ಬಳ್ಳಾರಿ,ಮಾ.09 : ಸಂಡೂರು ತಾಲೂಕಿನ ಸುಶೀಲಾನಗರ ಬೈಪಾಸ್ ರೋಡ್ ಹತ್ತಿರವಿರುವ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಜಮೀನಿನಲ್ಲಿ ಅಪಾರ ಪ್ರಮಾಣದ ಅಕ್ಕಿ ಅಕ್ರಮ ದಾಸ್ತಾನು ಮಾಡಿದ್ದ ಮಾಹಿತಿ ತಿಳಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಸಂಡೂರು ಆಹಾರ ನಿರೀಕ್ಷಕರು ಹಾಗೂ ಇನ್ನೀತರ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಅಕ್ರಮ ಅಕ್ಕಿ ದಾಸ್ತಾನಿನ ಮೌಲ್ಯವು ರೂ.2.35 ಲಕ್ಷ ರೂ.ಮೌಲ್ಯದ 157 ಕ್ವಿಂಟಾಲ್ ಎಂದು ತಿಳಿದುಬಂದಿದೆ. ಅಕ್ರಮ ದಾಸ್ತಾನು ಮಾಡಿದ್ದ ಸುಲ್ತಾನ್ ಸಂಡೂರು,ಸತ್ಯಪ್ಪ ಸಂಡೂರು, ಕುಮಾರಸ್ವಾಮಿ ಸಂಡೂರು, ಪ್ರದೀಪ ತಂದೆ ಸತ್ಯಪ್ಪ ಸಂಡೂರು, ಷಂಶು ಬೀ ಗಂಡ ಲೇಟ್ ಬಳ್ಳಾರಿ ಬಾಷಾಸಾಬ್ ದೌಲತ್ಪುರ ಗ್ರಾಮ,ಸಂಡೂರು ಇವರ ಮೇಲೆ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.