು ಸಲಹೆ ಮಾಡಿದರು.

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ತಲಕಾವೇರಿ ದೇವಾಲಯದಲ್ಲಿ ಯಾವುದೇ ಕಾರಣಕ್ಕೂ ಪೂಜಾ ಕಾರ್ಯ ನಿಲ್ಲಿಸಬಾರದು. ತಲಕಾವೇರಿ-ಭಗಂಡೇಶ್ವರ ದೇವಾಲಯದ ತಂತ್ರಿಗಳ ಸಲಹೆ, ಮಾರ್ಗದರ್ಶನ ಪಡೆದು ಮುಂದುವರೆಯಬೇಕು. ಇತರರ ಮಾತುಗಳಿಗೆ ಕಿವಿಗೊಡಬಾರದು ಎಂದು ಅವರು ಸಲಹೆ ಮಾಡಿದರು. ಮೃತ ದೇಹ ಸಿಗುವವರೆಗೆ ತಲಕಾವೇರಿ ದೇವಾಲಯಕ್ಕೆ ತೆರಳಲು ದಾರಿ ಮಾಡುವುದು ಕಷ್ಟಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ತಲಕಾವೇರಿ ದೇವಾಲಯದಲ್ಲಿರುವ ವಿಗ್ರಹ ಸಂಬಂಧಿಸಿದಂತೆ ತಲೆಕೆಡಿಸಿಕೊಳ್ಳುವುದು ಬೇಡ. ಭಾಗಮಂಡಲ ದೇವಾಲಯದ ಅರ್ಚಕರಿಂದ ಪೂಜಾ ಕಾರ್ಯ ಮುಂದುವರಿಸುವಂತೆ ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ತಮ್ಮಯ್ಯ ಅವರು ವಿಗ್ರಹ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು. ಸದ್ಯ ಪೂಜಾ ಕಾರ್ಯ ಆರಂಭವಾದರೆ ಸಾಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಂತ್ರಿಗಳ ಸಲಹೆ, ಮಾರ್ಗದರ್ಶನದಂತೆ ಪೂಜಾ ಕಾರ್ಯ ಮುಂದುವರೆಸಬೇಕು. ಭಗಂಡೇಶ್ವರ ದೇವಾಲಯದ ಅರ್ಚಕರಿಂದ ಪೂಜೆ ಮುಂದುವರಿಸಲು ಸಲಹೆ ಮಾಡಿದರು.

ಇದಕ್ಕೆ ನಾರಾಯಣಾಚಾರ್ ಕುಟುಂಬದ ಅರ್ಚಕರು ಸಹಮತ ವ್ಯಕ್ತಪಡಿಸಿದರು. ನಿಷ್ಕಲ್ಮಶವಾಗಿ, ಶಾಸ್ತ್ರೋಕ್ತವಾಗಿ ಪೂಜೆ ಮಾಡಬೇಕು. ಪೂಜೆ ಸಂದರ್ಭದಲ್ಲಿ ಸಣ್ಣ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಸಚಿವರು ಸಲಹೆ ಮಾಡಿದರು. ಭಾಗಮಂಡಲ-ತಲಕಾವೇರಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಇತರರು ಇದ್ದರು.

ಬ್ರಹ್ಮಗಿರಿ ಬೆಟ್ಟವಲ್ಲ, ಗಜಗಿರಿ ಬೆಟ್ಟ: ತಲಕಾವೇರಿ ಬಳಿಯ ಬೆಟ್ಟ ಕುಸಿತ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತ ಎಂಬ ವರದಿ ಸಂಬಂಧಿಸಿದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆ.ಜಿ.ಬೋಪಯ್ಯ ಅವರು ಈಗ ಭೂಕುಸಿದಿರುವುದು ಗಜಗಿರಿ ಬೆಟ್ಟವಾಗಿದ್ದು, ಬ್ರಹ್ಮಗಿರಿ ಬೆಟ್ಟವಲ್ಲ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here