ಮಡಿಕೇರಿ -ಜೀವವಿದ್ದರೆ ಮಾತ್ರ ಜೀವನ ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ಆರೋಗ್ಯದ ಕಡೆ ಜಾಗ್ರತೆ ವಹಿಸಬೇಕು. ಕೋವಿಡ್-19 ಮಹಾಮಾರಿಯ ವಿರುದ್ದ ಹೋರಾಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಶಾಸಕರಾದ ಅಪ್ಪಚ್ಚು ರಂಜನ್ ಅವರು ಹೇಳಿದರು.
ನಗರದ ಕೂರ್ಗ್ ಕಮ್ಯೂನಿಟಿ ಸಭಾಂಗಣದಲ್ಲಿ ಶುಕ್ರವಾರ ಛಾಯಾ ಚಿತ್ರಗ್ರಾಹಕರಿಗೆ ಆಹಾರ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂತಹವರಿಗೆ ಪ್ರತಿಯೊಬ್ಬರು ಸಹಾಯ ಮಾಡುವ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಲಾಕ್ಡೌನ್ನಿಂದ ಅನೇಕ ವರ್ಗದ ಕಾರ್ಮಿಕರು, ದಿನಗೂಲಿ ನೌಕರರು ಕೆಲಸವಿಲ್ಲದೇ ಮನೆಯಲ್ಲಿ ಉಳಿಯುವಂತಾಗಿದೆ. ಕುಟುಂಬದ ನಿರ್ವಹಣೆ ಮಾಡಲು ಅಶಕ್ತರಾಗಿರುವ ಸ್ಥಿತಿಯಲ್ಲಿದ್ದಾರೆ. ಅಂತಹವರ ನೆರವಿಗೆ ಪ್ರತಿಯೊಬ್ಬರು ಧಾವಿಸಬೇಕು ಎಂದರು.
ಎಲ್ಲರಿಗೂ ಲಸಿಕೆ ನೀಡುವ ತನಕ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು. ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಕೋವಿಡ್-19 ಪಾಸಿಟಿವ್ ಬಂದವರು ಮನೆಯಿಂದ ಹೊರಬಾರದು. ಪ್ರತಿಯೊಬ್ಬರು ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಎಂದು ಅವರು ಹೇಳಿದರು.
ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸುರೇಶ್ ಮಾವಟ್ಕರ್, ಉಪಾಧ್ಯಕ್ಷರಾದ ಜನಾರ್ಧನ, ಕಾರ್ಯದರ್ಶಿ ದೀಪಕ್ ಕುಮಾರ್, ವಿರಾಜಪೇಟೆ ತಾಲೂಕು ದಕ್ಷಿಣ ಕೊಡಗು ಛಾಯಾ ಗ್ರಾಹಕರ ಸಂಘದ ಅಧ್ಯಕ್ಷರಾದ ರವೀಂದ್ರ ಕುಮಾರ್, ಸೋಮವಾರಪೇಟೆ ತಾಲ್ಲೂಕು ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣಿ, ಕೊಡಗು ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘದ ಸರ್ವ ಪದಾಧಿಕಾರಿ ಇತರರು ಇದ್ದರು.