ಡಿಕೆಶಿಗೆ ಬಂತು ವಾರ್ನಿಂಗ್ ಮೆಸೇಜು?

0
127

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಆತಂಕದ ಸಂದೇಶಗಳು ಬರತೊಡಗಿವೆ.ಮುಂದಿನ ಪಾರ್ಲಿಮೆಂಟ್‌ ಚುನಾವಣೆಯ ಹೊತ್ತಿಗೆ ರಾಜ್ಯ ಸರ್ಕಾರವನ್ನು ಅಲುಗಾಡಿಸಲು ಕೇಂದ್ರದ ಬಿಜೆಪಿ ನಾಯಕರು ಹೊರಟಿದ್ದಾರೆ ಎಂಬುದು ಈ ಸಂದೇಶಗಳ ವಿವರ.

ಅಂದ ಹಾಗೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಅದು ಉರುಳಲಿದೆ ಅಂತ ರಾಜ್ಯದ ಬಿಜೆಪಿ ನಾಯಕರು ಹೇಳುತ್ತಾ ಬಂದಿದ್ದಾರೆ.ಆದರೆ ನೂರಾ ಮೂವತ್ತಾರು ಶಾಸಕರನ್ನು ಹೊಂದಿರುವ ಕೈ ಪಾಳಯ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಮೊದಲನೆಯದಾಗಿ ಸರ್ಕಾರ ಉರುಳಬೇಕೆಂದರೆ ಕಾಂಗ್ರೆಸ್‌ ಪಕ್ಷದಲ್ಲಿರುವ ಶಾಸಕರ ಪೈಕಿ ಮೂರನೇ ಎರಡು ಭಾಗದಷ್ಟು ಶಾಸಕರು ಪಕ್ಷ ತೊರೆಯಬೇಕು. ಇಲ್ಲವೇ ನಲವತ್ತರಷ್ಟು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಾಂತರ ನಿಷೇಧ ಕಾಯ್ದೆಯ ಹೊಡೆತ ತಿನ್ನಬೇಕು ಮತ್ತು ಉಪಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಸ್ಪರ್ಧಿಸಿ ಗೆಲ್ಲಬೇಕು.

ಹೀಗಾಗಿ ಇವೆರಡೂ ಆಗದ ಕೆಲಸ ಎಂದು ಭಾವಿಸಿದ್ದ ಕಾಂಗ್ರೆಸ್‌ ನಾಯಕರು ಸರ್ಕಾರ ಭದ್ರವಾಗಿದೆ ಎಂಬ ತೀರ್ಮಾನಕ್ಕೆ ಬಂದು ಹಲವು ಕಾಲವೇ ಕಳೆದಿತ್ತು.ಆದರೆ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕ್ಯಾಂಪಿಗೆ ತಲುಪುತ್ತಿರುವ ಸಂದೇಶಗಳು ಮಾತ್ರ ಬೇರೆಯದೇ ಕತೆ ಹೇಳುತ್ತಿವೆಯಂತೆ.

ಈ ಸಂದೇಶಗಳ ಪ್ರಕಾರ,ಕಾಂಗ್ರೆಸ್‌ ಪಾಳಯದ ಮೂರನೇ ಎರಡು ಭಾಗದಷ್ಟು ಶಾಸಕರನ್ನು ಸೆಳೆಯುವ ಬದಲು, ನಲವತ್ತರಿಂದ ಐವತ್ತು ಶಾಸಕರ ಕೈಲಿ ರಾಜೀನಾಮೆ ಕೊಡಿಸುವುದು ಬಿಜೆಪಿ ವರಿಷ್ಟರ ಲೆಕ್ಕಾಚಾರ ಮತ್ತು ಪಾರ್ಲಿಮೆಂಟ್‌ ಚುನಾವಣೆಯ ಸಂದರ್ಧದಲ್ಲಿ ಇವರೆಲ್ಲರನ್ನು ಉಪಚುನಾವಣೆಯ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವುದು ಅವರ ಯೋಚನೆ.

