ಕೋಲಾರ, ದೊಡ್ಡನತ್ತ ರೈಲ್ವೆ ನಿಲ್ದಾಣದಲ್ಲಿ, ಚಿಂತಾಮಣಿಯಿಂದ ದೆಹಲಿಯ ಆದರ್ಶನಗರಕ್ಕೆ ಮೊಟ್ಟ ಮೊದಲ ಬಾರಿಗೆ ಪ್ರಯಾಣ ಬೆಳೆಸುವ ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲಿಗೆ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಚಾಲನೆ ನೀಡಿದರು.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿರುವ ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲಿನಲ್ಲಿ ತರಕಾರಿ ಮತ್ತು ಹಣ್ಣನ್ನು ಸಾಗಿಸಲಾಗುತ್ತಿದೆ. ವಾರಕ್ಕೊಮ್ಮೆ ತರಕಾರಿ-ಹಣ್ಣು ಸಾಗಿಸಲಿರುವ ಈ ರೈಲನ್ನು ಬೇಡಿಕೆಯ ಆಧಾರದ ಮೇಲೆ ಇದರ ಆವರ್ತನ (ಜಿಡಿequeಟಿಛಿಥಿ) ಹೆಚ್ಚು ಮಾಡುವ ಪ್ರಸ್ತಾವನೆಯೂ ಇದೆ ಎಂದರು.
ಕಿಸಾನ್ ಸ್ಪೆಷಲ್ ಪಾರ್ಸೆಲ್ ಟ್ರೈನ್ ನಿಂದ ಸಾಗಾಣಿಕಾ ವೆಚ್ಚ ಮತ್ತು ಸಮಯದ ಉಳಿತಾಯವನ್ನು ಮಾಡಬಹುದಾಗಿದ್ದು, ರಸ್ತೆಯ ಮೂಲಕ ತರಕಾರಿ-ಹಣ್ಣು ಸಾಗಿಸಲು 4 ದಿನ ಬೇಕಾಗಿದ್ದು, ಈ ವಿಶೇಷ ಟ್ರೈನ್ ನಿಂದ ಕೇವಲ 40 ಗಂಟೆಗಳಲ್ಲಿ ದೆಹಲಿಗೆ ತಲುಪಿಸಬಹುದಾಗಿದೆ. ರಸ್ತೆಯ ಮೂಲಕ ಸಾಗಿಸಬೇಕಾಗಿದ್ದಲ್ಲಿ ಪ್ರತಿ ಕೆ.ಜಿ.ಗೆ 6 ರಿಂದ 7 ರೂ. ಸಾಗಾಣಿಕಾ ವೆಚ್ಚ ಆಗಲಿದ್ದು, ಈ ವಿಶೇಷ ರೈಲಿನಲ್ಲಿ ಕೇವಲ 2.50 ರಿಂದ 3.00 ರೂ. ಪ್ರತಿ ಕೆ.ಜಿ.ಗೆ ಆಗಲಿದ್ದು, ರೈತರು ಹಾಗೂ ಗ್ರಾಹಕರಿಗೆ ಲಾಭದಾಯಕವಾಗಲಿದೆ ಎಂದು ಸಂಸದರು ತಿಳಿಸಿದರು.
ಈ ಸಂದರ್ಭದಲ್ಲಿ ಚಿಂತಾಮಣಿ ಶಾಸಕರಾದ ಜೆ.ಕೆ.ಕೃಷ್ಣಾ ರೆಡ್ಡಿ, ನೈಋತ್ಯ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ (ಡಿ.ಆರ್.ಎಂ.) ಅಶೋಕ್ ವರ್ಮ, ವಾಣಿಜ್ಯ ವಿಭಾಗದ ಡಿ.ಆರ್.ಎಂ ಶ್ರೀಕೃಷ್ಣ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.