ವಿಜಯನಗರ(ಹೊಸಪೇಟೆ),ಏ.06: ವಿಜಯನಗರ ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಬುಧವಾರದಂದು ಸಹಾಯಕ ಆಯುಕ್ತರರಾದ ಸಿದ್ಧರಾಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಏ.10ರಂದು ಮರಿಯಮ್ಮನಹಳ್ಳಿಯ ಶ್ರೀ ಲಕ್ಷೀ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ರಥೋತ್ಸವ, ಏ.14ರಂದು ಜಂಬುನಾಥಹಳ್ಳಿಯ ಶ್ರೀ ಜಂಬುನಾಥ ಸ್ವಾಮಿ ದೇವಸ್ಥಾನದ ವಾರ್ಷಿಕ ರಥೋತ್ಸವ ಮತ್ತು ಏ.10 ರಿಂದ ಏ.18ರವರೆಗೆ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವಗಳ ನಿಮಿತ್ತ ಪೂರ್ವ ಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಸಹಾಯಕ ಆಯುಕ್ತರರಾದ ಸಿದ್ಧರಾಮೇಶ್ವರ ಅವರು ಮಾತನಾಡಿ ಈ ಬಾರಿ ರಥೋತ್ಸವಗಳನ್ನು ವಿಜೃಂಭಣೆಯಿಂದ ನಡೆಸಲಾಗುವುದರಿಂದ ನೈರ್ಮಲಿಕರಣದ ವ್ಯವಸ್ಥೆಯನ್ನು ಬ್ಲೀಚಿಂಗ್ ಪೌಡರ್ ಇತ್ಯಾದಿ ಉಪಯೋಗಿಸಿ ಗ್ರಾಮ ಪಂಚಾಯತಿಯವರು ತೇರು ಬೀದಿ, ಬಸ್ ಸ್ಟ್ಯಾಂಡ್ ಮುಖ್ಯ ಬೀದಿಗಳಲ್ಲಿ ಸ್ವಚ್ಚತೆ ಮಾಡಿಸಲು ಸೂಚಿಸಿದರು.
ಶುದ್ದ ನೀರನ್ನು ಉಪಯೋಗಿಸಿಕೊಂಡು ಆಹಾರವನ್ನು ತಯಾರಿಸಲು ಸೂಚಿಸಿದರು, ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಬಂದೋಬಸ್ತ್ ವ್ಯವಸ್ಥೆ, ಬ್ಯಾರಿಕೇಟ್ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸಾರ್ವಜನಿಕರಿಗೆ/ಭಕ್ತಾಧಿಗಳಿಗೆ ಊಟದ ವ್ಯವಸ್ಥೆ, ಅಗ್ನಿ ಶಾಮಕದ ವ್ಯವಸ್ಥೆ, ತುರ್ತು ಚಿಕಿತ್ಸೆಗಾಗಿ 108 ಅಂಬುಲೈನ್ಸ್ ವ್ಯವಸ್ಥೆ, ತಾಲ್ಲೂಕು ವೈಧ್ಯಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಜೀವರಕ್ಷಕ ಔಷಧಿಗಳನ್ನು ಹಾಗೂ ಇತರೆ ವೈದ್ಯಕೀಯ ಸೌಲಭ್ಯಗಳ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ತಹಶೀಲ್ದಾರರಾದ ವಿಶ್ವಜೀತ ಮೇಹತಾ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಕಾಶ ರಾವ್, ಜಂಭುನಾಥ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿಗಳಾದ ಹನುಮಂತಪ್ಪ, ಮರಿಯಮ್ಮನಹಳ್ಳಿಯ ಗ್ರೇಡ್-2 ತಹಶೀಲ್ದಾರಾದ ಲಾವಣ್ಯ, ಹೊಸಪೇಟೆ ತಾ.ಪಂ. ಇಓ ವಿಶ್ವನಾಥ್, ಅಗ್ನಿಶಾಮಕ ಠಾಣಾಧಿಕಾರಿಗಳಾದ ಕೃಷ್ಣಸಿಂಗ್, ಹಂಪಿ ಸಿಪಿಐ ದೊಡ್ಡಣ್ಣ ಹಾಗೂ ಇಲಾಖೆಯ ಅಧಿಕಾರಿಗಳು ಇದ್ದರು.