“ನೀರಿಗಾಗಿ ಮಹಿಳೆಯರು, ಮಹಿಳೆಯರಿಗಾಗಿ ನೀರು” ಅಭಿಯಾನ; ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಪ್ರಾತ್ಯಕ್ಷಿಕೆ

0
17

ಬಳ್ಳಾರಿ,ನ.10: ಅಮೃತ್ 2.0 ಕಾರ್ಯಕ್ರಮದಡಿ “ನೀರಿಗಾಗಿ ಮಹಿಳೆಯರು, ಮಹಿಳೆಯರಿಗಾಗಿ ನೀರು” ಅಭಿಯಾನದಡಿ ಸ್ವಸಹಾಯ ಸಂಘಗಳ ಸದಸ್ಯರನ್ನು ನೀರು ಶುದ್ಧೀಕರಣ ಘಟಕಗಳಿಗೆ ಭೇಟಿ ಮಾಡಿಸಿ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪ್ರಕ್ರಿಯೆಯ ಬಗ್ಗೆ ಹಾಗೂ ಮಾಲಿಕತ್ವದ ಭಾವನೆಯನ್ನು ಹೊಂದಲು ಪ್ರಾತ್ಯಕ್ಷಿಕೆ ಕೈಗೊಳ್ಳಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಉಪ ಮೇಯರ್ ಬಿ.ಜಾನಕಿ ಅವರು ಹೇಳಿದರು.

ಮಹಾನಗರ ಪಾಲಿಕೆ ಮತ್ತು ಜಿಲ್ಲಾ ನಗರಾಭಿವೃದ್ದಿ ಕೋಶ ವತಿಯಿಂದ, ನಾಗರಿಕರು ಉತ್ತಮ ಗುಣಮಟ್ಟದ ನೀರನ್ನು ಪಡೆದುಕೊಳ್ಳಲು ಅನುಸರಿಸುವ ವಿವಿಧ ಪರೀಕ್ಷಾ ಮಾದರಿಯ ಪ್ರಕ್ರಿಯೆಯ ಮಾಹಿತಿಯನ್ನು ತಿಳಿಸಲು “ಜಲ ದೀಪಾವಳಿ” ಕಾರ್ಯಕ್ರಮ ಮೂಲಕ “ನೀರಿಗಾಗಿ ಮಹಿಳೆ ಮಹಿಳೆಗಾಗಿ ನೀರು” ಆಂದೋಲನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಅಲ್ಲಿಪುರ, ಸಂಗನಕಲ್ಲು/ಮೋಕಾ ನೀರು ಶುದ್ದೀಕರಣ ಘಟಕಗಳಿಗೆ ಸ್ವಸಹಾಯ ಸಂಘದ 90 ಮಹಿಳೆಯರನ್ನು ವೀಕ್ಷಣೆಗಾಗಿ ಭೇಟಿ ನೀಡಿ, ಘಟಕಗಳಲ್ಲಿ ಕಚ್ಚಾ ನೀರು ಪೂರೈಕೆ ಮತ್ತು ಶುದ್ದ ಮತ್ತು ಸುರಕ್ಷಿತ ಕುಡಿಯುವ ನೀರಿನ ವಿವಿಧ ಪರೀಕ್ಷಾ ಮಾದರಿಗಳ ಬಗ್ಗೆ ಹಾಗೂ ನೀರಿನ ಸಮರ್ಪಕ ಬಳಕೆ, ನೀರಿನ ಮಹತ್ವದ ಬಗ್ಗೆ ನೀರು ಶುದ್ದೀಕರಣ ಘಟಕಗಳ ಅಭಿಯಂತರರುಗಳ ಮೂಲಕ ಮಾಹಿತಿ ಮತ್ತು ಅರಿವನ್ನು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ವೀಕ್ಷಣೆಯ ನಂತರ ನೀರಿನ ಸಮರ್ಪಕ ಬಳಕೆಯ ಬಗ್ಗೆ ಸಾರ್ವಜನಿಕರ ಪಾತ್ರ ಹಾಗೂ ಮಿತವಾಗಿ ಅಗತ್ಯತೆಗೆ ಅನುಗುಣವಾಗಿ ಬಳಕೆ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ನೀರಿನ ಸಂಸ್ಕರಣಾ ಘಟಕಗಳು ನಿರ್ವಹಿಸುತ್ತಿರುವ ಮಹತ್ವದ ಕಾರ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದು ಈ ವಿಷಯವನ್ನು ತಮ್ಮ ಗುಂಪಿನ ಇತರೆ ಸದಸ್ಯರುಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಮೂಲಕ ತಮ್ಮ ಜವಬ್ದಾರಿಯನ್ನು ನಿರ್ವಹಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರಾಘವೇಂದ್ರ ಗುರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಟ್ಟಪ್ಪ, ಮಹಾನಗರ ಪಾಲಿಕೆ ಅಭಿಯಾನ ವ್ಯವಸ್ಥಾಪಕ ವಿಶ್ವನಾಥ, ದೇವರಾಜ್.ಎ, ಕೆಯುಡಬ್ಲ್ಯೂಎಸ್ ಎಇಇ ಹಿಡಿಬಿ. ಸುಕಮುನಿ, ಸೌಮ್ಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಡೇ-ನಲ್ಕ್ ಶಾಖೆಯ ಸಿಬ್ಬಂದಿಗಳು, ನೀರು ಶುದ್ದೀಕರಣ ಘಟಕದ ಸಿಬ್ಬಂದಿಗಳು ಹಾಗೂ ಸ್ವಸಹಾಯ ಸಂಘದ 90 ಮಹಿಳಾ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here