“ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಅಭಿಯಾನ, ಬಳ್ಳಾರಿ ಡಿಸಿ ಪವನ್‍ಕುಮಾರ್ ಮಾಲಪಾಟಿ ಕುರುಗೋಡು ತಾಲೂಕಿನ ಯರ್ರಂಗಳಿಗಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಸೆ.17ರಂದು

0
128

ಬಳ್ಳಾರಿ,ಸೆ.12: ಬಳ್ಳಾರಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಕುರುಗೋಡು ತಾಲೂಕಿನ ಕೋಳೂರು ಹೋಬಳಿಯ ಯರ್ರಂಗಳಿಗಿ ಗ್ರಾಮದಲ್ಲಿ ಸೆ.17ರಂದು ಗ್ರಾಮವಾಸ್ತವ್ಯ ನಡೆಸಿ ಗ್ರಾಮಸ್ಥರ ದೂರು-ದುಮ್ಮಾನ ಆಲಿಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ. ಜಿಲ್ಲಾಧಿಕಾರಿಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾಥ್ ನೀಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಿದ್ದಾರೆ ಮತ್ತು ಉಳಿದ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ.

ಜಿಲ್ಲಾಧಿಕಾರಿಗಳು ಯರ್ರಂಗಳಿಗಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ನಡೆಸಲಿದ್ದು, ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಕುರುಗೋಡು ತಹಸೀಲ್ದಾರರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇರಲಿದ್ದಾರೆ.
ತಾಲೂಕುಮಟ್ಟದಲ್ಲಿ ತಹಸೀಲ್ದಾರರು ಸಹ ಒಂದೊಂದು ಊರುಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ದನಿಯಾಗುವ ಕೆಲಸ ಮಾಡಲಿದ್ದಾರೆ. ಈ ಗ್ರಾಮವಾಸ್ತವ್ಯದ ಮೂಲಕ ಜನರ ಮನೆಬಾಗಿಲಿಗೆ ಸರಕಾರ ತೆರಳಿದಂತಾಗಲಿದೆ.

ವಿವಿಧೆಡೆ ಗ್ರಾಮ ವಾಸ್ತವ್ಯದ ವಿವರ: ಸೆ.17ರಂದು ಕುರುಗೋಡು ತಾಲೂಕಿನ ಕೋಳೂರು ಹೋಬಳಿಯ ಯರ್ರಂಗಳಿಗಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಕುರುಗೋಡು ತಾಲೂಕಿನ ತಹಶೀಲ್ದಾರರು, ಬಳ್ಳಾರಿ ತಾಲೂಕಿನ ಬಳ್ಳಾರಿ ಹೋಬಳಿಯ ಜಾನೆಕುಂಟೆ ಗ್ರಾಮದಲ್ಲಿ ಬಳ್ಳಾರಿ ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಹೋಬಳಿಯ ಟಿ.ಎಸ್.ಕೂಡ್ಲೂರು ಗ್ರಾಮದಲ್ಲಿ ಸಿರುಗುಪ್ಪ ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಂಡೂರು ತಾಲೂಕಿನ ಸಂಡೂರು ಹೋಬಳಿಯ ವೆಂಕಟಗಿರಿ ಗ್ರಾಮದಲ್ಲಿ ಸಂಡೂರು ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಂಪ್ಲಿ ತಾಲೂಕಿನ ಕಂಪ್ಲಿ ಹೋಬಳಿಯ ದೇವಲಾಪುರ ಗ್ರಾಮದಲ್ಲಿ ಕಂಪ್ಲಿ ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವ್ಯಾಸ್ತವ್ಯ ಮಾಡಲಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಹಾಗೂ ಅಧಿಕಾರಿಗಳು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here