ಕುಮಾರಸ್ವಾಮಿ ಕೈಲಿ ಕೆ ಸಿ ಅರ್ ಸುಪಾರಿ

0
137

ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ,ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರನ್ನು ಭೇಟಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಸರ್ವೋಚ್ಚ ನಾಯಕರಾದ ಹೆಚ್.ಡಿ.ದೇವೇಗೌಡರನ್ನು ಕಂಡರೆ ವಿಪರೀತ ವಿಶ್ವಾಸ ಬೆಳೆಸಿಕೊಂಡಿರುವ ಕೆ.ಚಂದ್ರಶೇಖರರಾವ್ ಅವರು ಈ ಭೇಟಿಯ ಸಂದರ್ಭದಲ್ಲಿ ಕುಮಾರಸ್ವಾಮಿ ಸ್ವಾಮಿ ಅವರಿಗೆ ಒಂದು ಸುಪಾರಿ ನೀಡಿದರಂತೆ.
ಮುಂಬರುವ ವಿದಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಹೋರಾಡಿ.ನೂರಾ ಮೂವತ್ತರಿಂದ ನೂರಾ ನಲವತ್ತು ಸೀಟುಗಳನ್ನು ಗೆದ್ದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಪ್ರಯತ್ನಿಸಿ.ಇದಕ್ಕೆ ನನ್ನಿಂದ ಏನು ಸಾಧ್ಯವೋ?ಅಷ್ಟೆಲ್ಲ ನೆರವು ನಿಮಗೆ ಸಿಗುತ್ತದೆ ಎಂಬುದು ಚಂದ್ರಶೇಖರರಾವ್ ನೀಡಿದ ಸುಪಾರಿ.
ಅಂದ ಹಾಗೆ ಕರ್ನಾಟಕ ರಾಜಕಾರಣದ ಕುರಿತಂತೆ ಇದುವರೆಗೆ ನಡೆದ ಸರ್ವೇಗಳು ಜೆಡಿಎಸ್ ಪಕ್ಷವನ್ನು ಮೂರನೇ ಸ್ಥಾನದಲ್ಲಿರಿಸಿವೆ.ಪ್ರತಿಪಕ್ಷ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದರೆ,ಆಡಳಿತಾರೂಢ ಬಿಜೆಪಿ ಎರಡನೇ ಸ್ಥಾನದಲ್ಲಿದೆ ಎಂಬುದು ಸರ್ವೇಗಳ ಸಧ್ಯದ ಲೆಕ್ಕಾಚಾರ.
ಆದರೆ ಇಂತಹ ಪರಿಸ್ಥಿತಿಯನ್ನು ಬದಲಿಸಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ನಂಬರ್ ಒನ್ ಆಗಿ ಹೊರಹೊಮ್ಮಬೇಕು,ಒಂದು ವೇಳೆ ಇದು ಸಾಧ್ಯವಾಗದೆ ಹೋದರೂ ಜೆಡಿಎಸ್ ಪಕ್ಷ ಪ್ರಬಲ ಶಕ್ತಿಯಾಗಿ ಮೇಲೆದ್ದು ನಿಲ್ಲಬೇಕು ಎಂಬುದು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರ ಬಯಕೆ.
ಚಂದ್ರಶೇಖರರಾವ್ ಅವರ ಈ ಬಯಕೆಗೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಮೇಲಿನ ಸಿಟ್ಟೇ ಕಾರಣ.ಯಾಕೆಂದರೆ ತೆಲಂಗಾಣ ಪ್ರತ್ಯೇಕ ರಾಜ್ಯದ ಸ್ಥಾನ ಮಾನ ಪಡೆಯಲು ಮುಖ್ಯ ಕಾರಣರಾದ ಚಂದ್ರಶೇಖರರಾವ್ ಅವರು ತೆಲಂಗಾಣದ ನಿರ್ವಿವಾದ ಚಕ್ರವರ್ತಿಯಾಗಲು ಬಯಸಿದ್ದರು.
ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಶಕ್ತಿ ಕಳೆದುಕೊಂಡರೆ ಸಹಜವಾಗಿಯೇ ತಮ್ಮ ಬಯಕೆ ಈಡೇರುತ್ತದೆ ಎಂದು ಲೆಕ್ಕ ಹಾಕಿದ್ದರು.ಕುತೂಹಲದ ಸಂಗತಿ ಎಂದರೆ ಅವರಂದುಕೊಂಡಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಕ್ಷೀಣಿಸುತ್ತಾ ಹೋಯಿತು.
