ಸಂಡೂರು: ನ:10: ಎಲ್ಲಾ ಲಸಿಕೆಗಳು ಜೀವ ಉಳಿಸುವುದರೊಂದಿಗೆ ಆರೋಗ್ಯ ಮತ್ತು ಜೀವನ ಮಟ್ಟವನ್ನು ಸುಧಾರಣೆ ಮಾಡುತ್ತವೆ: ಡಾ.ರಜೀಯಾ ಬೇಗಂ, ಹೇಳಿದರು
ತಾಲೂಕಿನ ತೋರಣಗಲ್ಲು ಸಮುದಾಯ ಅರೋಗ್ಯ ಕೇಂದ್ರದಲ್ಲಿ ವಿಶ್ವ ಲಸಿಕಾ ದಿನ ಕುರಿತು ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಕೇಂದ್ರದ ಪ್ರಸೂತಿ ತಜ್ಞೆ ಡಾ.ರಜೀಯಾ ಬೇಗಂ ಮಾತನಾಡಿ ಲಸಿಕೆಗಳು ಮಕ್ಕಳ ದೇಹದಲ್ಲಿ ರೋಗಗಳ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ, ಆಸ್ಪತ್ರೆಗಳಲ್ಲಿ ಹೆರಿಗೆಯಾದ ತಕ್ಷಣವೇ ಜೀರೋ ಡೋಸ್ ಹೆಪಟೈಟಿಸ್-ಬಿ, ಪೋಲಿಯೋ ಡ್ರಾಪ್ಸ್, ಬಿ.ಸಿ.ಜಿ ಲಸಿಕೆಯನ್ನು ತಪ್ಪದೇ ಕೊಡಿಸ ಬೇಕು, ಲಸಿಕೆ ಕೊಡಿಸುವುದು ಇಲ್ಲಿಂದಲೇ ಪ್ರಾರಂಭವಾಗಬೇಕು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರತಿ ವರ್ಷ ನವಂಬರ್ 10 ರಂದು ವಿಶ್ವ ಲಸಿಕಾ ದಿನ ಆಚರಿಸಲಾಗುತ್ತಿದೆ, ಲಸಿಕೆಯ ಮಹತ್ವ ಸಾರಲು ಜಾಗೃತಿಯನ್ನು ಮೂಡಿಸಲಾಗುತ್ತಿದೆ, ಹುಟ್ಟಿನಿಂದ ಹದಿನಾರು ವರ್ಷಗಳ ವರೆಗೆ ವೇಳಾಪಟ್ಟಿಯ ಪ್ರಕಾರ ಸರಿಯಾದ ಸಮಯಕ್ಕೆ ಮಕ್ಕಳಿಗೆ ಲಸಿಕೆ ಕೊಡಿಸ ಬೇಕು, ನಮ್ಮ ಅನುಕೂಲಕ್ಕೆ ಮಕ್ಕಳಿಗೆ ಲಸಿಕೆ ಕೊಡಿಸುವುದನ್ನು ಮುಂದೂಡಬಾರದು, ಸೂಕ್ತ ಸಮಯಕ್ಕೆ ಲಸಿಕೆ ಕೊಡಿಸಿದರೆ ದೇಹದಲ್ಲಿ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಲಿದೆ, ಸಧ್ಯ ಹನ್ನೆರಡು ಮಾರಕ ರೋಗಗಳಿಗೆ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ, ಹಾಗೆ ಕೋವಿಡ್-19 ರ ವಿರುದ್ಧ ಲಸಿಕೆ ಹಾಗೂ ರೆಬಿಸ್ ಲಸಿಕೆಯೊಂದಿಗೆ ಖಾಸಗಿಯಾಗಿ ಕ್ಯಾನ್ಸರ್ ತಡೆಗಟ್ಟುವ ಲಸಿಕೆ, ಇತರೆ ಲಸಿಕೆಗಳು ಲಭ್ಯವಿರುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ಕೇಂದ್ರದ ಪ್ರಸೂತಿ ತಜ್ಞೆ ಡಾ.ರಜೀಯಾ ಬೇಗಂ, ಶುಶ್ರೂಷಣಾಧಿಕಾರಿ ಗೀತ, ಹುಲಿಗೆಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಶಾ ಕಾರ್ಯಕರ್ತೆ ವೆಂಕಟಲಕ್ಷ್ಮಿ, ಮಹಾಲಕ್ಷ್ಮಿ, ಶಶಿಕಲಾ, ಮೀನಾ ಕುಮಾರಿ, ಲಲಿತಾ ಇತರರು ಉಪಸ್ಥತರಿದ್ದರು.