ಸುಗಮ, ಸುಲಲಿತ ಚುನಾವಣೆಗೆ ಆಯೋಗದಿಂದ ಹಲವು ಆಪ್ನಾಮಪತ್ರ ಸಲ್ಲಿಕೆ, ರಾಜಕೀಯ ಪ್ರಚಾರ ಅನುಮತಿಗಾಗಿ ‘ಸುವಿಧಾ’ ಆಪ್ ಸಹಕಾರಿ

0
33

ಬಳ್ಳಾರಿ,ಮಾ.28: ಚುನಾವಣೆಗಳನ್ನು ಸುಗಮ ಮತ್ತು ಸುಲಲಿತವಾಗಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಹಲವು ಆಪ್ ಗಳನ್ನು ಸಿದ್ಧಪಡಿಸಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ನಡೆಸಲು ಆಪ್‍ಗಳು ಚುನಾವಣಾ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಮೊಬೈಲ್ ತಂತ್ರಜ್ಞಾನದಿಂದ ಸಾರ್ವಜನಿಕರು ಕೂತಲ್ಲಿಯೇ ತಮ್ಮ ಅಂಗೈಯಲ್ಲಿ ಮತದಾರ ಗುರುತಿನ ಚೀಟಿ ಬಗ್ಗೆ ಇರುವ ಸಂದೇಹ, ಚುನಾವಣೆ ಪ್ರಕ್ರಿಯೆ, ತಮ್ಮ ವ್ಯಾಪ್ತಿಯ ಅಭ್ಯರ್ಥಿಗಳ ಮಾಹಿತಿ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಕೇಂದ್ರ ಚುನಾವಣಾ ಆಯೋಗವು ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್‍ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ. ಅದರಲ್ಲಿ ಸುವಿಧಾ ಪೋರ್ಟಲ್ ಒಂದು….

ಸುವಿಧಾ ಪೋರ್ಟಲ್:
ಸುವಿಧಾ ಪೋರ್ಟಲ್ ಮೂಲಕ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳಿಗೆ ಆನ್‍ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಮತ್ತು ಅನುಮತಿಗಳನ್ನು ಪಡೆಯಲು ಅಭಿವೃದ್ಧಿ ಪಡಿಸಲಾಗಿದೆ.
ನಾಮಪತ್ರಗಳನ್ನು ಭರ್ತಿ ಮಾಡಲು ಅನುಕೂಲವಾಗುವಂತೆ, ಚುನಾವಣಾ ಆಯೋಗವು ನಾಮಪತ್ರ ಮತ್ತು ಅಫಿಡೇವಿಟ್ ಅನ್ನು ಭರ್ತಿ ಮಾಡಲು ಸುವಿಧಾ ಆನ್‍ಲೈನ್ ಪೋರ್ಟಲ್‍ಅನ್ನು ಪರಿಚಯಿಸಿದೆ.

ಅಭ್ಯರ್ಥಿಯು ತನ್ನ ಖಾತೆಯನ್ನು ರಚಿಸಲು https://suvidha.eci.gov.in/ ಗೆ ಭೇಟಿ ನೀಡಬಹುದು. ನಾಮನಿರ್ದೇಶನ ಫಾರ್ಮ್ ಅನ್ನು ಭರ್ತಿ ಮಾಡಿ, ಭದ್ರತಾ ಠೇವಣಿ ಮಾಡಬಹುದು. ಸಮಯದ ಸ್ಲಾಟ್ ಲಭ್ಯತೆಯನ್ನು ಪರಿಶೀಲಿಸಬಹುದು ಮತ್ತು ಚುನಾವಣಾಧಿಕಾರಿಗೆ ಅವರ ಭೇಟಿಯನ್ನು ಸೂಕ್ತವಾಗಿ ಯೋಜಿಸಬಹುದು.
ಆನ್‍ಲೈನ್ ಪೋರ್ಟಲ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿದ ನಂತರ, ಅಭ್ಯರ್ಥಿಯು ನಕಲು ಪ್ರತಿ ತೆಗೆದುಕೊಂಡು ಅದನ್ನು ನೋಟರೈಸ್ ಮಾಡಿ ಮತ್ತು ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿಯನ್ನು ವೈಯಕ್ತಿಕವಾಗಿ ಚುನಾವಣಾಧಿಕಾರಿಗೆ ಸಲ್ಲಿಸಬೇಕಾಗುತ್ತದೆ.
ಆನ್‍ಲೈನ್ ನಾಮನಿರ್ದೇಶನ ಸೌಲಭ್ಯವು ಫೈಲಿಂಗ್ ಅನ್ನು ಸುಲಭಗೊಳಿಸಲು ಮತ್ತು ಸರಿಯಾದ ಫೈಲಿಂಗ್ ಅನ್ನು ಸುಲಭಗೊಳಿಸಲು ಐಚ್ಛಿಕ ಸೌಲಭ್ಯವಾಗಿದೆ. ಕಾನೂನಿನಡಿಯಲ್ಲಿ ಸೂಚಿಸಲಾದ ನಿಯಮಿತ ಆಫ್‍ಲೈನ್ ಸಲ್ಲಿಕೆಯೂ ಮುಂದುವರೆಯುತ್ತದೆ.