ಒಂದು ಕಡೆಯಿಂದ ಕಾಂಗ್ರೆಸ್ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತಿದ್ದಾಗ ಮತ್ತೊಂದು ಕಡೆಯಿಂದ ಕೆ,ಚಂದ್ರಶೇಖರರಾವ್ ಅವರು ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಸಿಕ್ಕಾಪಟ್ಟೆ ಹೊಗಳುತ್ತಿದ್ದರು.ಕಾರಣ?ರಾಜ್ಯದಲ್ಲಿ ಶತ್ರುಭಾದೆ ಕುಂಠಿತವಾಗಿ,ಕೇಂದ್ರ ಸರ್ಕಾರದ ಒಲವು ತೆಲಂಗಾಣದ ಮೇಲೆ ಇದ್ದರೆ ತಮ್ಮ ಲೆಕ್ಕಾಚಾರ ಈಡೇರುತ್ತದೆ ಎಂದು ಅವರು ಭಾವಿಸಿದ್ದರು.
ಆದರೆ ಇಡೀ ಭಾರತವನ್ನು ವಶಪಡಿಸಿಕೊಳ್ಳಲು ತಂತ್ರ ರೂಪಿಸುತ್ತಿರುವ ಮೋದಿ-ಅಮಿತ್ ಶಾ ಜೋಡಿ ತೆಲಂಗಾಣದ ವಿಷಯದಲ್ಲಿ ಸುಮ್ಮನೆ ಕೂರಲು ಸಾಧ್ಯವೇ?ಹಾಗಂತಲೇ ಅವರು ತೆಲಂಗಾಣದ ಮೇಲೂ ಕಣ್ಣು ಹಾಕಿದರು.
ಅಷ್ಟೊತ್ತಿಗಾಗಲೇ ತೆಲಂಗಾಣದ ಮೊಟ್ಟ ಮೊದಲ ಹಣಕಾಸು ಸಚಿವರಾದ,ಕರೀಂನಗರ ಜಿಲ್ಲೆ ಹುಜೂರಾಬಾದ್ ಕ್ಷೇತ್ರದ ಈಟಲ ರಾಜೇಂದ್ರ ಮತ್ತು ಮುಖ್ಯಮಂತ್ರಿ ಚಂದ್ರಶೇಖರಾವ್ ಅವರ ನಡುವಣ ಸಂಬಂಧ ಹಳಸಿತ್ತಲ್ಲ?ಇದನ್ನು ಮೋದಿ-ಅಮಿತ್ ಶಾ ಜೋಡಿ ಎನ್ ಕ್ಯಾಶ್ ಮಾಡಿಕೊಂಡಿತು.
ನೋಡ ನೋಡುತ್ತಿದ್ದಂತೆಯೇ ಈಟಲ ರಾಜೇಂದ್ರ ಕಮಲ ಪಾಳೆಯದ ಜತೆ ಕೈ ಜೋಡಿಸಿದರು.ಮತ್ತೋರ್ವ ನಾಯಕ ರಘುನಂದನರಾವ್ ಕೂಡಾ ಪಕ್ಕಂತ ಕಮಲದ ಪಕಳೆಯ ಮೇಲೆ ಹಾರಿ ಕುಳಿತರು.
ಪರಿಣಾಮ?ಒಂದು ಕಾಲದಲ್ಲಿ ರಾಜಾಸಿಂಗ್ ಅವರಂತಹ ನಾಯಕರ ಕ್ಷೀಣ ಧ್ವನಿಗೆ ಸೀಮಿತವಾಗಿದ್ದ ಬಿಜೆಪಿ ತೆಲಂಗಾಣದಲ್ಲಿ ಇದ್ದಕ್ಕಿದ್ದಂತೆ ನಾಗಾಲೋಟ ಶುರು ಮಾಡಿತು.ಹೈದ್ರಾಬಾದ್ ನಲ್ಲಿದ್ದ ಆರ್.ಎಸ್.ಎಸ್.ಕಚೇರಿ ಚುರುಕಾಯಿತು.
ಹೀಗಾಗಿ,ತಮಿಳ್ನಾಡಿನ ರಾಜಕೀಯದಲ್ಲಿ ಮೂಗು ತೂರಿಸಿದಂತೆ ತೆಲಂಗಾಣದ ರಾಜಕಾರಣದಲ್ಲೂ ಬಿಜೆಪಿ ಮೂಗು ತೂರಿಸುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ಪಕ್ಷವನ್ನು ದುರ್ಬಲಗೊಳಿಸಿ ಅಧಿಕಾರ ಹಿಡಿಯಲು ಅದು ಬಯಸಿದೆ ಎಂಬುದು ಕೆ.ಚಂದ್ರಶೇಖರರಾವ್ ಅವರಿಗೆ ಪಕ್ಕಾ ಆಯಿತು.
