ಧಾರವಾಡ ಜಿಲ್ಲಾ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಉದ್ಘಾಟನೆಯಾದ ಮಕ್ಕಳ ಸ್ನೇಹಿ ನ್ಯಾಯಾಲಯ

0
83

ಧಾರವಾಡ ಫೆ.13: ರಾಜ್ಯದಲ್ಲಿ ಪೋಕ್ಸೊ ಕಾಯ್ದೆ ಸೇರಿದಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ವೋಚ್ಚ ನ್ಯಾಯಾಲಯ ನಿರ್ದೇಶನದಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅನುದಾನದಲ್ಲಿ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಸಿದ್ಧಗೊಳಿಸಿರುವ ಮಕ್ಕಳ ಸ್ನೇಹಿ ನ್ಯಾಯಾಲಯವನ್ನು ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಧಾರವಾಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ ಕುಮಾರ ಅವರು ಇಂದು ಬೆಳಿಗ್ಗೆ ಉದ್ಘಾಟಿಸಿದರು.

ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅನುದಾನದಡಿ ಮೊದಲ ಹಂತವಾಗಿ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪೂರೈಸಲಾಗುತ್ತಿದೆ. ಅದರಂತೆ ಧಾರವಾಡ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಸಿದ್ಧಗೊಂಡಿರುವ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಸಂತ್ರಸ್ಥ ಮಗುವಿಗೆ ಪ್ರತ್ಯೇಕ ಕೊಠಡಿ, ಆರೋಪಿತನಿಗೆ ಬೇರೆ ಕೊಠಡಿ, ಮಕ್ಕಳ ಶೌಚಾಲಯ, ಅಡುಗೆ ಮನೆ, ಅಗತ್ಯವಿದ್ದಲ್ಲಿ ಮಗುವಿನ ಪಾಲಕರಿಗೆ ರಾತ್ರಿ ವೇಳೆ ಉಳಿಯಲು ಕೊಠಡಿ, ಕಟ್ಟಡ ಆವರಣದಲ್ಲಿ ಮಕ್ಕಳಿಗಾಗಿ ಆಟದ ಮೈದಾನ, ಮಕ್ಕಳ ಪಾಲಕರಿಗೆ ಪ್ರತ್ಯೇಕ ಕೊಠಡಿ, ವಿಡಿಯೋ ಕಾನ್ಪರೆನ್ಸ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳಿಗಾಗಿ ಗ್ರಂಥಾಲಯ, ವರ್ಣಮಾಲೆ ಅಕ್ಷರಗಳಿರುವ ಚಾಪೆ (ಮ್ಯಾಟ್)ಗಳ ವ್ಯವಸ್ಥೆ, ಫ್ರೀಜ್, ನ್ಯಾಯಾಧೀಶರ ಕೋರ್ಟ ಹಾಲ್ ಹಾಗೂ ನ್ಯಾಯಾಧೀಶರಿಗೆ ಪ್ರತ್ಯೇಕ ಕೊಠಡಿ, ನಿರ್ವಹಣೆಗೆ ಸಿಬ್ಬಂದಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಮಕ್ಕಳ ಸ್ನೇಹಿ ನ್ಯಾಯಾಲಯದ ಉದ್ಘಾಟನೆಯ ನಂತರ ಪ್ರತಿ ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ, 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ಮತ್ತು ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಧೀಶೆ ಶ್ರೀಮತಿ ಎಂ ಪಂಚಾಕ್ಷರಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಚಿಣ್ಣನ್ನವರ, ಸಿ.ಜೆ.ಎಮ್. ನ್ಯಾಯಾಧೀಶ ಸಂಜಯ ಗುಡಗುಡಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಗೊಡ್ಸೆ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ವ್ಹಿ.ಡಿ.ಕಾಮರಡ್ಡಿ, ಆನಂದ ಮಗದುಮ ಸೇರಿದಂತೆ ಧಾರವಾಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ವಿವಿಧ ತಾಲೂಕುಗಳ ನ್ಯಾಯಾಧೀಶರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವ್ಹಿ.ಎ.ಪಾಟೀಲ, ಲೋಕೊಪಯೋಗಿ ಇಲಾಖೆಯ ಕಾರ್ಯಪಾಲಯಕ ಅಭಿಯಂತರ ಎಸ್.ಬಿ.ಚೌಡನ್ನವರ, ಸ.ಕಾ.ಅಭಿಯಂತರ ವ್ಹಿ.ಎನ್.ಪಾಟೀಲ, ಸಹಾಯಕ ಅಭಿಯಂತರ ವಿಜಯಮಹಾಂತೇಶ ಹಾಗೂ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿಗಳು ಪಾಲ್ಗೋಂಡಿದ್ದರು.

LEAVE A REPLY

Please enter your comment!
Please enter your name here