ಬಳ್ಳಾರಿ,ಫೆ.12 : ಜಿಪಂ ಸಿಇಒ ನಂದಿನಿ ಕೆ.ಆರ್ ಅವರ ಮಾರ್ಗದರ್ಶನದಲ್ಲಿ ಮತ್ತು ಅವರ ಮುಂದಾಳತ್ವದಲ್ಲಿ ಐಎಎಸ್,ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತೆಯನ್ನು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪಿಯುಸಿ,ಪದವಿ ಮತ್ತು ಸ್ನಾತಕೋತ್ತರ ಪದವೀಧರ ವಿಶೇಷಚೇತನರಿಗಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕುರಿತು ವೆಬ್ಎಕ್ಸ್ ಅಥವಾ ಜೂಮ್ (ಆನ್ಲೈನ್)ಮೂಲಕ ತರಬೇತಿ ಕಾರ್ಯಾಗಾರ ಶುಕ್ರವಾರ ಆರಂಭವಾಯಿತು.
2017 ನೇ ಬ್ಯಾಚ್ನ ಐಎಎಸ್ ಅಧಿಕಾರಿಗಳು ಹಾಗೂ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದವರೇ ಆದ ವಿಶೇಷಚೇತನ ಕೆಂಪಹೊನ್ನಯ್ಯ ಅವರು ಈ ವೆಬ್ಎಕ್ಸ್ ಅಥವಾ ಜೂಮ್ ಮೂಲಕ ಗ್ರಾಪಂಗಳ ಕಚೇರಿಯಲ್ಲಿ ಕುಳಿತುಕೊಂಡು ಈ ತರಬೇತಿಯಲ್ಲಿ ಪಾಲ್ಗೊಂಡ ಪಿಯುಸಿ,ಪದವಿ ಮತ್ತು ಸ್ನಾತಕೋತ್ತರ ವಿಶೇಷಚೇತನರ ಪದವೀಧರರಿಗೆ ತಮ್ಮ ಐಎಎಸ್ವರೆಗಿನ ಸಾಗಿಬಂದ ದಾರಿ ಕುರಿತು ಎಳೆಎಳೆಯಾಗಿ ವಿವರಿಸಿದರು.
ವಿಶೇಷಚೇತನರು ಯಾರಿಗೂ ಕಡಿಮೆ ಇಲ್ಲ;ಯಾವುದೇ ರೀತಿಯ ಎದೆಗುಂದುವ ಅವಶ್ಯಕತೆಯೂ ಇಲ್ಲ. ಸಾಮಾನ್ಯರಿಗೆ ಇರುವ ಅವಕಾಶಗಳು ತಮಗೂ ಇದ್ದು;ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ಐಎಎಸ್ ಮತ್ತು ಕೆಎಎಸ್ನಂತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡಿ ಎಂದು ಐಎಎಸ್ ಅಧಿಕಾರಿಗಳಾಗಿರುವ ವಿಶೇಷ ಚೇತನ ಕೆಂಪಹೊನ್ನಯ್ಯ ಅವರು ಸಲಹೆ ನೀಡಿದರು.
ಬಳ್ಳಾರಿ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ವಿಶೇಷಚೇತನರಿಗಾಗಿಯೇ ಈ ರೀತಿಯ ಕಾರ್ಯಾಗಾರ ಆಯೋಜಿಸಿರುವುದು ಖುಷಿತಂದಿದೆ ಎಂದರು.
ಕಪಗಲ್ಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕುಳಿತುಕೊಂಡು ಈ ಆನ್ಲೈನ್ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಐಎಎಸ್ ಮತ್ತು ಕೆಎಎಸ್ ಹಾಗೂ ಇನ್ನೀತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದರ ಕುರಿತು ಸವಿವರವಾಗಿ ವಿವರಿಸಿದರು.
ಈ ಆನ್ಲೈನ್ ತರಬೇತಿ ಕಾರ್ಯಾಗಾರದಲ್ಲಿ ಸುಮಾರು 500 ರಿಂದ 600 ವಿಕಲಚೇತನರು ಇದರ ಸದುಪಯೋಗವನ್ನು ಪಡೆದುಕೊಂಡರು.
ಮುಂದಿನ ವಾರ ಮತ್ತೊಬ್ಬ ವಿಶೇಷಚೇತನ ಸಾಧಕರ ಮೂಲಕ ಪಿಯುಸಿ,ಪದವಿ ಮತ್ತು ಸ್ನಾತಕೋತ್ತರ ಪದವೀಧರ ವಿಶೇಷಚೇತನರಿಗೆ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ತಾಪಂ ಇಒ ಮಡಗಿನ ಬಸಪ್ಪ, ವಿಕಲಚೇತನ ಕಲ್ಯಾಣಾಧಿಕಾರಿ ಮಹಾಂತೇಶ ಸೇರಿದಂತೆ ಅನೇಕರು ಇದ್ದರು.