ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಅಗತ್ಯ ಕಾರ್ಯಯೋಜನೆ ರೂಪಿಸಿ: ಜಿಲ್ಲಾಧಿಕಾರಿ ಆರ್.ಲತಾ

0
140

ಬೆಂಗಳೂರು ಗ್ರಾಮಾಂತರ, ಸೆ: 12: ಜಿಲ್ಲೆಯ ಎಲ್ಲಾ ಶಾಲೆಯ ಶಿಕ್ಷಕರು ವಿಷಯವಾರು ಕೈಪಿಡಿಗಳನ್ನು ಸಿದ್ಧಪಡಿಸಿಕೊಂಡು, ಮಕ್ಕಳ ಬರವಣಿಗೆಗೆ ಅಗತ್ಯ, ವಾತಾವರಣ ಕಲ್ಪಿಸುವ ಮೂಲಕ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ, ಗುಣಮಟ್ಟದ ಫಲಿತಾಂಶ ಪಡೆಯಲು ಅಗತ್ಯ ಕಾರ್ಯಯೋಜನೆ ರೂಪಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್‌.ಲತಾ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು “ಬೆಂಗಳೂರು ಗ್ರಾಮಾಂತರ ಜಿಲ್ಲೆಯು 2022-2023ನೇ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗುಣಮಟ್ಟದಿಂದ ಕೂಡಿದ ಶೇಕಡಾವಾರು 100ರಷ್ಟು ಫಲಿತಾಂಶ ಸಾಧಿಸುವಂತೆ ಕಾರ್ಯಯೋಜನೆ ರೂಪಿಸುವ ಶಿಕ್ಷಕರ ಪೂರ್ವ ಸಿದ್ಧತಾ ಸಭೆ “ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿಭಾಗಿಸಿ, ಎಲ್ಲಾ ಶಿಕ್ಷಕರಿಗೂ ಇಂತಿಷ್ಟು ವಿದ್ಯಾರ್ಥಿಗಳೆಂದು ದತ್ತು ನೀಡುವ ವ್ಯವಸ್ಥೆ ಜಾರಿಗೊಳಿಸಿ, ಆಯಾ ಶಿಕ್ಷಕರು ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಇದೇ ರೀತಿ ಚೆನ್ನಾಗಿ ಓದುವ ವಿದ್ಯಾರ್ಥಿಗಳ ಜತೆ ಸಾಧಾರಣಾ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಜತೆ ಓದಲು ಬಿಡಬೇಕು, ಇದರಿಂದಾಗಿ ಸಾಧಾರಣ ವಿದ್ಯಾರ್ಥಿಗಳು ಉತ್ತಮವಾಗಿ, ಹಿಂದುಳಿದ ವಿದ್ಯಾರ್ಥಿಗಳು ಪಾಸಿಂಗ್‌ ವಿದ್ಯಾರ್ಥಿಯಾಗಲು ಸಹಕಾರಿಯಾಗುತ್ತದೆ. ಇವೆಲ್ಲವೂ ಶಿಕ್ಷಕರ ಮಾರ್ಗದರ್ಶನಲ್ಲಿಯೇ ನಡೆಯಬೇಕು. ಎಲ್ಲಾ ಮಕ್ಕಳನ್ನು ಶಿಕ್ಷಕರು ದತ್ತು ತೆಗೆದುಕೊಂಡು ಕಲಿಕೆಗೆ ಪ್ರೋತ್ಸಾಹ ನೀಡುವಂತೆ ಶಿಕ್ಷಕರಿಗೆ ತಿಳಿಸಿದರು.

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ವಿಷಯವಾರು ರಸಪ್ರಶ್ನೆ ಕಾರ್ಯಕ್ರಮಗಳು, ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳು ಭಯಭೀತರಾಗದೆ ಸಂತೋಷವಾಗಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಹಾಗೂ ಶಾಲೆಯ ಮುಖ್ಯ ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ. ವಿಭಾಗದ ಎಲ್ಲಾ ಮಕ್ಕಳ ಸಂಪೂರ್ಣ ಮಾಹಿತಿ ಹೊಂದಿರಬೇಕು ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳ ಮೇಲೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕಾಗಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಕಾರ‍್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳ ಬಗ್ಗೆ ವಿಶೇಷ ಒತ್ತು ನೀಡಲು ಆಯಾ ಶಾಲೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು. ಶನಿವಾರ ಪೂರ್ಣ ತರಗತಿಗಳನ್ನು ನಡೆಸಬೇಕು. ಅಗತ್ಯವಿದ್ದರೆ ಶಾಲೆ ಮುಖ್ಯ ಶಿಕ್ಷಕರ ವಿವೇಚನೆಯಂತೆ ಭಾನುವಾರವೂ ಕೆಲವರು ತರಗತಿಗಳನ್ನು ತೆಗೆದುಕೊಂಡು ಎಲ್ಲಾ ಶಾಲೆಗಳಿಗೂ ಪ್ರಶ್ನೋತ್ತರ ಮಾಲಿಕೆ ಸರಬರಾಜು ಮಾಡಿ, ನೂತನ ಪಠ್ಯಕ್ರಮಗಳಾದ ವಿಜ್ಞಾನ ಮತ್ತು ಗಣಿತ ವಿಷಯದ ಅಧ್ಯಾಪಕರಿಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.

ಶಾಲಾ ಅವಧಿ ಹೊರತುಪಡಿಸಿ ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ವಿಶೇಷ ತರಗತಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದ್ದು, ಇದರಂತೆ ಎಲ್ಲಾ ಪ್ರೌಢಶಾಲೆಗಳಲ್ಲೂ ತರಗತಿಗಳು ನಡೆಯುತ್ತಿವೆ. ಇವೆಲ್ಲವುಗಳ ಉದ್ದೇಶ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವುದೇ ಆಗಿದೆ. ಶಿಕ್ಷಕರ ಜತೆಗೆ ಪಾಲಕರೂ ಮಕ್ಕಳ ಶೈಕ್ಷಣಿಕ ಪ್ರಗತಿಯ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದರೆ ಫಲಿತಾಂಶ ಸುಧಾರಣೆ ಆಗಲಿದೆ ಎಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕ ಶ್ರೀಕಂಠ ಸೇರಿದಂತೆ ಜಿಲ್ಲೆಯ ನಾಲ್ಕು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here