ಬಳ್ಳಾರಿ, ಡಿ.16 : ಈಗಾಗಲೇ ಜಲಾಶಯದಿಂದ ಕಾಲುವೆಗಳಿಗೆ ಹರಿಸುವ ನೀರು ನಿಲ್ಲಿಸಿದ್ದು, ಈ ಬಿಡುವಿನ ಅವಧಿಯಲ್ಲಿ ಪ್ರಾಧಿಕಾರದ ವ್ಯಾಪ್ತಿಯ ಕಾಲುವೆಗಳಲ್ಲಿ ತುಂಬಿಕೊ0ಡಿರುವ ಹೂಳನ್ನು ನೀರಾವರಿ ಇಲಾಖೆಯ ವತಿಯಿಂದ ತೆಗೆಸಿ, ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರಿಗೆ ನೀರು ಹರಿಯುವಂತೆ ಅನುಕೂಲ ಮಾಡಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಖಡಕ್ ಸೂಚನೆ ನೀಡಿದರು.
ಶಿವಮೊಗ್ಗದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಬುಧವಾರ ಭದ್ರಾ ಕಾಡಾ ಪ್ರಾಧಿಕಾರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾಧಿಕಾರದ ವ್ಯಾಪ್ತಿಯ ಕಾಲುವೆಗಳಲ್ಲಿ ಸಿಲ್ಟ್(ಹೂಳು) ತುಂಬಿಕೊ0ಡಿದ್ದು, ಯಾವ ಭಾಗಗಳಲ್ಲಿ ಸಮಸ್ಯೆಯಾಗಿದೆ ಎಂಬುದರ ಬಗ್ಗೆ ಹಾಗೂ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಸಲು ಇರುವ ಇನ್ನಿತರ ನ್ಯೂನತೆಗಳು ಮತ್ತು ಅವುಗಳನ್ನು ಸರಿಪಡಿಸಲು ಸೂಚಿಸಿದರು. ಪ್ರಮುಖವಾಗಿ ಕಾಲುವೆಗಳಲ್ಲಿ ಈಗಾಗಲೇ ಪ್ರಾರಂಭಿಸಿರುವ ಕಾಮಗಾರಿಗಳ ವಿವರಗಳು ಹಾಗೂ ಅವುಗಳು ಯಾವ ಹಂತದಲ್ಲಿ ಇವೆ ಎಂಬುದರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡ ಅವರು ಬಾಕಿ ಉಳಿದ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಿದರು.
ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ, ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಮುಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿಗಳಲ್ಲಿ ಯಾವುದೇ ರೀತಿಯಲ್ಲಿ ಲೋಪದೋಷ ಕಾಣದೆ ಗುಣಮಟ್ಟ ಕಾಪಾಡಿಕೊಳ್ಳುವಂತೆ ಆದೇಶಿಸಿದರು.
ಈ ಸಭೆಯಲ್ಲಿ ಕಾಡಾ ಉಪ ಆಡಳಿತಾಧಿಕಾರಿ ಪಾಂಡು, ಅಧೀಕ್ಷಕ ಎಂಜಿನಿಯರ್ ಗುರುಸ್ವಾಮಿ, ಕಾರ್ಯಪಾಲಕ ಇಂಜಿನಿಯರ್ ಮೂಡಲ ಗಿರಿಯಪ್ಪ, ಭದ್ರಾ ಯೋಜನಾ ವೃತ್ತದ ಕಾರ್ಯಪಾಲಕ ಎಂಜಿನಿಯರ್ ಚಂದ್ರಹಾಸ್ ಸೇರಿದಂತೆ ಅಧಿಕಾರಿಗಳು ಇದ್ದರು.