ಮಡಿಕೇರಿ ಜೂನ್, 30 :- ಜಿಲ್ಲೆಯಲ್ಲಿ ಯಾವುದೇ ಹೋಂ ಸ್ಟೇ /ರೆಸಾರ್ಟ್ ಗಳಲ್ಲಿ ಪ್ರವಾಸಿಗರಿಗೆ ವಾಸ್ತವ್ಯ ಹೂಡಲು ಅವಕಾಶ ನೀಡಿದ್ದು ಕಂಡು ಬಂದಲ್ಲಿ ಸಾರ್ವಜನಿಕರು ಜಿಲ್ಲಾಡಳಿತದ ಸಹಾಯವಾಣಿ 1077 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಈಶ್ವರ್ ಕುಮಾರ್ ಖಂಡು ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಹೇಳಿದರು.
ಜಿಲ್ಲೆಯಲ್ಲಿ ಜುಲೈ 05ರ ವರೆಗೆ ಲಾಕ್ಡೌನ್ ಇರುವ ಕಾರಣ ಮುಂದಿನ ಆದೇಶದವರೆಗು ಜಿಲ್ಲೆಯಲ್ಲಿ ವಾಸ್ತವ್ಯ ಸೌಲಭ್ಯ ಹೊಂದಿರುವ ಎಲ್ಲಾ ರೀತಿಯ ಐಷರಾಮಿ ಹೋಟೆಲ್, ಹೋಟೆಲ್ ಕಂ ಲಾಡ್ಜ್, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಪ್ರವಾಸಿಗರು ತಂಗುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಹೋಂ-ಸ್ಟೇ/ರೆಸಾರ್ಟ್ಗಳಲ್ಲಿ ಪ್ರವಾಸಿಗರಿಗೆ ವಾಸ್ತವ್ಯ ನೀಡುತ್ತಿರುವುದು ಕಂಡು ಬರುತ್ತಿದ್ದು, ಆಯಾ ತಾಲ್ಲೂಕುಗಳಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಒಳಗೊಂಡ ಕಾರ್ಯಪಡೆ ಈಗಾಗಲೇ ರಚಿಸಲಾಗಿದ್ದು, ಈ ಕಾರ್ಯಪಡೆ ಎಲ್ಲಾ ಹೋಂ-ಸ್ಟೇ ರೆಸಾರ್ಟ್ಗಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಲಾಕ್ಡೌನ್ ಉಲಂಘಿಸಿ ಜಿಲ್ಲೆಯನ್ನು ಪ್ರವೇಶಿಸುವ ಪ್ರವಾಸಿಗರ ಮೇಲೆ ನೀಗಾ ವಹಿಸಲಾಗಿದ್ದು ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗಿವುದು ಎಂದು ಅವರು ತಿಳಿಸಿದರು.
ಈಗಾಗಲೇ 2 ಹೋಂ-ಸ್ಟೇಗಳ ಮೇಲೆ ದಾಳಿ ನಡೆಸಿ ಪರವಾನಿಗೆಯನ್ನು ರದ್ದುಗೊಳಿಸಲು ಕ್ರಮವಹಿಸಲಾಗಿದೆ. ಜಿಲ್ಲೆಯ ಗಡಿಭಾಗದಲ್ಲಿನ ಚೆಕ್ ಪೋಸ್ಟ್ಗಳಲ್ಲಿ ಪ್ರವಾಸಿಗರ ವಾಹನಗಳು ಜಿಲ್ಲೆಯಲ್ಲಿ ಪ್ರವೇಶಿಸದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.