ಹ.ಬೊ.ಹಳ್ಳಿ ವಿಧಾನಸಭೆ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾದ ಜೆಡಿಎಸ್ನ ಕೆ.ನೇಮಿರಾಜನಾಯ್ಕ, ತಮ್ಮ ಬೆಂಬಲಿಗರೊಂದಿಗೆ ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು.
ಜಿಲ್ಲಾ ಕೇಂದ್ರದಲ್ಲಿ ಮತಗಳ ಎಣಿಕೆ ಕೇಂದ್ರದಲ್ಲಿ ಆಯ್ಕೆಯ ಪ್ರಮಾಣ ಪತ್ರ ಪಡೆದು ಕೊಟ್ಟೂರಿಗೆ ಆಗಮಿಸಿದ ನೇಮಿರಾಜನಾಯ್ಕ, ಸ್ವಾಮಿ ದರ್ಶನ ಪಡೆದು ವಿಶೇಷ ಪೂಜಾ ಸಂಕಲ್ಪ ಮಾಡಿಸಿದರು. ಶಾಸಕರು ದೇವಸ್ಥಾನಕ್ಕೆ ಆಗಮಿಸುವ ಸುದ್ದಿ ತಿಳಿದು ಅಪಾರ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದರು. ಕೂಡ್ಲಿಗಿ ರಸ್ತೆಯ ದ್ವಾರಬಾಗಿಲಿನಿಂದ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಬಂದ ಅವರನ್ನು ದಾರಿಯುದ್ದಕ್ಕೂ ಜಯಘೋಷಣೆ ಹಾಕಿ ಬರಮಾಡಿಕೊಂಡರು. ದೇವಸ್ಥಾನದಲ್ಲಿ ವಿಶೇಷ ಪೂಜಾ ಸಂಕಲ್ಪ ಮಾಡಿಸಿದ ಶಾಸಕರಿಗೆ ಧರ್ಮಕರ್ತ ಬಳಗದಿಂದ ಶಾಲು ಹಾಕಿ ಗೌರವಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಗೆಲುವು ನನ್ನದಲ್ಲ, ಕ್ಷೇತ್ರದ ಇಡೀ ಕಾರ್ಯಕರ್ತರ ಗೆಲುವು. ಜೆಡಿಎಸ್ ಬಿ ಫಾರಂ ಪಡೆದ ದಿನದಿಂದ ಕೊನೆವರೆಗೆ ಎಲ್ಲ ಗ್ರಾಮದ ಜನರು ನನ್ನನ್ನು ಅಭೂತಪೂರ್ವವಾಗಿ ಬೆಂಬಲಿಸಿದರು. ಅನೇಕರು ಚುನಾವಣೆ ವೆಚ್ಚಕ್ಕಾಗಿ ಹಣವನ್ನು ದೇಣಿಗೆ ನೀಡಿದರು. ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದರು. ಅವರ ಅಪೇಕ್ಷೆಯಂತೆ ನಾನು ಆಯ್ಕೆಯಾಗಿದ್ದು, ಸರಕಾರದಿಂದ ಅನುದಾನ ಪಡೆದು ಕ್ಷೇತ್ರವನ್ನು ಅಭಿವೃದ್ಧಿ ಮಾಡುವೆ ಎಂದರು.
ಜಿಲ್ಲಾ ಪಂಚಾಯಿತಿ
ಮಾಜಿ ಸದಸ್ಯ ಎಂ ಎಂ ಜೆ ಹರ್ಷವರ್ಧನ, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಬೋರ್ವೆಲ್ ತಿಪ್ಪೇಸ್ವಾಮಿ, ಬಿಆರ್ ವಿಕ್ರಮ್, ವಿಜಯನಗರ ಕೊಟ್ರೇಶ್, ಕಾಮಶೆಟ್ಟಿ ಕೊಟ್ರೇಶ, ಎ.ಕೊಟ್ರೇಶ ಇತರರು ಇದ್ದರು.
ವರದಿ: ಶಿವರಾಜ್ ಕನ್ನಡಿಗ