ಹೀಗಾಗಿ ಪ್ರಧಾನಿ ಮೋದಿ ಅವರ ವಿರುದ್ಧ ತಿರುಗಿ ಬಿದ್ದ ಚಂದ್ರಶೇಖರರಾವ್ ಎಲ್ಲೆಂದರಲ್ಲಿ ಅವರನ್ನು ಟೀಕಿಸತೊಡಗಿದರು.ಅಷ್ಟೇ ಅಲ್ಲ,ಬಿಜೆಪಿಯ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಒಂದು ಒಕ್ಕೂಟ ಮೇಲೇಳಬೇಕು ಅಂತ ಬಯಸಿದರು.
ಈ ಹಿನ್ನೆಲೆಯಲ್ಲಿ ಅವರು ತಮಿಳುನಾಡಿನ ಡಿ.ಎಂ.ಕೆ. ನಾಯಕ ಎಂ.ಕೆ.ಸ್ಟಾಲಿನ್ ಅವರಿಗೆ ಸ್ನೇಹ ಹಸ್ತ ಚಾಚಿದರು.ಅಲ್ಲಿ ತಲೆ ಎತ್ತಲು ಹೋರಾಟ ನಡೆಸಿದ್ದ ಬಿಜೆಪಿಗೆ ಹೊಡೆತ ಕೊಡಲು ಸ್ಟಾಲಿನ್ ಅವರಿಗೆ ತಮ್ಮಿಂದಾದ ನೆರವು ನೀಡಿದರು.ಅವರ ನೆರವಿನಿಂದಲೇ ಡಿಎಂಕೆ ತಮಿಳುನಾಡಿನ ಅಧಿಕಾರ ಹಿಡಿಯಿತು ಎಂದು ಹೇಳಲಾಗದಿದ್ದರೂ, ಚಂದ್ರಶೇಖರಾವ್ ಅವರ ಸಹಕಾರ ಸ್ಟಾಲಿನ್ ಅವರಿಗೆ ಅನುಕೂಲ ಮಾಡಿಕೊಟ್ಟಿತು ಎಂಬುದು ನಿಜ.
ಹೀಗೆ ನೋಡ ನೋಡುತ್ತಿದ್ದಂತೆ ಕೆ.ಚಂದ್ರಶೇಖರರಾವ್ ಅವರು ನರೇಂದ್ರಮೋದಿ ಅವರ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಒಂದು ಒಕ್ಕೂಟ ಕಟ್ಟಲು ಹೊರಟಿದ್ದಾರೆ.ಇದೇ ಕಾರಣಕ್ಕಾಗಿ ಬಿಹಾರದಲ್ಲಿ ನಿತೀಶ್ ಕುಮಾರ್,ಮತ್ತು ಆರ್.ಜೆ.ಡಿ ಯ ತೇಜಸ್ವಿ ಯಾದವ್,ಕೇರಳದ ಪಿಣರಾಯಿ ವಿಜಯನ್,ತಮಿಳುನಾಡಿನ ಎಂ.ಕೆ.ಸ್ಟಾಲಿನ್,ಉತ್ತರ ಪ್ರದೇಶದ ಅಖಿಲೇಶ್ ಯಾದವ್,ಕರ್ನಾಟಕದ ಹೆಚ್.ಡಿ.ದೇವೇಗೌಡ ಸೇರಿದಂತೆ ಹಲವರ ಆಪ್ತ ಸಂಪರ್ಕದಲ್ಲಿದ್ದಾರೆ.
ಇಂತಹ ನಾಯಕರನ್ನೆಲ್ಲ ಒಗ್ಗೂಡಿಸಿ ಒಕ್ಕೂಟ ರಚಿಸಿದರೆ ಮತ್ತು ಸಾಧ್ಯವಿರುವ ಕಡೆಯಲ್ಲಿ ಬಿಜೆಪಿಯನ್ನು ತಡೆದರೆ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ದೇಶದ ರಾಜಕಾರಣದಲ್ಲಿ ಹೊಸ ಅಲೆ ಶುರುವಾಗಬಹುದು.ಮತ್ತು ಈ ಅಲೆ ತೆಲಂಗಾಣದ ಚಕ್ರಾಧಿಪತಿಯಾಗುವ ತಮ್ಮ ಕನಸಿಗೆ ತಂಪೆರೆಯುತ್ತದೆ ಎಂಬುದು ಚಂದ್ರಶೇಖರರಾವ್ ಅವರ ಲೆಕ್ಕಾಚಾರ.

