ಬಳ್ಳಾರಿ,ಮಾ.09:ಕಾರ್ಮಿಕ ಇಲಾಖೆ ವತಿಯಿಂದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸಾಂಪ್ರದಾಯಿಕ ಸಪ್ತಾಹ ಮತ್ತು ಪಿಂಚಣಿ ಸಪ್ತಾಹ ಎಂಬ ಘೋಷವಾಕ್ಯದಡಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ದನ್ ಹಾಗೂ ಇ-ಶ್ರಮ್ ಹಾಗೂ ವಿವಿಧ ಕಾರ್ಮಿಕ ಇಲಾಖೆಗಳ ಯೋಜನೆಗಳ ಜಾಗೃತಿ ಮೂಡಿಸುವ ಜಾಥಾಗೆ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಡಿಸಿ ಮಂಜುನಾಥ ಅವರು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ದನ್ ಹಾಗೂ ಇ-ಶ್ರಮ್ ಹಾಗೂ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಪರಿಣಾಮಕಾರಿಯಾದ ಜಾಗೃತಿ ಮೂಡಿಸಬೇಕು ಎಂದರು.
ಸರಕಾರದ ವಿವಿಧ ಯೋಜನೆಗಳು ನಿಗದಿಪಡಿಸಿದ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಅದರ ಉದ್ದೇಶ ಈಡೇರಲು ಸಾಧ್ಯ ಎಂಬುದನ್ನು ಅರಿತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ವ್ಯಾಪ್ತಿಯ ವಿವಿಧ ಯೋಜನೆಗಳು ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಈ ಆಟೋ ಜಾಗೃತಿ ಜಾಥಾವು ಒಂದು ವಾರಗಳ ಕಾಲ ಅಂದರೇ ಮಾ.13ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ದನ್ ಹಾಗೂ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿಸುವ ಇ-ಶ್ರಮ್ ಕುರಿತು ಜಾಗೃತಿ ಮೂಡಿಸಲಿದೆ.
ಈ ಜಾಥಾವು 16 ವರ್ಷದಿಂದ 59 ವರ್ಷದೊಳಗಿನ ಎಲ್ಲಾ ವಲಯದ ಅಸಂಘಟಿತ ಕಾರ್ಮಿಕರು ನೋಂದಾಯಿಸುವ ಇ-ಶ್ರಮ್ ಕಾರ್ಡ್ ಹಾಗೂ ಅದರ ಪ್ರಯೋಜನಗಳು, ಸೌಲಭ್ಯಗಳು ಹಾಗೂ ಅಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ ಯೋಜನೆಯನ್ನು ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸುವ ಪ್ರಧಾನ ಮಂತ್ರಿ ಶ್ರಮ್ಯೋಗಿ ಮಾನ್-ಧನ್ ಎಂಬ ಮಹತ್ವಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ಅಸಂಘಟಿತ ವಲಯ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂಬುದರ ಕುರಿತು ಅರಿವು ಮೂಡಿಸಲಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಮಾರಿಕಾಂಬ ಹುಲಿಕೋಟಿ, ಕಮಲ್ ಶಾ ಅಲ್ತಫ್ ಅಹಮದ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರಾದ ರವಿದಾಸ್.ಎಂ, ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ನಿರ್ದೇಶಕರಾದ ಮೌನೇಶ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಇದ್ದರು.