ಧಾರವಾಡ ಫೆ.19: ಕೋವಿಶೀಲ್ಡ್ ಲಸಿಕೆಯನ್ನು 2ನೇ ಬಾರಿಗೆ ಇಂದು (ಫೆ.19) ಜಿಲ್ಲಾ ಆರ್ಸಿಹೆಚ್ಓ ಡಾ: ಎಸ್.ಎಂ. ಹೊನಕೇರಿ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಅಯ್ಯನಗೌಡ ಅವರು ಬೆಳಿಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಪಡೆದರು.
ಲಸಿಕೆ ಪಡೆದ ನಂತರ ಆರ್ಸಿಹೆಚ್ಓ ಡಾ: ಎಸ್.ಎಂ. ಹೊನಕೇರಿ ಮಾತನಾಡಿ, ಆರೋಗ್ಯ ಕಾರ್ಯಕರ್ತರು ಹಾಗೂ ಫ್ರಂಟ್ಲೈನ್ ವಾರಿಯರ್ಸ್ಗಳು ಯಾವುದೇ ಅಂಜಿಕೆ ಹಾಗೂ ಆತಂಕಗಳಿಲ್ಲದೇ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಬೇಕು. ಸರ್ಕಾರ ನಿಗದಿಪಡಿಸಿರುವ ಹಾಗೂ ಜಿಲ್ಲಾಡಳಿತ ಗುರುತಿಸಿರುವ ನಿರ್ಧಿಷ್ಟ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆ. ಕೆಲವರು ಅನಗತ್ಯ ಸುಳ್ಳು ವದಂತಿಗಳಿಗೆ ಅಥವಾ ಆತಂಕಕ್ಕೆ ಒಳಗಾಗಿ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಈಗಾಗಲೇ ಕೋವಿಶೀಲ್ಡ್ ಲಸಿಕೆಯನ್ನು ಪಡೆದಿರುವ ಅನೇಕ ವೈದ್ಯರು, ಜಿಲ್ಲಾಮಟ್ಟದ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಯಾವುದೇ ತೊಂದರೆಗಳಿಲ್ಲದೆ ಆರೋಗ್ಯವಾಗಿದ್ದಾರೆ. ಆದ್ದರಿಂದ ಈಗಾಗಲೇ ನೊಂದಾಯಿತರಾಗಿರುವ ಎಲ್ಲಾ ಹಂತದ ಕಾರ್ಯಕರ್ತರು, ಇಲಾಖಾ ಸಿಬ್ಬಂದಿಗಳು ಕೋವಿಶೀಲ್ಡ್ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ: ಯಶವಂತ ಮದೀನಕರ ಹಾಗೂ ಇತರರು ಇದ್ದರು.