ಇಂತಹ ಲೆಕ್ಕಾಚಾರ ಇರುವ ಕಾರಣಕ್ಕೇ ಚಂದ್ರಶೇಖರರಾವ್ ಅವರು ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದ ಜೆಡಿಎಸ್ ಮೇಲೆದ್ದು ನಿಲ್ಲಲಿ,ಅಧಿಕಾರ ಹಿಡಿಯಲಿ ಎಂದು ಬಯಸುತ್ತಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿದರೆ,ಇಲ್ಲವೇ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಹೈದ್ರಾಬಾದ್-ಕರ್ನಾಟಕ ಭಾಗದ ಬೀದರ್,ರಾಯಚೂರು,ಕೊಪ್ಪಳದಂತಹ ಕ್ಷೇತ್ರಗಳಲ್ಲಿ ತಮಗೆ ಬೇಕಿರುವವರು ಗೆಲ್ಲುವಂತೆ ನೋಡಿಕೊಳ್ಳಬಹುದು ಎಂಬುದು ಅವರ ಯೋಚನೆ.
ಆದರೆ ಇದು ಸಾಧ್ಯವಾಗಬೇಕು ಎಂದರೆ ಮೊದಲು 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕಲ್ಲ?ಹೀಗಾಗಿ ಮೊನ್ನೆ ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ:ಆ ಭಾಗದ ಮೂವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿಗೆ ನನ್ನಿಂದ ಏನು ಮಾಡಲು ಸಾಧ್ಯವೋ?ಅದನ್ನು ಮಾಡುತ್ತೇನೆ ಎಂದು ವಚನ ಕೊಟ್ಟಿದ್ದಾರೆ.
ಅಂದರೆ?ಹೈದ್ರಾಬಾದ್-ಕರ್ನಾಟಕ ಭಾಗದ ಮೂವತ್ತು ಕ್ಷೇತ್ರಗಳ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದು ಜೆಡಿಎಸ್ ಕೆಲಸ.ಮತ್ತು ಈ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯನ್ನು ನೋಡಿಕೊಳ್ಳುವುದು ನಮ್ಮ ಕೆಲಸ ಅಂತ ಚಂದ್ರಶೇಖರಾವ್ ಹೇಳಿದ್ದಾರೆ.
ಇದೇ ರೀತಿ,ಕರ್ನಾಟಕದ ರಾಜಕಾರಣದಲ್ಲಿ ಜೆಡಿಎಸ್ ಪಕ್ಷದ ಗೆಲುವಿಗೆ ರಣತಂತ್ರ ರೂಪಿಸಲು ಎಲೆಕ್ಷನ್ ಸ್ಪೆಷಲಿಷ್ಟ್ ಪ್ರಶಾಂತ್ ಕಿಶೋರ್ ಅವರನ್ನು ನಾವೇ ಕಳಿಸುತ್ತೇವೆ.ಅವರು ರೂಪಿಸುವ ಗೇಮ್ ‍ಪ್ಲಾನುಗಳನ್ನು ಜಾರಿ ಮಾಡುವುದು ನಿಮ್ಮ ಕೆಲಸ ಎಂದು ಹೇಳಿದ್ದಾರೆ.
ಅಂದ ಹಾಗೆ ಜೆಡಿಎಸ್ ಬೆಂಬಲಕ್ಕೆ ತಮ್ಮೊಂದಿಗೆ ತಮಿಳುನಾಡಿನ ಸ್ಟಾಲಿನ್,ಉತ್ತರ ಪ್ರದೇಶದ ಅಖಿಲೇಶ್ ಯಾದವ್,ಕೇರಳದ ಪಿಣರಾಯಿ ವಿಜಯನ್ ಕೂಡಾ ಕೈಗೂಡಿಸಲಿದ್ದು ಇದರ ಪರಿಣಾಮವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಗೊಲ್ಲರು,ತಮಿಳರು,ತೆಲುಗು ಭಾಷಿಕರ ಮೇಜರ್ ಷೇರು ನಿಮಗೆ ದೊರೆಯುತ್ತದೆ ಎಂಬುದು ಚಂದ್ರಶೇಖರರಾವ್ ಮಾತು.