ಈ ಮಧ್ಯೆ ಕಾಂಗ್ರೆಸ್‌ ಗೆ ರಾಜೀನಾಮೆ ಕೊಟ್ಟು ಹೊರಬರುವ ಶಾಸಕರಿಗೆ ಡಬಲ್‌ ಧಮಾಕಾ ಬೇರೆ ಸಿಗಲಿದೆ.ಅರ್ಥಾತ್‌,ಅವರು ಬಿಜೆಪಿಯಿಂದ ಮಾತ್ರ ಕಣಕ್ಕಿಳಿಯಬೇಕು ಅಂತಲ್ಲ,ಬದಲಿಗೆ ತಾವು ಜೆಡಿಎಸ್‌ ವತಿಯಿಂದ ಸ್ಪರ್ಧಿಸಿದರೆ ಗೆಲ್ಲುವ ಚಾನ್ಸು ಜಾಸ್ತಿ ಅನ್ನಿಸಿದರೆ ಆ ಪಕ್ಷದ ಕ್ಯಾಂಡಿಡೇಟ್‌ ಆಗಿಯೂ ಅವರು ಸ್ಪರ್ಧಿಸಬಹುದು.

ಹೀಗೆ ಸ್ಪರ್ಧಿಸುವುದಷ್ಟೇ ಅವರ ಕೆಲಸ.ಉಳಿದಂತೆ ಅವರು ಹತ್ತುವ ರಥ,ಓಡುವ ಕುದುರೆ,ಬೇಕಾಗುವ ಶಸ್ತ್ರಾಸ್ತ್ರಗಳ ಹೊಣೆ ನಮ್ಮದೇ ಮತ್ತು ಚುನಾವಣೆಯಲ್ಲಿ ಗೆದ್ದ ಮೇಲೆ ಅವರಿಗೆ ನೆಲೆ ಕಲ್ಪಿಸಿಕೊಡುವ ಜವಾಬ್ದಾರಿಯೂ ನಮ್ಮದೇ ಎಂಬ ಸಂದೇಶ ಕಾಂಗ್ರೆಸ್‌ ನ ಮೂವತ್ತಕ್ಕೂ ಹೆಚ್ಚು ಶಾಸಕರಿಗೆ ಬಿಜೆಪಿ ವರಿಷ್ಟರಿಂದ ರವಾನೆಯಾಗಿದೆ ಎಂಬುದು ಡಿಕೆಶಿ ಕ್ಯಾಂಪಿಗೆ ತಲುಪಿರುವ ಸುದ್ದಿ.

ಕೇಂದ್ರದ ಬಿಜೆಪಿ ನಾಯಕರು ಕೊಟ್ಟ ಈ ಆಫರಿಗೆ ಮತ್ತೊಂದು ಅಟ್ರಾಕ್ಟೀವ್‌ ಮುಖವೂ ಇದೆ.ಅದೆಂದರೆ,ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬರುವ ಶಾಸಕರು ಉಪಚುನಾವಣೆಯಲ್ಲಿ ಗೆದ್ದು ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿರುವ ಬಿಜೆಪಿ ವರಿಷ್ಟರು,ಒಂದು ವೇಳೆ ಯಾರಾದರೂ ಸೋತರೆ ಅವರನ್ನು ಬೇರೆ ಬೇರೆ ಹುದ್ದೆಗಳಲ್ಲಿ ನೆಲೆ ಮಾಡುವ ಹೊಣೆಗಾರಿಕೆಯೂ ನಮ್ಮದೇ ಅಂತ ಹೇಳಿದ್ದಾರಂತೆ.

ಅರ್ಥಾತ್‌,ಮುಂದಿನ ಪಾರ್ಲಿಮೆಂಟ್‌ ಚುನಾವಣೆಯ ನಂತರ ಇಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರ ಇರಬೇಕು, ದಿಲ್ಲಿಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಅಧಿಕಾರದಲ್ಲಿರಬೇಕು ಎಂಬುದು ಕಮಲ ಪಾಳಯದ ಲೆಕ್ಕಾಚಾರ.

ಮುಂದೆ ಈ ಆಟ ಯಾವ ಯಾವ ಸ್ವರೂಪ ಪಡೆಯುತ್ತದೋ ಗೊತ್ತಿಲ್ಲ.ಆದರೆ ಈ ಕುರಿತ ಸಂದೇಶಗಳನ್ನು ಸ್ವೀಕರಿಸುತ್ತಿರುವ ಡಿಕೆಶಿ ಮಾತ್ರ ಚಿಂತಾಕ್ರಾಂತರಾಗಿದ್ದಾರಂತೆ.