ಯಾವ್ಯಾವುಗಳಿಗೆ ಅನುಮತಿ ಪಡೆಯಬಹುದು?:
ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಯ ಯಾವುದೇ ಪ್ರತಿನಿಧಿಗಳು ಸುವಿಧಾ ಪೋರ್ಟಲ್ https://suvidha.eci.gov.in/ ಮೂಲಕ ಸಭೆಗಳು, ರ್ಯಾಲಿಗಳು, ಧ್ವನಿವರ್ಧಕಗಳಿಗೆ ಅನುಮತಿ, ತಾತ್ಕಾಲಿಕ ಕಚೇರಿಗಳು ಮತ್ತು ಇತರ ವಿಷಯಗಳ ಅನುಮತಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 15 ಅರ್ಜಿ ಸಲ್ಲಿಕೆ:
ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಭ್ಯರ್ಥಿಗಳು ಸಭೆ, ಸಮಾವೇಶ ಮತ್ತು ಮತ ಪ್ರಚಾರಕ್ಕೆ ಸಂಬಂಧಿಸಿದಂತೆ ಸುವಿಧಾ ಪೋರ್ಟಲ್ ಮೂಲಕ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 15 ಅರ್ಜಿಗಳು ಸ್ವೀಕೃತಗೊಂಡಿದ್ದು, 13 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ ಮತ್ತು 02 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಧ್ವನಿವರ್ಧಕ ಜೊತೆಗೂಡಿ ಸಭೆ ಅನುಮತಿಗೆ ಸಲ್ಲಿಕೆಯಾದ ಅರ್ಜಿ:
91 ಕಂಪ್ಲಿ-1, 92 ಸಿರುಗುಪ್ಪ-4, 94 ಬಳ್ಳಾರಿ ನಗರ-4, 95 ಸಂಡೂರು-1 ಸೇರಿದಂತೆ ಒಟ್ಟು 10.

ಧ್ವನಿವರ್ಧಕ ಹೊರತುಪಡಿಸಿ ಸಭೆ ಅನುಮತಿಗೆ ಸಲ್ಲಿಕೆಯಾದ ಅರ್ಜಿ:
95 ಸಂಡೂರು-1.

ತಾತ್ಕಾಲಿಕ ರಾಜಕೀಯ ಪಕ್ಷದ ಸಭೆ ಅನುಮತಿಗೆ ಸಲ್ಲಿಕೆಯಾದ ಅರ್ಜಿ:
95 ಸಂಡೂರು-1.

ಧ್ವನಿವರ್ಧಕ ಜೊತೆಗೂಡಿ ಪ್ರಚಾರ ವಾಹನ ಅನುಮತಿಗೆ ಸಲ್ಲಿಕೆಯಾದ ಅರ್ಜಿ:
93 ಬಳ್ಳಾರಿ ಗ್ರಾಮೀಣ-2.

ಕರಪತ್ರ ಹಂಚುವಿಕೆಗೆ ಅನುಮತಿಗೆ ಸಲ್ಲಿಕೆಯಾದ ಅರ್ಜಿ:
93 ಬಳ್ಳಾರಿ ಗ್ರಾಮೀಣ-1.
ಸಾರ್ವಜನಿಕ ಸಭೆಗಳು, ಸಭೆಗಳಿಗೆ ಅನುಮತಿ ಪಡೆಯಲು ಸುವಿಧಾ ಆಪ್ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದೇರೀತಿಯಾಗಿ ಅಭ್ಯರ್ಥಿಗಳು ತಮ್ಮ ಅರ್ಜಿಯ ಸ್ಥಿತಿಯನ್ನು ಅದೇ ಪೋರ್ಟಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಇತರೆ ಆಪ್‍ಗಳು:

ಸಿ-ವಿಜಿಲ್ ಆಪ್:
ಈ ಆಪ್ ಸಹಾಯದಿಂದ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಅಕ್ರಮ ನಡೆಯುತ್ತಿದ್ದರೆ ಅದನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ಸುಲಭದಲ್ಲಿ ದೂರು ನೀಡಬಹುದು. ಅಭ್ಯರ್ಥಿ ಯಾರನ್ನಾದರೂ ಆಮಿಷ ಒಡ್ಡುತ್ತಿದ್ದರೆ ಅದನ್ನು ಸಹ ಬಹಿರಂಗಪಡಿಸಬಹುದು. ಪೋಟೋ, ವಿಡಿಯೋ, ಆಡಿಯೋ ಅಪ್‍ಲೋಡ್ ಮಾಡುವ ಮತ್ತು ತಕ್ಷಣ ದೂರು ದಾಖಲಿಸುವ ವ್ಯವಸ್ಥೆ ಇದರಲ್ಲಿದೆ. ಇದು ದೂರು ಸ್ವೀಕರಿಸಿದ 100 ನಿಮಿಷಗಳಲ್ಲಿ ಪ್ರತಿಕ್ರಿಯೆಯನ್ನು ನೀಡುತ್ತದೆ.

