ಕೂಡ್ಲಿಗಿ ಅಡಿಕೆ ತುಂಬಿದ ಲಾರಿಯೊಂದು ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೆ ಗಂಭೀರಗಾಯಗಳಾಗಿದ್ದು ಆದರಲ್ಲಿ ಓರ್ವ ಚಿಕಿತ್ಸೆಗೆ ಕರೆದೊಯ್ಯುವಾಗ ಹೊಸಹಳ್ಳಿ ಆಸ್ಪತ್ರೇಲಿ ಮೃತಪಟ್ಟಿದ್ದು ಮತ್ತೋರ್ವನನ್ನು ಜಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಘಟನೆ ಇಂದು ಸಂಜೆ ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ಸಮೀಪ ಜರುಗಿದೆ. ಹಾರಕಭಾವಿ ಮುನಿಯಪ್ಪ (42) ಮೃತಪಟ್ಟವನಾಗಿದ್ದು ಇನ್ನೋರ್ವ ನಾಗೇಶ (21) ಗಂಭೀರವಾಗಿ ಗಾಯಗೊಂಡಿದ್ದಾನೆ.
ಆತನನ್ನು ಹೊಸಹಳ್ಳಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಜಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ ವಿವರ:
ಚಿತ್ರದುರ್ಗ ಕಡೆಗೆ ಗುಜರಾತ್ ಮೂಲದ ಲಾರಿಯೊಂದು ಅಡಿಕೆ ಲೋಡ್ ತುಂಬಿಕೊಂಡು ಹೋಗುತ್ತಿರುವಾಗ ಹಾರಕಭಾವಿಯಿಂದ ಚಿಕ್ಕಜೋಗಿಹಳ್ಳಿಗೆ ಬೈಕ್ ನಲ್ಲಿ ಮಾವ ಅಳಿಯರಾದ ಹಾರಕಬಾವಿ ಮುನಿಯಪ್ಪ ಮತ್ತು ನಾಗೇಶ ಹೋಗುತ್ತಿದ್ದ ಬ ಲಾರಿ ಬೈಕಿಗೆ ಡಿಕ್ಕಿಹೊಡೆದಿದೆ. ಬೈಕ್ ನ ಸ್ಪಾರ್ಕನಿಂದಾಗಿ ಲಾರಿಯ ಮುಂಬದಿಗೆ ಬೆಂಕಿ ಹತ್ತಿದ್ದರಿಂದ ಅದನ್ನು ಆರಿಸಲಾಗದೆ ಲಾರಿ ಚಾಲಕ ಇಳಿದು ಲಾರಿ ಬಿಟ್ಟು ಪರಾರಿಯಾಗಿದ್ದಾನೆ.
ಹೊತ್ತಿಉರಿದ ಲಾರಿ : ಬೈಕನ ಸ್ಪಾರ್ಕನಿಂದ ಲಾರಿಗೆ ಬೆಂಕಿ ತಗುಲಿ ಮುಂಭಾಗ ಸಂಪೂರ್ಣ ಉರಿದು ಕರಕಲಾಗಿದ್ದು ಬೆಂಕಿಯನ್ನು ಆರಿಸಲು ಕೂಡ್ಲಿಗಿ ಮತ್ತು ಜಗಳೂರು ಅಗ್ನಿಶಾಮಕದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಹೊಸಹಳ್ಳಿ ಪಿಎಸ್ಐ ಗಳಾದ ನಾಗರಾಜ ಹಾಗೂ ಅಪರಾಧ ವಿಭಾಗದ ನಾಗರತ್ನ ಭೇಟಿ ನೀಡಿ ಘಟನೆಯಿಂದ ಉಂಟಾಗಿದ್ದ ಟ್ರಾಫಿಕ್ ಜಾಮ್ ನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವರದಿ:- ಇಬ್ರಾಹಿಂ ಖಲೀಲ್.