ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತಿಕರಣ ಸಂಘ (ರಿ) ಬೆಂಗಳೂರು ವತಿಯಿಂದ ದಿನಾಂಕ:15.02.2024 ರಿಂದ 20.02.2024 ರವರೆಗೂ ಸಚಿವರಿಗೊಂದು ಪತ್ರ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷರಾದ ರಮೇಶ್ ಎನ್. ಕ.ರಾ.ಪಂ.ಅ.ಅ (ಬಿ-ಗ್ರೇಡ್) ಹು.ಉ.ಸಂ(ರಿ) ,ಬೆಂಗಳೂರು ಇವರು ಪತ್ರಿಕಾ ಪ್ರಕಟಣೆಯನ್ನು ನೀಡಿದ್ದು,ಪ್ರಕಟಣೆಯಲ್ಲಿ ತಿಳಿಸಿರುವಂತೆ
ರಾಜ್ಯದಲ್ಲಿ 6021 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 6021 ಪಂಚಾಯತ್ ಅಭಿವೃದ್ಧಿ ಹುದ್ದೆಗಳು ಮಂಜೂರಾತಿಯಾಗಿರುತ್ತವೆ. ಇವುಗಳಲ್ಲಿ 660 ಹುದ್ದೆಗಳು ಖಾಲಿ ಇದ್ದು, ಎಲ್ಲಾ ಹುದ್ದೆಗಳನ್ನು ಏಕಕಾಲದಲ್ಲಿ “ಬಿ-ಗ್ರೇಡ್ ಹುದ್ದೆಗೆ” ಉನ್ನತಿಕರಿಸಬೇಕೆಂದು ಕಳೆದ 13 ವರ್ಷಗಳಿಂದ ಸರ್ಕಾರಕ್ಕೆ ರಾಜ್ಯದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಬೇಡಿಕೆ ಮಾತ್ರ ಈಡೇರಿರುವುದಿಲ್ಲ.
ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಮನರೇಗಾ, ಸ್ವಚ್ಛಭಾರತ್ ಮೀಷನ್, ವಸತಿ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಅನುಷ್ಠಾನ ಮಾಡುವ ಹೊಣೆಗಾರಿಕೆ ಹೊಂದಿವೆ ಹಾಗೂ ರಾಜ್ಯದ 43 ಇಲಾಖೆಗಳ ಪೈಕಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸರಿಸಮಾನ ಇರುವ ಇತರೆ ಯಾವುದೇ ಇಲಾಖೆಯ ಹುದ್ದೆಗೆ ಈ ಪ್ರಮಾಣದ ಯೋಜನೆಗಳ ಅನುಷ್ಠಾನಕ್ಕೆ ಹಣ ಬಟವಾಡೆ ಮಾಡುವ ಅಧಿಕಾರ ನೀಡಲಾಗಿರುವುದಿಲ್ಲ. ಹಾಗೂ ಪ್ರತಿಯೊಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ತನ್ನ ಸಹಿ ಬಳಸಿ ಕೋಟಿ ಕೋಟಿಗೂ ಹಣವನ್ನು ಯೋಜನೆಗಳಿಗೆ ಬಟವಾಡೆ ಮಾಡಬೇಕಿದೆ.
ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಸ್ಥಳೀಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದ್ದು, ಅಧಿಕಾರ ವಿಕೇಂದ್ರಿಕರಣ ತತ್ವದಡಿಯಲ್ಲಿ ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ಏಕಕಾಲದಲ್ಲಿ ಯಾವುದೇ ಆರ್ಥಿಕ ನಷ್ಟವಿಲ್ಲದಂತೆ ಉನ್ನತಿಕರಿಸಲು ಅವಕಾಶವಿದೆ. ಹುದ್ದೆ ಉನ್ನತಿಕರಣದಿಂದ ಇತರೆ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಲು, ಯೋಜನೆಗಳ ಸಮಪರ್ಕವಾಗಿ ಅನುಷ್ಠಾನಗೊಳಿಸಲು ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅವಕಾಶ ದೊರೆಯುತ್ತದೆ.
ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ “ಬಿ- ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ವತಿಯಿಂದ “ಸಚಿವರಿಗೊಂದು ಪತ್ರ” ಅಭಿಯಾನ ಕಾರ್ಯಕ್ರಮವನ್ನು ಇದೇ ಫೆಬ್ರುವರಿ 15 ರಿಂದ 20ರವರೆಗೂ ನಡೆಸಲಾಗುತ್ತಿದ್ದು. 50 ಪೈಸೆ ಅಂಚೆ ಕಾರ್ಡನಲ್ಲಿ ರಾಜ್ಯದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತಮ್ಮ ಹೆಸರು ಮತ್ತು ಗ್ರಾ.ಪಂ.ಹೆಸರನ್ನು ಒಳಗೊಂಡ ಮಾಹಿತಿಯೊಂದಿಗೆ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಬಿ-ಗ್ರೇಡ್ ನಿವೇಧನೆಯನ್ನು ಬರಹ ಅಥವಾ ಮುದ್ರಿತ ರೂಪದಲ್ಲಿ ತಯಾರಿಸಿ ಸಂಬಂಧಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಿಗೆ ನಿಗಧಿತ ದಿನಾಂಕದೊಳಗೆ ಸಲ್ಲಿಸುವುದು ನಂತರ ಜಿಲ್ಲಾವಾರು ದಿನಾಂಕ: 21.02.2024ರಂದು ಮಾನ್ಯ ಗೌರವಾನ್ವಿತ ಸಚಿವರಿಗೆ ಪತ್ರ ಕಳುಹಿಸುವ ಮೂಲಕ ಅಭಿಯಾನ ಮುಕ್ತಾಯಗೊಳ್ಳತ್ತದೆ.