ಜಾರಕಿಹೊಳಿ ಸಿಡಿಸಿದ ಗರ್ನಲ್ಲು


ಈ ಮಧ್ಯೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಿಡಿಸಿರುವ ಗರ್ನಲ್ಲು ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಧೂಳೆಬ್ಬಿಸಿದೆ.

ಪಕ್ಷದ ಇಪ್ಪತ್ತಕ್ಕೂ ಹೆಚ್ಚು ಶಾಸಕರನ್ನು ಮೈಸೂರಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದ ಸತೀಶ್‌ ಜಾರಕಿಹೊಳಿ ಅವರಿಗೆ ಬ್ರೇಕ್‌ ಹಾಕಲಾಯಿತೇನೋ ನಿಜ.ಆದರೆ ಇದು ಇಷ್ಟಕ್ಕೇ ನಿಲ್ಲುವುದಲ್ಲ ಎಂಬುದು ಎಲ್ಲರಿಗೂ ಗೊತ್ತು.

ಅಂದ ಹಾಗೆ ಜಾರಕಿಹೊಳಿ ಅವರ ಆಕ್ರೋಶಕ್ಕೆ ಬೆಳಗಾವಿ ಜಿಲ್ಲೆಯ ರಾಜಕೀಯ ಸುಳಿಗಳು ಕಾರಣ ಎನ್ನಲಾಗುತ್ತಿದೆಯಾದರೂ,ವಿಷಯ ಅಷ್ಟಕ್ಕೆ ಸೀಮಿತವಾಗಿದೆ ಎಂದೂ ಅಲ್ಲ,ನೇರವಾಗಿ ಹೇಳಬೇಕೆಂದರೆ ಸತೀಶ್‌ ಜಾರಕಿಹೊಳಿ ಅವರಿಗೀಗ ಅರ್ಜೆಂಟಾಗಿ ಉಪಮುಖ್ಯಮಂತ್ರಿ ಪೋಸ್ಟು ಬೇಕು,ಮುಂದೆ ಸಿದ್ಧರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿದು ಬೇರೊಬ್ಬರು ಸಿಎಂ ಆಗುತ್ತಾರೆ ಎಂದಾದರೆ,ಆ ಪಟ್ಟವೂ ಅವರಿಗೆ ಬೇಕು.

ವಸ್ತುಸ್ಥಿತಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ತಮಗೆ ಡಿಸಿಎಂ ಹುದ್ದೆ ಸಿಗಬೇಕಿತ್ತು ಎಂಬುದು ಸತೀಶ್‌ ಜಾರಕಿಹೊಳಿ ವಾದ.ಆದರೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದಾದರೆ ನಾನೊಬ್ಬನೇ ಡಿಸಿಎಂ ಆಗಿರಬೇಕು ಅಂತ ಡಿಕೆಶಿ ಹಿಡಿದ ಹಟಕ್ಕೆ ಕಾಂಗ್ರೆಸ್‌ ವರಿಷ್ಟರು ಮನ್ನಣೆ ನೀಡಿದ್ದರು.

ಹೀಗಾಗಿ ಸಿದ್ಧರಾಮಯ್ಯ ಅವರ ಸಂಫುಟದಲ್ಲಿ ಉಪಮುಖ್ಯಮಂತ್ರಿಯಾಗಬೇಕಿದ್ದ ತಾವು ಕೇವಲ ಮಂತ್ರಿಗಿರಿಗೆ ತೃಪ್ತಿ ಪಡಬೇಕಾಯಿತು ಎಂಬ ಸಿಟ್ಟು ಜಾರಕಿಹೊಳಿ ಅವರಿಗಿದೆ.ಹೀಗಾಗಿ ಮೇಲೆದ್ದು ನಿಂತಿರುವ ಅವರು,ಸಿದ್ಧರಾಮಯ್ಯ ಸಿಎಂ ಆಗಿರುವಾಗಲೇ ತಾವು ಡಿಸಿಎಂ ಆಗಬೇಕು.ಇಲ್ಲದಿದ್ದರೆ ಭವಿಷ್ಯದಲ್ಲಿ ಸಿಎಂ ಹುದ್ದೆ ಪಡೆಯುವುದು ಕಷ್ಟ ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ.

