ಬಳ್ಳಾರಿ/ಹೊಸಪೇಟೆ,ಫೆ.19 : ಹೊಸಪೇಟೆ ಸಹಾಯಕ ಆಯುಕ್ತರಾದ ಸಿದ್ದರಾಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಉಪವಿಭಾಗ ಮಟ್ಟದ ನಿಗಾ ಸಮಿತಿ ಸಭೆಯು ಶುಕ್ರವಾರದಂದು ಹೊಸಪೇಟೆಯ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸಿ ಸಿದ್ದರಾಮೇಶ್ವರ ಅವರು ಪೌರಕಾರ್ಮಿಕರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ಯಾಕೇಜ್ ರೂಪದಲ್ಲಿ ಮಾಡಿ ಮೂರು ತಿಂಗಳಿಗೊಮ್ಮೆ ಸ್ಥಳಿಯ ಅಸ್ಪತ್ರೆಯಲ್ಲಿ ಹಾಗೂ ವರ್ಷಕ್ಕೆ ಒಮ್ಮೆ ಸುಸಜ್ಜಿತ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
2018-19 ಮತ್ತು 2019-20ನೇ ಸಾಲಿನ ಸಮುದಾಯ ಸ್ಯಾನಿಟರಿ ಶೌಚಾಲಯ ನಿರ್ಮಾಣ, ಸಫಾಯಿ ಕರ್ಮಚಾರಿಗಳಿಗೆ ನಿವೇಶನ/ವಸತಿ ಸೌಲಭ್ಯ ಕಲ್ಪಿಸುವ ಕುರಿತು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಚಾರಿಗಳ ಸಮೀಕ್ಷೆಯ ಕುರಿತು ಪ್ರಗತಿ ಪರಿಶೀಲನೆ ಕುರಿತು ಚರ್ಚಿಸಿ, ಇನ್ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಉಪವಿಭಾಗ ಮಟ್ಟದ ನಿಗಾ ಸಮಿತಿ ಸಭಯನ್ನು ಕರೆಯಲಾಗುವುದು ಎಂದು ತಿಳಿಸಿದರು.
ಪೌರ ಕಾರ್ಮಿಕರಿಗೆ ನೀಡಲಾಗುತ್ತಿರುವ ಕನಿಷ್ಠ ವೇತನ, ಇ.ಎಸ್.ಐ, ಮತ್ತು ಇ.ಪಿ.ಎಫ್, ಸೌಲಭ್ಯ ಒದಗಿಸಿದ ಕುರಿತು ಮಾಹಿತಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಕುರಿತು ಸಮಗ್ರವಾಗಿ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಹೊಸಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕ (ಗ್ರೇಡ್-1) ವಸಂತಕುಮಾರ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸಹಾಯಕ ನಿರ್ದೇಶಕ ದಿನೇಶ್, ಕೂಡ್ಲಿಗಿ ಕಚೇರಿಯ ಅಧಿಕ್ಷಕ ಪಕ್ಕಿರಪ್ಪ ಮತ್ತಿತರರು ಹಾಜರಿದ್ದರು.