ಮಂಡ್ಯ – ಕರೋನಾದಂಥ ಸಂಕಷ್ಟ ಸಮಯದಲ್ಲೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ .ಕೆ.ಸಿ ನಾರಾಯಣಗೌಡ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ” ಪತ್ರಕರ್ತರಿಗೆ ಕೋವಿಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸುದ್ದಿ ನೀಡುವಲ್ಲಿ ಗಾಳಿ, ಮಳೆ , ಚಳಿಯನ್ನು ಲೆಕ್ಕಿಸದೇ ಕೆಲಸ ಮಾಡುತ್ತಿರುವುದು ಎಲ್ಲರೂ ಮೆಚ್ಚುವಂತ ಕೆಲಸ ಎಂದರು.
ಯಾವುದಕ್ಕೂ ಧೈರ್ಯಗೆಡದೇ ಮುನ್ನುಗುವ ನಿಮ್ಮ ಕಾರ್ಯವೈಖರಿಗೆ ಪತ್ರಿಕೋದ್ಯಮದ ಕಲಿಕೆಯೇ ಕಾರಣ ಎಂದು ಭಾವಿಸಿದ್ದೇನೆ ಎಂದರು.
ಸುದ್ದಿಯ ಧಾವಂತದಲ್ಲಿ ವೇಗವಾಗಿ ಕೆಲಸಕ್ಕೆ ಹೋಗುವ ಜವಾಬ್ದಾರಿ ನಿಮ್ಮದಾಗಿದ್ದು, ಆದ ಕಾರಣ ನಿಮ್ಮೆಲ್ಲರ ರಕ್ಷಣೆಗೆ ಸಾಮಾನ್ಯ ವಿಮೆಯನ್ನು ಮಾಡಿಸಿಕೊಳ್ಳಿ ಎಂದರು.
ನಂತರದಲ್ಲಿ ಪತ್ರಕರ್ತರಿಗೆ ಔಷಧಗಳ ಮೆಡಿಕಲ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ಬಾಟಲುಗಳನ್ನು ಸಚಿವರು ವಿತರಿಸಿದರು.
ಕಾರ್ಯಕ್ರಮದಲ್ಲಿ , ಮುಡಾ ಅಧ್ಯಕ್ಷ ಶ್ರೀನಿವಾಸ್, ವಾರ್ತಾಧಿಕಾರಿ ಟಿ.ಕೆ ಹರೀಶ್ , ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ, ಉಪಾಧ್ಯಕ್ಷ ಬಿ.ಪಿ ಪ್ರಕಾಶ್ , ಪ್ರಧಾನ ಕಾರ್ಯದರ್ಶಿ ಕೆ.ಮೋಹನ್ ರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.