ನಿಮ್ಮ ಅಭ್ಯರ್ಥಿಯ ಬಗ್ಗೆ ತಿಳಿಯಲು ಕೆವೈಸಿ ಆಪ್:
ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲಿಸಲು ಭಾರತೀಯ ಚುನಾವಣಾ ಆಯೋಗ ನಿಮ ಅಭ್ಯರ್ಥಿಯ ಬಗ್ಗೆ ತಿಳಿಯಿರಿ ಕೆವೈಸಿ ಆಪ್ ಜಾರಿಗೊಳಿಸಿದೆ.ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ವಸ್ತುಸ್ಥಿತಿ ಮಾಹಿತಿ ಪಡೆಯಲು ಸಹಕಾರಿಯಾಗಿದ್ದು, ಮತದಾರರನ್ನು ಈ ಆಪ್ ಜಾಗೃತಗೊಳಿಸುತ್ತದೆ.

ವೋಟರ್ ಟರ್ನೌಟ್ ಆಪ್:
ಪ್ರತಿಯೊಂದು ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಅಳೆಯುವ ವೋಟರ್ ಟರ್ನೌಟ್ ಆಪ್ ಮೂಲಕ ಚುನಾವಣಾಧಿಕಾರಿ ಮತದಾನದ ಪ್ರಮಾಣವನ್ನು ದಾಖಲಿಸುತ್ತಿದ್ದಂತೆ ಈ ಪೋರ್ಟಲ್ ಮೂಲಕ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ. ಈ ಆಪ್ ಮೂಲಕ ಪ್ರತಿಯೊಂದು ಕೇತ್ರದಲ್ಲಿ ಮತದಾನ ಪ್ರಮಾಣದ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ.

ಸಾಕ್ಷಂ ಆಪ್:
ವಿಶೇಷಚೇತನ ಮತದಾರರು ಈಗ ಸುಲಭವಾಗು ಮತ ಚಲಾಯಿಸಬಹುದು. ಇದಕ್ಕಾಗಿ ಈ ಆಪ್ ಅವರಿಗೆ ಸಹಾಯ ಮಾಡುತ್ತದೆ. ಇದರ ಮೂಲಕ, ವಿಶೇಷಚೇತನ ವ್ಯಕ್ತಿಗಳು ನೋಂದಾಯಿಸಿಕೊಳ್ಳಬಹುದು ಮತ್ತು ತಿದ್ದುಪಡಿಗಳನ್ನು ಮಾಡಬಹುದು. ಈ ಆಪ್ ಮೂಲಕ ವಿಶೇಷಚೇತನರು ತಮ್ಮ ಮನೆಯಲ್ಲಿಯೇ ಕುಳಿತು ಮತದಾನ ಮಾಡುವ ಸೌಲಭ್ಯವನ್ನು ಹೊಂದಬಹುದಾಗಿದೆ.

ವೋಟರ್ ಆಪ್:
ವೋಟರ್ ಆಪ್ ಮೂಲಕ ಮತದಾರರ ಪಟ್ಟಯಲ್ಲಿ ಹೆಸರು, ತಿದ್ದುಪಡಿ ಮಾಡಬಹುದು ಹಾಗೂ ಮತದಾನ ಕೇಂದ್ರಗಳ ವಿವರ ನೋಡಬಹುದು. ಇ-ಎಪಿಕ್ ಕಾರ್ಡ್ ಡೌನ್‍ಲೋಡ್ ಮಾಡಿಕೊಳ್ಳಬಹುದು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಹಬ್ಬ ಇದ್ದಂತೆ. ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಚುನಾವಣಾ ಆಯೋಗವು ಹಲವು ಮೊಬೈಲ್ ಆಪ್‍ಗಳನ್ನು ಜಾರಿ ತಂದಿದ್ದು, ಸಾರ್ವಜನಿಕರು ಇವುಗಳನ್ನು ಬಳಸಿಕೊಂಡು ಚುನಾವಣೆ ಪ್ರಕ್ರಿಯೆಯ ಮಾಹಿತಿ ಹೊಂದುವುದರ ಮೂಲಕ ಚುನಾವಣೆ ನಿಸ್ಪಕ್ಷಪಾತವಾಗಿ ನಡೆಸಿ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here