ಈ ಮಧ್ಯೆ ಸತೀಶ್‌ ಜಾರಕಿಹೊಳಿ ಸಿಟ್ಟಿಗೆ ತಾವು ಕಾರಣ,ಬೆಳಗಾವಿ ಜಿಲ್ಲೆಯ ಟ್ರಾನ್ಸ್‌ ಫರುಗಳಲ್ಲಿ ತಾವು ಮಾಡಿದ ಹಸ್ತಕ್ಷೇಪವೇ ಕಾರಣ ಎಂಬ ವರದಿಗಳನ್ನು ನೋಡಿದ ಡಿಕೆಶಿ,ಮೊನ್ನೆ ಶನಿವಾರ ಈ ಕುರಿತ ಮಾಹಿತಿಗಳನ್ನು ತರಿಸಿಕೊಂಡು ಪರಿಶೀಲಿಸಿದರಂತೆ.ನೋಡಿದರೆ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಸತೀಶ್‌ ಜಾರಕಿಹೊಳಿ ಕೊಟ್ಟ ಲೆಟರುಗಳನ್ನೆಲ್ಲ ತಮ್ಮ ಕಚೇರಿ ಕ್ಲಿಯರ್‌ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನು ಬೆಂಗಳೂರು ನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಸುರಂಗ ಮಾರ್ಗಗಳನ್ನು ನಿರ್ಮಿಸುವ ವಿಷಯದಲ್ಲಿ ಡಿಕೆಶಿ ವಿರುದ್ಧ ಜಾರಕಿಹೊಳಿ ಸಿಟ್ಟಾಗಿದ್ದಾರೆ ಎಂಬುದರಿಂದ ಹಿಡಿದು ಹಲವು ರೀತಿಯ ಮಿಸೈಲುಗಳು ಸಿಡಿಯುತ್ತಿವೆಯಾದರೂ,ಫೈನಲಿ ಇದು ಡಿಸಿಎಂ ಹುದ್ದೆಗೆ,ಆ ಮೂಲಕ ಸಿಎಂ ಹುದ್ದೆಗೆ ಜಾರಕಿಹೊಳಿ ಇಟ್ಟಿರುವ ಟಾರ್ಗೆಟ್ಟು ಎಂಬುದು ಸ್ಪಷ್ಟ.

ಶುರುವಾಗಲಿದೆ ಇಬ್ರಾಹಿಂ ಔಟ್‌ ಲೆಟ್ಟು
­­­­­­­­­

ಜೆಡಿಎಸ್‌ ಪಕ್ಷದ ವಿಸರ್ಜಿತ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರಿಗೆ ಸಂಯುಕ್ತ ಜನತಾದಳದ ನಾಯಕ,ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬುಲಾವ್‌ ನೀಡಿದ್ದಾರಂತೆ.

ಕಳೆದ ಸೋಮವಾರ ಚಿಂತನ ಮಂಥನ ಸಭೆ ನಡೆಸಿದ ಸಿ.ಎಂ.ಇಬ್ರಾಹಿಂ ಅವರು,ತಮ್ಮದೇ ಒರಿಜಿನಲ್‌ ಜೆಡಿಎಸ್‌ ಎಂದು ಘೋಷಿಸಿಕೊಂಡಿದ್ದರು.

ಆದರೆ ಹೀಗೆ ಅವರು ಘೋಷಿಸಿಕೊಂಡ ನಂತರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ರಾಜ್ಯ ಸಮಿತಿ ಮತ್ತು ಶಾಸಕಾಂಗ ಪಕ್ಷದ ಸಭೆ ನಡೆಯಿತು.ಈ ಸಭೆ ನಡೆದ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು,ಇಬ್ರಾಹಿಂ ಸೇರಿದಂತೆ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ವಿಸರ್ಜನೆ ಮಾಡುವ ಆದೇಶ ಪ್ರಕಟಿಸಿದರು.

