ಬಳ್ಳಾರಿ,ಮಾ.31: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಳ್ಳಾರಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾ ವಿಭಾಗದ ಸಹಯೋಗದೊಂದಿಗೆ ಪೋಷಣಾ ಅಭಿಯಾನ ಯೋಜನೆಯಡಿ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಭಾಗವಾಗಿ “ಪರಂಪರಾಗತ ಆಹಾರ ಪದ್ದತಿ ಕುರಿತು ಆಹಾರ ಪ್ರದರ್ಶನ” ನಗರದ ದೇವಿನಗರ ಬಡಾವಣೆಯ ಸಿಡಿಪಿಒ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ್.ಆರ್ ಅವರು ಜಿಲ್ಲೆಯಲ್ಲಿ ಅಪೌಷ್ಠಿಕತೆಯನ್ನು ಹೊಗಲಾಡಿಸಲು ಪೌಷ್ಠಿಕ ಆರೋಗ್ಯದ ಹಿತದೃಷ್ಠಿಯಿಂದ ಪರಂಪರಾಗತ ಆಹಾರ ಪದ್ದತಿ ಕುರಿತು ಆಹಾರ ಪ್ರದರ್ಶನ ಏರ್ಪಡಿಸಿರುವುದು ತುಂಬಾ ಉತ್ತಮ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೆಚ್ಚು ಹೆಚ್ಚು ಆಯೋಜನೆ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕರೆ ನೀಡಿದರು.
ಬಳ್ಳಾರಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಉಷಾ ಅವರು ಮಾತನಾಡಿ, ಪೋಷಣ ಅಭಿಯಾನ ಮತ್ತು ಪೋಷಣ್ ಪಕ್ವಾಡ್ ಬಗ್ಗೆ ತಿಳಿಸಿದರು. ಸ್ಥಳೀಯವಾಗಿ ದೊರೆಯುವ, ಪೌಷ್ಟಿಕಾಂಶ ಹಾಳಾಗದಂತ ಪರಂಪರಾಗತ ಆಹಾರ ಪದ್ದತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿದ್ದು, ಸಾರ್ವಜನಿಕರು ಹೆಚ್ಚು ಹೆಚ್ಚು ಇಂತಹ ಪೌಷ್ಠಿಕ ಆಹಾರವನ್ನು ತಾವುಗಳು ಮನೆಯಲ್ಲಿ ನಿರಂತರವಾಗಿ ಮಾಡಿಕೊಂಡು ತಿನ್ನುವುದರಿಂದ ಅಪೌಷ್ಠಿಕತೆ ತೊಲಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಗ್ರಾಮೀಣ ಭಾಗದ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯರು ಸ್ವತಃ ತಾವೇ ಸ್ಥಳೀಯವಾಗಿ ದೊರೆಯುವ, ಪೌಷ್ಟಿಕಾಂಶ ಹಾಳಾಗದಂತ ಪರಂಪರಾಗತ ಆಹಾರ ಪದ್ದತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿದ್ದು, ಅವುಗಳನ್ನು ಸಾರ್ವಜನಿಕರಿಗೆ ಪ್ರದರ್ಶನ ಮಾಡುವುದರ ಜೊತೆಗೆ ಅವುಗಳ ತಯಾರಿಕೆ ಕುರಿತು ಪ್ರಾತ್ಯಾಕ್ಷಿತೆಯನ್ನು ಮಾಡಿ ತೋರಿಸಿದರು. ಅವುಗಳನ್ನು ತಿನ್ನುವುದರಿಂದ ದೊರೆಯುವ ಪೌಷ್ಠಿಕಾಂಶಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು ಹಾಗೂ ಪೋಷಣ್ ಅಭಿಯಾನ ಯೋಜನೆ ತಾಲ್ಲೂಕು ಸಂಯೋಜಕರು ಹಾಗೂ ಸಹಾಯಕ ಸಂಯೋಜಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.