ಬಳ್ಳಾರಿ:ಆಕ್ಟೊಬರ್:05:- ಬಳ್ಳಾರಿ ನಗರದಲ್ಲಿ ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಉಚಿತ ಬಸ್ ಪಾಸ್ ಗಾಗಿ ಆಗ್ರಹಿಸಿ ವಿವಿಧ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಸೇರಿ ರಾಯಲ್ ಸರ್ಕಲ್, ದುರ್ಗಮ್ಮ ಗುಡಿ, S P ಸರ್ಕಲ್ ಮುಖಾಂತರ ಪ್ರತಿಭಟನಾ ಮೆರವಣಿಗೆಯು KSRTC ಡಿಪೋ ಮುಂದೆ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ AIDSO ಜಿಲ್ಲಾ ಉಪದ್ಯಕ್ಷರಾದ ಜೆ. ಸೌಮ್ಯ ಅವರು ಮಾತನಾಡುತ್ತಾ ನಿಮಗೆ ತಿಳಿದಿರುವಂತೆ ಹಿಂದಿನ ವರ್ಷದ ವಿದ್ಯಾರ್ಥಿ ಬಸ್ ಪಾಸ್ನ ವಿಸ್ತರಣೆಯ ಅವಧಿ ಮುಗಿದಿದೆ. ಆದರೆ ಇನ್ನು ಕೆಲವು ಕೋರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ, ಮತ್ತೆ ಕೆಲವು ಕೋರ್ಸ್ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ವಿದ್ಯಾರ್ಥಿಗಳು ಈಗ ತಮ್ಮ ಹಳ್ಳಿ – ಊರುಗಳಿಂದ ಶಾಲಾ-ಕಾಲೇಜಿಗೆ ಬರಬೇಕಾದರೆ ಬಸ್ ಟಿಕಟ್ನ ದರ ಪಾವತಿಸಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಬಹಳಷ್ಟು ದೂರದ ಕಿ.ಮೀ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೆ ಬಹುಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಟಿಕೆಟ್ ದರ ಹೊರೆಯಾಗಿ ಪರಿಣಮಿಸಿದೆ. ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ಜನರ ಜೀವನವನ್ನು ಅತ್ಯಂತ ದುರ್ಭರಗೊಳಿಸಿದೆ. ಅಸಂಖ್ಯಾತ ಜನ ಬಡ ಕುಟುಂಬಕ್ಕೆ ಸೇರಿದವರು ಜೀವನೋಪಾಯಕ್ಕಾಗಿ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವ ಸಂದರ್ಭ ಉಂಟಾಗಿದೆ ಮತ್ತು ಇವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರದ ಸೌಲಭ್ಯವನ್ನು ಅವಲಂಬಿಸಿರುತ್ತಾರೆ. ಕಳೆದ ವರ್ಷ ವಿದ್ಯಾರ್ಥಿಗಳು ಪಡೆದಿದ್ದ ವಾರ್ಷಿಕ ಬಸ್ಪಾಸ್ ಸಂಪೂರ್ಣವಾಗಿ ಉಪಯೋಗವಾಗಿಲ್ಲ ಎಂಬುದು ತಮಗೆ ತಿಳಿದಿದೆ. ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್ಡೌನ್ ಆದ ಪರಿಣಾಮ ಬಹುಪಾಲು ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಆಫ್ಲೈನ್ ತರಗತಿಗಳು ನಡೆದಿಲ್ಲ. ಈ ಕಾರಣದಿಂದಾಗಿ, ವರ್ಷದ ಮೊದಲಲ್ಲೇ ಸಂಪೂರ್ಣ ಬಸ್ಪಾಸ್ ದರ ಪಾವತಿಸಿದ್ದರೂ, ವಾರ್ಷಿಕ ಬಸ್ಪಾಸ್ ಸುಮಾರು ಅರ್ಧವರ್ಷಕ್ಕೂ ಹೆಚ್ಚಾಗಿ ಬಳಕೆ ಆಗಿಲ್ಲ. ಈಗ ಮತ್ತೊಮ್ಮೆ ವಿದ್ಯಾರ್ಥಿಗಳು ವಾರ್ಷಿಕ ಬಸ್ಪಾಸ್ನ ಸಂಪೂರ್ಣ ವೆಚ್ಚ ಭರಿಸಿ ಪಡೆಯಬೇಕಾದಲ್ಲಿ, ಅವರ ಮೇಲೆ ಅತ್ಯಂತ ಹೊರೆ ಬೀಳುತ್ತದೆ. ಈಗಾಗಲೇ ಆರ್ಥಿಕವಾಗಿ ಕುಗ್ಗಿರುವ ಕುಟುಂಬಗಳಿಗೆ ಈ ವೆಚ್ಚ ಮತ್ತಷ್ಟು ಹೊರೆಯನ್ನು ತರುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಮತ್ತು ಅವರ ಆರ್ಥಿಕ ಸ್ಥಿತಿಗತಿಗಳನ್ನು ತಮ್ಮ ಗಮನದಲ್ಲಿ ಇರಿಸಿಕೊಂಡು, ಪ್ರಸ್ತುತ ವರ್ಷದ ಬಸ್ಪಾಸ್ ಅನ್ನು ಉಚಿತ ಮಾಡಬೇಕು ಹಾಗೂ ಹಿಂದಿನ ವರ್ಷದ ಪಾಸ್ ಅನ್ನೆ ಈ ಶೈಕ್ಷಣಿಕ ವರ್ಷ ಪೂರ್ತಿ ಬಳಕೆ ಮಾಡಲು ಸಾರಿಗೆ ಇಲಾಕೆಯಿಂದ ಅನುಮತಿ ನೀಡಬೇಕು ಆಗ್ರಹಿಸಿದರು.
ಬೇಡಿಕೆಗಳು :-
1.ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಸ್ತುತ ಶೈಕ್ಷಣಿಕ ವರ್ಷದ ಬಸ್ಪಾಸ್ ಅನ್ನು ಉಚಿತವಾಗಿ ನೀಡಿರಿ.
2.ಅಲ್ಲಿಯವರೆಗೂ ಹಿಂದಿನ ವರ್ಷದ ಪಾಸ್ ಹಾಗು ಶಾಲಾ-ಕಾಲೇಜಿನ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಲು ಅನುಮತಿ ನೀಡಿ.
ಈ ಸಂದರ್ಭದಲ್ಲಿ AIDSO ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು ಕೆ. ಈರಣ್ಣ, ಎಮ್. ಶಾಂತಿ, ಕಂಬಳಿ ಮಂಜುನಾಥ, ಅನುಪಮಾ, ಸಿದ್ದು, ನಿಹಾರಿಕ ಮತ್ತು ಸದಸ್ಯರು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ:-ಮಹೇಶ್