ಮಡಿಕೇರಿ ಸೆ.08 :-ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ 37 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆಯ ಪ್ರಯುಕ್ತ ಗುರುವಾರ ನೇತ್ರದಾನ ಮಹತ್ವದ ಬಗ್ಗೆ ಕಾರ್ಯಕ್ರಮವು ನಗರದ ಎಫ್ಎಮ್ಸಿ ಕಾಲೇಜಿನಲ್ಲಿ ನಡೆಯಿತು.
ನೇತ್ರಶಾಸ್ತ್ರ ವಿಭಾಗದ ತಜ್ಞರಾದ ಡಾ.ಮಹಮ್ಮದ್ ಅಬ್ದುಲ್ ಕಯೂಮ್ ಅವರು ನೇತ್ರದಾನಕ್ಕೆ ಸಂಬಂಧಪಟ್ಟ ವಿಚಾರಗಳನ್ನು ವಿವರಿಸಿದರು. 18 ವಯಸ್ಸಿಗಿಂತ ಕೆಳಗಿನವರು ಪೋಷಕರ ಅನುಮತಿ ಪಡೆದು ಹಾಗೂ 18 ವಯಸ್ಸಿಗಿಂತ ಮೇಲ್ಪಟ್ಟವರು ತಮ್ಮ ಸ್ವ ಇಚ್ಛೆಯಿಂದ ನೇತ್ರದಾನ ಮಾಡಬಹುದು ಎಂದು ತಿಳಿಸಿದರು.
ನೇತ್ರದಾನಿಗಳು ಮರಣ ಹೊಂದಿದ 6 ಗಂಟೆ ಒಳಗೆ ಅವರ ನೇತ್ರ ಸಂಗ್ರಹಿಸಬೇಕಿದೆ. ಆ ನಿಟ್ಟಿನಲ್ಲಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಮಧುಮೇಹ ಕಾಯಿಲೆ, ರಕ್ತದೊತ್ತಡ, ಇವೆಲ್ಲಾ ಇದ್ದರೂ ಕೂಡ ನೇತ್ರದಾನ ಮಾಡಬಹುದು. ಮುಖ್ಯವಾಗಿ ಕಣ್ಣಿನ ಕರಿಗುಡ್ಡೆಯು ಆರೋಗ್ಯವಾಗಿದ್ದಲ್ಲಿ ಪ್ರತಿಯೊಬ್ಬರೂ ಕೂಡ ನೇತ್ರದಾನ ಮಾಡಬಹುದು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ.ಚೌರಿರ ಜಗತ್ ತಿಮ್ಮಯ್ಯ ಅವರು ಇದ್ದರು. ನೇತ್ರಾಧಿಕಾರಿಯಾದ ಎಸ್.ಚೇತನ್ ಕುಮಾರ್ ಅವರು ಆಸಕ್ತಿಯುಳ್ಳ ನೇತ್ರದಾನಿಗಳ ನೋಂದಣಿಯನ್ನು ವೆಬ್ಸೈಟ್ https://www.jeevasarthakathe.karnataka.gov.in ಮೂಲಕ ನೋಂದಾಯಿಸಿದರು. ಡೀನ್ ಹಾಗೂ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ, ವೈದ್ಯಕೀಯ ಅಧೀಕ್ಷಕರಾದ ಡಾ.ರೂಪೇಶ್ ಗೋಪಾಲ್ ಎನ್.ವಿ., ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎನ್.ನಂಜುಂಡಯ್ಯ ಮತ್ತು ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಚ್.ಕೃಪಾಲಿನಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.