ಈ ಬೆಳವಣಿಗೆಯ ನಂತರ ಸದ್ದು ಮಾಡುತ್ತಿರುವ ಸಿ.ಎಂ.ಇಬ್ರಾಹಿಂ,ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಲು ಸಾಧ್ಯವಿಲ್ಲ ಎಂದು ವರಾತ ತೆಗೆದಿದ್ದಾರಲ್ಲದೆ,ನ್ಯಾಯ ಕೇಳಿ ನ್ಯಾಯಾಲಯಕ್ಕೆ ಹೋಗುವ ಮಾತನಾಡಿದ್ದಾರೆ.

ಇದೆಲ್ಲ ನಡೆಯುತ್ತಿರುವಾಗ ಉತ್ಸಾಹಗೊಂಡ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು,ಕರ್ನಾಟಕದಲ್ಲಿ ಜನತಾ ಪರಿವಾರವನ್ನು ಸಂಘಟಿಸಲು ಏನಾದರೂ ಅವಕಾಶಗಳಿವೆಯಾ ನೋಡಿ ಅಂತ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಲನ್‌ ಸಿಂಗ್‌ ಅವರಿಗೆ ಕೇಳಿದರಂತೆ.

ನಿತೀಶ್‌ ಕುಮಾರ್‌ ಅವರ ಈ ಸೂಚನೆ ಸಿಕ್ಕ ನಂತರ ಲಲನ್‌ ಸಿಂಗ್‌ ಅವರು,ಒಂದು ಕಾಲದಲ್ಲಿ ಕರ್ನಾಟಕದ ಜೆಡಿ(ಯು) ಅಧ್ಯಕ್ಷರಾಗಿದ್ದ,ಮತ್ತೀಗ ಎಲ್.ಜೆ.ಡಿ ನಾಯಕರಾಗಿರುವ ಡಾ.ಎಂ.ಪಿ. ನಾಡಗೌಡರನ್ನು ಮುಂಬೈಗೆ ಕರೆಸಿಕೊಂಡು ಚರ್ಚಿಸಿದ್ದಾರೆ.

ಈ ಚರ್ಚೆಯ ಸಂದರ್ಭದಲ್ಲಿ ಲಲನ್‌ ಸಿಂಗ್‌ ಅವರಿಗೆ ಕರ್ನಾಟಕದ ಪರಿಸ್ಥಿತಿಯ ಕುರಿತು ವಿವರಿಸಿದ ನಾಡಗೌಡರು, ಸಾರ್‌, ಕರ್ನಾಟಕದಲ್ಲಿ ಜನತಾ ಪರಿವಾರದ ತುಣುಕುಗಳು ಇನ್ನೂ ಉಳಿದಿವೆ.ಜಾತ್ಯಾತೀತ ದಳ,ಸಂಯುಕ್ತ ದಳ ಮತ್ತು ಎಲ್.ಜೆ.ಡಿ ಸೇರಿದಂತೆ ಮೂರ್ನಾಲ್ಕು ಪಕ್ಷಗಳು ಒಂದುಗೂಡಿದರೆ ದೊಡ್ಡ ಮಟ್ಟದ ಯಶಸ್ಸು ಸಿಗದಿರಬಹುದು.ಆದರೆ ನಿಶ್ಚಿತವಾಗಿ ಒಂದು ಔಟ್‌ ಲೆಟ್‌ ನಿರ್ಮಾಣವಾಗುತ್ತದೆ ಎಂದರಂತೆ.