ಅಂದ ಹಾಗೆ ಮೋದಿಯವರ ವಿರುದ್ಧ ರಾಷ್ಟ್ರಮಟ್ಟದಲ್ಲಿ ತಾವು ಎದ್ದು ನಿಲ್ಲುತ್ತಿರುವುದರಿಂದ ಮುಸ್ಲಿಮರ ಹಲವು ಪಕ್ಷಗಳು ತಮ್ಮ ಮಾತು ಕೇಳುತ್ತವೆ.
ಹೀಗಾಗಿ ಜೆಡಿಎಸ್ ಪಕ್ಷ ಡಾರ್ಕ್ ಹಾರ್ಸ್ ಆಗಿ ಹೊರಹೊಮ್ಮುವುದು ಖಚಿತ ಎಂಬುದು ಚಂದ್ರಶೇಖರರಾವ್ ನಂಬಿಕೆ.
ಬೆಂಗಳೂರಿನ ಕೆ.ಆರ್.ಪುರಂ,ಹೊಸಕೋಟೆ,ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸೇರಿದಂತೆ ಹಲವು ಕ್ಷೇತ್ರಗಳು,ರಾಯಚೂರಿನ ಕಲ್ಮಲ ಹೀಗೆ ಕರ್ನಾಟಕದ ಮೂವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೊಲ್ಲರ ಮತಗಳು ಸಾಲಿಡ್ಡಾಗಿವೆ.
ಬೆಂಗಳೂರು,ಕೋಲಾರ,ಚಾಮರಾಜನಗರ,ಮೈಸೂರು ಜಿಲ್ಲೆಗಳ ಹಲವು ಕ್ಷೇತ್ರಗಳಲ್ಲಿ ತಮಿಳು ಭಾಷಿಕರ ಮತಗಳು ಸಾಲಿಡ್ಡಾಗಿವೆ.ಹೀಗಾಗಿ ಕರ್ನಾಟಕದ ನೂರೈವತ್ತು ಕ್ಷೇತ್ರಗಳಲ್ಲಿ ಹಲವು ವೋಟ್ ಬ್ಯಾಂಕುಗಳು ಕೈ ಜೋಡಿಸುತ್ತವೆ,ಆ ಮೂಲಕ ಕಾಸ್ಮೋಪಾಲಿಟನ್ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತದೆ,ಜೆಡಿಎಸ್ ಗೆ ಶಕ್ತಿ ತುಂಬುತ್ತವೆ ಅಂತ ಚಂದ್ರಶೇಖರರಾವ್ ನಂಬಿದ್ದಾರೆ.

ಈ ಮಧ್ಯೆ ಬಿಜೆಪಿ ವಿರೋಧಿ ಮತಗಳನ್ನು ಕನ್ ಸಾಲಿಡೇಟ್ ಮಾಡಬೇಕು ಎಂದರೆ ಜಾತಿರಹಿತವಾದ ಒಂದು ಫೋರಂ ಶುರುವಾಗಬೇಕು ಎಂಬುದು ಚಂದ್ರಶೇಖರರಾವ್ ಮಹತ್ವಾಕಾಂಕ್ಷೆ.
ಇದೇ ಕಾರಣಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿರುವ ಎರಡು ಸಾವಿರದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ್ ಕಿಸಾನ್ ಮಂಚ್ ಅಥವಾ ಭಾರತ್ ಕಿಸಾನ್ ಸಮಿತಿಗಳನ್ನು ಮೇಲೆತ್ತಿ ನಿಲ್ಲಿಸಲು ಅವರು ಬ್ಲೂಪ್ರಿಂಟ್ ರೆಡಿ ಮಾಡಿದ್ದಾರೆ.
ಈಗ ನರೇಂದ್ರ ಮೋದಿಯವರು ತರಲು ಹೊರಟಿರುವ ವಿದ್ಯುತ್ ಬಿಲ್ ರೈತರ ಕೃಷಿ ಪಂಪು ಸೆಟ್ಟುಗಳಿಗೆ ಮೀಟರ್ ಅಳವಡಿಸುವ ಉದ್ದೇಶ ಹೊಂದಿದೆ.ಅದನ್ನು ವಿರೋಧಿಸಬೇಕು ಎಂಬುದು ಈ ಮಂಚ್ ಅಥವಾ ಸಮಿತಿಗಳ ಅಜೆಂಡಾ.
