ಮೆಕ್ಕೆಜೋಳದೊಂದಿಗೆ ತೊಗರಿ ಅಂತರ ಬೆಳೆ ಸೂಕ್ತ- ಪ್ರೊ.ಲಿಂಗಣ್ಣ

0
207

ದಾವಣಗೆರೆ:ರೈತರು ಪ್ರತಿ ವರ್ಷ ಮೆಕ್ಕೆಜೋಳ ಬೆಳೆಯುವ ಮೂಲಕ ಏಕಬೆಳೆ ಪದ್ಧತಿಯನ್ನೇ ಅನುಸರಿಸುತ್ತಿದ್ದು ಇಲ್ಲಿಯವರೆಗೂ ಯಾವುದೇ ಬೆಳೆ ಪರಿವರ್ತನೆ ಮಾಡದೇ ಇರುವುದು ಸರಿಯಲ್ಲ. ಮೆಕ್ಕೆಜೋಳದೊಂದಿಗೆ ಮಿಶ್ರ ಬೆಳೆ ಅನುಸರಿಸುವುದು ಸೂಕ್ತ ಎಂದು ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ ತಿಳಿಸಿದರು.
ಮಾಯಕೊಂಡ ಹೋಬಳಿ ಹಿಂಡಸಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಆಹಾರ ಭದ್ರತಾ (ಎನ್‍ಎಫ್‍ಎಸ್‍ಎಂ) ಯೋಜನೆಯಡಿ ರೈತರಿಗೆ ಉಚಿತವಾಗಿ ತೊಗರಿ ಮಿನಿಕಿಟ್ ಅಥವಾ ಕಿರುಚೀಲ ವಿತರಿಸುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಸಂಕಷ್ಟದ ನಡುವೆಯಲ್ಲಿ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ, ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಸರ್ಕಾರದ ಯೋಜನೆಗಳನ್ನು, ಸೌಲಭ್ಯ ವಿವರಗಳನ್ನು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಸುಮಾರು 29000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಬೆಳೆಯುತ್ತಿದ್ದು, ಅದರಲ್ಲಿ ಸಾಮಾನ್ಯವಾಗಿ ಶೇ.90 ರಷ್ಟು ಜನರು ಏಕಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಅಲ್ಲದೇ ಪ್ರತಿ ವರ್ಷ ಅದೇ ಮೆಕ್ಕೆಜೋಳ ಬೆಳೆಯನ್ನು ಯಾವುದೇ ಬೆಳೆ ಪರಿವರ್ತನೆ ಮಾಡದೇ ಬೆಳೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ಯಾವುದಾದರೂ ಅಂತರ ಬೆಳೆ ಬೆಳೆಯಲು ಅನುಕೂಲವಾಗುವಂತಹ ಕಾರ್ಯಕ್ರಮ ಹಮ್ಮಿಕೊಂಡು ರೈತರಿಗೆ ಸಹಾಯ ಮಾಡಬೇಕೆಂದು ಕೃಷಿ ಇಲಾಖೆಯವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರಂತೆ ಪ್ರಸಕ್ತ ಮುಂಗಾರಿನಲ್ಲಿ ಸುಮಾರು 2000 ಹೆಕ್ಟೇರ್ ಪ್ರದೇಶಕ್ಕೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ತೊಗರಿ ಕಿರು ಚೀಲ ವಿತರಣೆ ಕಾರ್ಯಕ್ರಮ ಬಂದಿದ್ದು, ಅದರಂತೆ ಈ ಗ್ರಾಮದಲ್ಲಿ ವಿತರಣೆ ಮಾಡುತ್ತಿದ್ದೇವೆ. ರೈತರು ಯೋಜನೆಯ ಕುರಿತು ಇಲಾಖೆಯೊಂದಿಗೆ ತಾಂತ್ರಿಕ ಮಾಹಿತಿ ಪಡೆದು, ವ್ಶೆಜ್ಞಾನಿಕವಾಗಿ ರಸಗೊಬ್ಬರ ಬಳಕೆ ಮಾಡಿಕೊಂಡು ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು ಹಾಗೂ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರೊ. ಲಿಂಗಣ್ಣ ಸಲಹೆ ನೀಡಿದರು.
ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಮಾತನಾಡಿ, ಈ ಭಾಗದ ರೈತರು ಮೊದಲಿನಿಂದಲೂ ಶೇಂಗಾ, ಅವರೆ, ರಾಗಿ, ಅಲಸಂದೆ, ಹತ್ತಿ ಬೆಳೆಗಳನ್ನು ಬೆಳೆಯುತ್ತಿದ್ದರು. ಹಾಗೂ ಅವುಗಳನ್ನೇ ತಮ್ಮ ಮುಖ್ಯ ಆಹಾರ ಭಾಗವಾಗಿ ಮಾಡಿಕೊಂಡಿದ್ದರಿಂದ ನಮ್ಮ ಹಿರಿಯರು ರೋಗ ರಹಿತ, ಒತ್ತಡ ರಹಿತ ಜೀವನ ಮಾಡಿದ್ದನ್ನ ಕಂಡಿದ್ದೇವೆ ಎಂದು ನೆನಪಿಸಿಕೊಂಡರು.
ಆದರೆ ಆಧುನಿಕ ಬೇಸಾಯ ಪದ್ಧತಿಯಿಂದ ಏಕಬೆಳೆ, ಕೇವಲ ರಾಸಾಯನಿಕ ಗೊಬ್ಬರ ಬಳಕೆ, ಅತಿಯಾದ ಕೀಟನಾಶಕ ಬಳಕೆ ಮಾಡುತ್ತಿರುವುದರಿಂದ ಇಂದು ರೋಗಯುಕ್ತ, ಒತ್ತಡಯುಕ್ತ ಜೀವನ ಹಾಗೂ ಸಾಲದ ಸುಳಿಯಲ್ಲಿ ರೈತ ಸಿಲುಕಿಕೊಂಡಿದ್ದಾನೆ. ಅದರಿಂದ ಹೊರ ಬರಲು ಏಕಬೆಳೆ ಬದಲು ಅಂತರಬೆಳೆ ಅಥವಾ ಬಹುಬೆಳೆ ಬೆಳೆಯಬೇಕೆಂದು ರೈತರಿಗೆ ಮನವಿ ಮಾಡಿದರು.
ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಇಲಾಖಾ ಸೌಲಭ್ಯಗಳ ಕುರಿತು ಹಾಗೂ ಈ ಹಂಗಾಮಿನಲ್ಲಿ ಮೆಕ್ಕೆಜೋಳದಲ್ಲಿ ಅಂತರಬೆಳೆಯಾಗಿ ತೊಗರಿ ಬೇಸಾಯದ ತಾಂತ್ರಿಕ ಮಾಹಿತಿ ನೀಡಿದರು ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ವಿತರಿಸುತ್ತಿರುವ ಟಿಎಸ್3ಆರ್ ಕಿರುಚೀಲದ ತೊಗರಿ ತಳಿ ವೈಜ್ಞಾನಿಕ ವಿವರಗಳನ್ನು ಮತ್ತು ಅದರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ ತಾವು ಉತ್ತಮವಾಗಿ ಈ ಹಂಗಾಮಿನಲ್ಲಿ ಬೆಳೆದು ಅದೇ ಬೀಜಗಳನ್ನು ಮುಂದಿನ ಮೂರು ಹಂಗಾಮಿಗೆ ಬಳಕೆ ಮಾಡಿಕೊಳ್ಳಬಹುದು. ಇದರಿಂದ ಬಿತ್ತನೆ ಬೀಜಕ್ಕಾಗಿ ಇಲಾಖೆ ಅಥವಾ ಅಂಗಡಿಗಳ ಬಾಗಿಲಿಗೆ ಅಲೆದಾಡುವುದನ್ನು ತಪ್ಪಿಸಬಹುದು. ಮೆಕ್ಕೆಜೋಳದಲ್ಲಿ ತೊಗರಿ ಬೆಳೆಯನ್ನು ಅಂತರ ಬೆಳೆಯನ್ನಾಗಿ ಬೆಳೆಯುವುದರಿಂದ ಮೆಕ್ಕೆಜೋಳದ ಇಳುವರಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಜೊತೆಗೆ ಹೆಚ್ಚುವರಿಯಾಗಿ 2 ರಿಂದ 3 ಕ್ವಿಂಟಾಲ್ ಪ್ರತಿ ಎಕರೆಗೆ ತೊಗರಿ ಉತ್ಪಾದನೆಯಾಗುವುದರಿಂದ ಪ್ರಸ್ತುತ ದರಕ್ಕೆ ಹೋಲಿಸಿದಲ್ಲಿ ಸುಮಾರು 10 ಸಾವಿರದಿಂದ 12 ಸಾವಿರ ರೂ. ಹೆಚ್ಚುವರಿ ಆದಾಯ ಪಡೆಯಬಹುದಾಗಿದ್ದು, ಆದಾಯದ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ರೈತರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಾಗರಾಜ, ಮಾಯಕೊಂಡ ಗ್ರಾಮದ ಗಣ್ಯರಾದ ದೇವೇಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಹೆಚ್.ಕೆ., ಕೃಷಿ ಅಧಿಕಾರಿ ಆರ್.ವಿ. ತೇಜವರ್ಧನ್ ಪ್ರಗತಿ ಪರ ರೈತರುಗಳು ಹಾಜರಿದ್ದರು.

LEAVE A REPLY

Please enter your comment!
Please enter your name here