ಕೊಟ್ಟೂರು: ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ನೌಕರರನ್ನಾಗಿ ಪರಿಗಣಿಸಬೇಕೆಂದು ರಾಜ್ಯ ಮಸಣ ಕಾರ್ಮಿಕರ ಸಂಘದ ಸಂಚಾಲಕ ಯು.ಬಸವರಾಜ್ ಆಗ್ರಹಿಸಿದರು.
ಪಟ್ಟಣದ ಭೂತಭುಜಂಗ ಹಿರೇ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಸಣ ಕಾರ್ಮಿಕರ ತಾಲ್ಲೂಕು ಮಟ್ಟದ ಪ್ರತಿಭಟನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಮಸಣ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ, ಮಕ್ಕಳಿಗೆ ಶಿಕ್ಷಣ ಸೌಲಭ್ಯ, ಮಸಣಗಳ ಒತ್ತುವರಿ ತೆರವುಗೊಳಿಸಿ ಸ್ವಚ್ಚಗೊಳಿಸುವುದು ಮುಂತಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಡಿ.ಎಸ್.ಎಸ್.ಜಿಲ್ಲಾಘಟಕಾಧ್ಯಕ್ಷ ಬಿ.ಮರಿಸ್ವಾಮಿ ಮಾತನಾಡಿ ಮಸಣ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕೆಂದರು.
ತಾಲ್ಲೂಕು ಘಟಕಾಧ್ಯಕ್ಷ ರಾಂಪುರ ಮೂಗಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಿ.ಮಾಳಮ್ಮ, ಜಿ.ಎಂ.ಕೊಟ್ರೇಶ್,ವಿರುಪಾಕ್ಷಪ್ಪ ವಕೀಲರು, ರಾಂಪುರ ಮೂಗಮ್ಮ , ಜಾಗಟಗೆರೆ ರುದ್ರೇಶ್ ಹಾಗೂ ಮಸಣ ಕಾರ್ಮಿಕರು ಪಾಲ್ಗೊಂಡಿದ್ದರು.
ವರದಿ: ಶಿವರಾಜ್ ಕನ್ನಡಿಗ