ವರದಿ:-ಮಹೇಶ್
ಜುಲೈ 19ರಿಂದ ಹಿಂದಿನ (1, 3, & 5ನೇ) ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುತ್ತೇವೆ ಎಂಬ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಹೊರಡಿಸಿರುವ ಸುತ್ತೋಲೆ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದ್ದು, ಹಿಂದಿನ ಸೆಮಿಸ್ಟರ್ನ ಪರೀಕ್ಷೆಗಳನ್ನು ನಡೆಸುವ
ವಿವಿಯ ನಿರ್ಧಾರವನ್ನು ಕೈಬಿಡಲು ಆಗ್ರಹಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಎಐಡಿಎಸ್ಓನ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ಮಾತನಾಡುತ್ತಾ “ರಾಜ್ಯದಲ್ಲಿ ಕೊರೋನ ಎರಡನೇ ಅಲೆಯು ತೀವ್ರತೆ ಹೆಚ್ಚಾಗಿ, ಲಾಕ್ ಡೌನ್ ಆಗಿದ್ದ ಸಮಯದಲ್ಲಿ, ಹಿಂದಿನ ಸೆಮಿಸ್ಟರ್ ನ ಪರೀಕ್ಷೆಗಳನ್ನು ನಡೆಸಬಾರದು ಎಲ್ಲಾ
ವಿದ್ಯಾರ್ಥಿಗಳನ್ನು ಮುಂದಿನ (2, 4 & 6ನೇ)ಸೆಮಿಸ್ಟರ್ ಗೆ ಕಳುಹಿಸಲಾಯಿತು ಮತ್ತು ಕಳೆದ 2 ತಿಂಗಳಿನಿಂದ ಪ್ರಸ್ತುತ ಸೆಮಿಸ್ಟರ್ಗಳ ಆನ್ ಲೈನ್ ತರಗತಿಗಳು ಸಹ ನಡಗಸುತ್ತಿವೆ. ಸೆಮಿಸ್ಟರ್ ಪರೀಕ್ಷೆ ಕುರಿತು ಸರ್ಕಾರ ಯಾವುದೇ ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲವೆಂದು ಹಾಗೂ ಈಗ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದೇ ಮುಖ್ಯ ಆದ್ಯತೆ ಎಂದು ಹೇಳಿದ್ದಾಗಲೂ ವಿವಿಯು ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಈಗ ಹಠಾತ್ತನೆ ಹಿಂದಿನ ಸೆಮಿಸ್ಟರಿನ ಪರೀಕ್ಷೆಯನ್ನು ಜುಲೈ ಕೊನೆಯ ವಾರದಿಂದ ಆಗಸ್ಟ್ ಮೊದಲ ವಾರದಲ್ಲಿ ಮುಗಿಸಿ ನಂತರ ಸೆಪ್ಟಂಬರ್ ಒಳಗೆ ಪ್ರಸ್ತುತ ಸೆಮಿಸ್ಟರ್ ಪರೀಕ್ಷೆಯನ್ನು ಮುಗಿಸುವುದು ವಿದ್ಯಾರ್ಥಿಗಳ ಮೇಲೆ ಅತೀವ ಒತ್ತಡ ಹೇರಿದಂತಾಗುತ್ತದೆ. ಹಾಗಾಗಿ 1, 3 & 5ನೇ ಸೆಮಿಸ್ಟರ್ ಪರಿಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಕೈ ಬಿಟ್ಟು 2, 4 & 6ನೇ ಸೆಮಿಸ್ಟರ್ನ ಪರೀಕ್ಷೆಗಳನ್ನಾದರು ಅಚ್ಚುಕಟ್ಟಾಗಿ ಮಾಡಬೇಕು” ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲಾಧ್ಯಕ್ಷರಾದ ಗುರಳ್ಳಿ ರಾಜ ಮಾತನಾಡುತ್ತಾ “ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸುವುದರ ಬಗ್ಗೆ ರಾಜ್ಯ ಸಮಿತಿ ನಡೆಸಿದ ಬೃಹತ್ ಗೂಗಲ್ ಸಮೀಕ್ಷೆಯಲ್ಲಿ ರಾಜ್ಯದ 48 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶೇ. 91.7ರಷ್ಟು ವಿದ್ಯಾರ್ಥಿಗಳು ಅಂದರೆ, 45ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರಿನ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಒಕ್ಕೊರಲಿನಿಂದ ತಿಳಿಸಿದ್ದಾರೆ AIDSO ಅನೇಕ ಜನ ಶಿಕ್ಷಣ ತಜ್ಞರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರೊಂದಿಗೂ ಸಹ ವ್ಯಾಪಕ
ಚರ್ಚೆ ನಡೆಸಿದೆ. ಈ ಹಿನ್ನೆಲೆಯಲ್ಲಿ ವಿವಿಯು ಶಿಕ್ಷಣ ತಜ್ಞರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳೊಡನೆ ಪ್ರಜಾತಾಂತ್ರಿಕ ಚರ್ಚೆಗಳನ್ನು ನಡೆಸಿ, ಶೈಕ್ಷಣಿಕ ವೇಳಾಪಟ್ಟಿ, ಪರೀಕ್ಷೆ, ಮೌಲ್ಯಮಾಪನ ಇವುಗಳ ಬಗ್ಗೆ ಒಂದು ವೈಜ್ಞಾನಿಕ -ಪ್ರಜಾತಾಂತ್ರಿಕ ನೀತಿಯನ್ನು
ರೂಪಿಸಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಎರಡು ಡೋಸ್ ಕರೋನ ಲಸಿಕೆ ನೀಡುವವರೆಗೂ ಆಫ್ ಲೈನ್ ತರಗತಿ/ಪರೀಕ್ಷೆಗಳನ್ನು ನಡೆಸಬಾರದು” ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ, ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ಕೆ.ಈರಣ್ಣ, ಶಾಂತಿ, ಕೆ. ಕಂಬಳಿ ಮಂಜುನಾಥ ಹಾಗೂ ಮತ್ತಿತರ ವಿದ್ಯಾರ್ಥಿಗಳು ಭಾಗಿವಹಿಸಿದ್ದರು.