ಅದು ಹೇಗೆ ಎಂದು ಲಲನ್‌ ಸಿಂಗ್‌ ಕೇಳಿದರೆ,ಇವತ್ತು ಜೆಡಿಎಸ್‌ ಪಕ್ಷದಲ್ಲಿರುವ ಹಲವು ಕಾರ್ಯಕರ್ತರಿಗೆ,ಬಿಜೆಪಿಯಲ್ಲಿರುವ ಕಾರ್ಯಕರ್ತರಿಗೆ ಆಲ್ಟರ್‌ ನೇಟಿವ್‌ ಬೇಕಾಗಿದೆ.ಆದರೆ ಅದು ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಸುಮ್ಮನಿದ್ದಾರೆ.ಅವರಿಗೆ ಇಂತಹದೊಂದು ಔಟ್‌ ಲೆಟ್‌ ಸಿಕ್ಕರೆ ಸಂತೋಷವಾಗಿ ಬರುತ್ತಾರೆ.ಹೀಗೆ ಕರ್ನಾಟಕದ ರಾಜಕಾರಣದಲ್ಲಿ ಒಂದು ಔಟ್‌ ಲೆಟ್‌ ನಿರ್ಮಾಣವಾದರೆ ನಾಳೆ ಅದು ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸಬೇಕಾಗುತ್ತದೆ.ಆದರೆ ಅಂತಹ ಬೆಂಬಲ ಇಂಡಿಯಾ ಒಕ್ಕೂಟದ ಮೂಲಕ ಕೊಡಬೇಕು ಅಂತ ನಾಡಗೌಡರು ಹೇಳಿದಾಗ ಲಲನ್‌ ಸಿಂಗ್‌ ಯಸ್‌ ಎಂದರಂತೆ.

ಇದಾದ ನಂತರ ಸಿ.ಎಂ.ಇಬ್ರಾಹಿಂ ಅವರಿಗೆ ನಿತೀಶ್‌ ಕುಮಾರ್‌ ಅವರ ಕರೆ ಬಂದಿದೆ.ಇಬ್ರಾಹಿಂ ಕೂಡಾ ಪಾಟ್ನಾದ ವಿಮಾನ ಹತ್ತಲು ಆಸಕ್ತಿ ತೋರಿಸಿದ್ದಾರೆ.ಅಂದ ಹಾಗೆ ಸಿ.ಎಂ.ಇಬ್ರಾಹಿಂ ಅವರ ಎಪಿಸೋಡನ್ನು ತುಂಬ ಜನ ಗಂಭೀರವಾಗಿ ಪರಿಗಣಿಸಿಲ್ಲ.ಕಾರಣ?ಜೆಡಿಎಸ್‌ ಪಕ್ಷ ಹೇಳಿ ಕೇಳಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮುಷ್ಟಿಯಲ್ಲಿರುವ ಪಕ್ಷ.ಅಲ್ಲಿಂದ ಹೊರಬಿದ್ದು ಇಬ್ರಾಹಿಂ ಸಾಧಿಸುವುದೇನು?ಅನ್ನುವುದು ಹಲವರ ಯೋಚನೆ.

ಆದರೆ ಇಬ್ರಾಹಿಂ ಎಪಿಸೋಡನ್ನು ಯಾರೆಷ್ಟೇ ಲಘುವಾಗಿ ಪರಿಗಣಿಸಿದರೂ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲಘುವಾಗಿ ನೋಡುತ್ತಿಲ್ಲ.ಕಾರಣ?ಅವರಿಗೆ ಇಬ್ರಾಹಿಂ ಅವರ ಹಿಂದೆ ರಾಜ್ಯ ಕಾಂಗ್ರೆಸ್ಸಿನ ಘಟಾನುಘಟಿ ನಾಯಕರ ನೆರಳು ಕಾಣಿಸುತ್ತಿದೆ

ಕಳೆದ ಕೆಲ ಕಾಲದಿಂದ ಈ ನಾಯಕರು ಇಬ್ರಾಹಿಂ ಅವರ ಜತೆ ಸೇರಿ ಜೆಡಿಎಸ್‌ ಪಕ್ಷವನ್ನು ಒಡೆಯುವ ಕುರಿತು ಮಾತುಕತೆ ನಡೆಸಿದ್ದಾರೆ ಎಂಬುದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗಿರುವ ಫೀಡ್‌ ಬ್ಯಾಕು.ಹೀಗಾಗಿ ಇಬ್ರಾಹಿಂ ಎಪಿಸೋಡನ್ನು ಅವರು ತುಂಬ ಸೂಕ್ಷ್ಮವಾಗಿ ಬಗೆಹರಿಸಲು ತೀರ್ಮಾನಿಸಿದ್ದಾರೆ.ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ವಿಸರ್ಜನೆಯಾದ ರೀತಿಯೇ ಇದಕ್ಕೆ ಸಾಕ್ಷಿ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here