ಮಾರಕ ಕೃಷಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದ್ದ ಮೋದಿಯವರ ವಿರುದ್ಧ ಇಡೀ ದೇಶದ ರೈತ ಸಮುದಾಯ ತಿರುಗಿ ಬಿದ್ದಿದೆ.
ಹೀಗಿರುವಾಗ ಕೃಷಿ ಪಂಪು ಸೆಟ್ಟುಗಳಿಗೆ ಮೀಟರ್ ಅಳವಡಿಸುವ ವಿದ್ಯುತ್ ಬಿಲ್ ವಿರುದ್ಧ ತಿರುಗಿ ಬೀಳದೆ ಅವರು ಮೌನವಾಗಿರಲು ಸಾಧ್ಯವೇ?ಎಂಬುದು ಚಂದ್ರಶೇಖರರಾವ್ ಪ್ರಶ್ನೆ.
ಹೀಗೆ ರೈತರ ಜತೆ,ಅಲ್ಪಸಂಖ್ಯಾತರು ಮತ್ತು ದಲಿತರು ಮೋದಿ ಸರ್ಕಾರದ ವಿರುದ್ಧ ನಿಂತರೆ ಎಲ್ಲ ರಾಜ್ಯಗಳಲ್ಲೂ ಬಿಜೆಪಿಗೆ ಘಾಸಿಯಾಗಲಿದೆ.ಕರ್ನಾಟಕದಲ್ಲಿ ಜೆಡಿಎಸ್ ನಿರೀಕ್ಷೆ ಮೀರಿದ ಸಾಧನೆ ಮಾಡಲಿದೆ ಅಂತ ಚಂದ್ರಶೇಖರರಾವ್ ಅವರು ಕುಮಾರಸ್ವಾಮಿಯವರಿಗೆ ಹೇಳಿದ್ದಾರೆ.
ಅವರ ಈ ಮಾತು ಕುಮಾರಸ್ವಾಮಿ ಅವರ ಆತ್ಮವಿಶ್ವಾಸವನ್ನು ಹೆಚ್ಚು ಮಾಡಿದ್ದರೆ ಅದು ಸಹಜವೇ.

ಕುತೂಹಲದ ಸಂಗತಿ ಎಂದರೆ ನರೇಂದ್ರಮೋದಿ ಅವರ ವಿರುದ್ಧ ಒಕ್ಕೂಟ ಕಟ್ಟಲು ಶ್ರಮಿಸುತ್ತಿರುವ ಚಂದ್ರಶೇಖರರಾವ್ ಅವರಿಗೆ ಕಾಂಗ್ರೆಸ್ ಮತ್ತು ಅರವಿಂದ ಕೇಜ್ರೀವಾಲ್ ನೇತೃತ್ವದ ಅಮ್ ಆದ್ಮಿ ಜತೆಗಿನ ಸಖ್ಯ ಬೇಕಾಗಿಲ್ಲ.
ಈ ಪೈಕಿ ಕಾಂಗ್ರೆಸ್ ಪಕ್ಷವನ್ನು ಅವರು ಬಯಸದೆ ಇರಲು ಕಾರಣವಿದೆ.ಎಷ್ಟೇ ಆದರೂ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿಯೇ ಅವರ ಟಿ.ಆರ್.ಎಸ್ ಚಿಗುರಿದ್ದಲ್ಲವೇ?
ಇನ್ನು ಚಂದ್ರಶೇಖರರಾವ್ ಪ್ರಕಾರ,ಅಮ್ ಆದ್ಮಿಯ ಅರವಿಂದ ಕೇಜ್ರೀವಾಲ್ ಮತ್ತು ನರೇಂದ್ರಮೋದಿ ಒಂದೇ ಬಳ್ಳಿಯ ಹೂವುಗಳಂತೆ.ನಂಬಿಕೆಗೆ ಅರ್ಹರಲ್ಲವಂತೆ.
ಹೀಗಾಗಿ ಅವರ ಜತೆ ಸಖ್ಯ ಬೇಡ ಎಂದೂ ಅವರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.
ಚಂದ್ರಶೇಖರರಾವ್ ಅವರ ಭೇಟಿಯ ನಂತರ ಕುಮಾರಸ್ವಾಮಿ ಎಷ್ಟು ಖುಷಿಯಾಗಿದ್ದಾರೆಂದರೆ ,2023 ರಲ್ಲಿ ತಾವು ಮರಳಿ ಕರ್ನಾಟಕದ ಮುಖ್ಯ ಮಂತ್ರಿಯಾಗುವುದು ಖಚಿತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here