ಹಾಸನ ಅ.04 :- ಕೋವಿಡ್ ಲಸಿಕಾ ಗುರಿಯನ್ನು ಹೆಚ್ಚಿಸುವುದರಿಂದ ಜಿಲ್ಲೆಯಲ್ಲಿ ಮೂರನೇ ಅಲೆಯು ಹರಡದಂತೆ ಕ್ರಮವಹಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೋವಿಡ್-19 ಲಸಿಕೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯು ಹೆಚ್ಚಿನದಾಗಿ ಲಭ್ಯತೆಯಿದ್ದು ಶೇಕಡ ನೂರರಷ್ಟು ನಿರ್ದಿಷ್ಟ ಗುರಿಯನ್ನು ಹೆಚ್ಚಿಸುವಂತೆ ತಿಳಿಸಿದರು.
ಲಸಿಕೆ ನೀಡಿರುವ ಅಂಕಿ ಅಂಶಗಳನ್ನು ಪೋರ್ಟಲ್ ಮೂಲಕ ಸರಿಯಾಗಿ ದಾಖಲಿಸುವಂತೆ ಸೂಚಿಸಿದರಲ್ಲದೆ ಯಾವುದೇ ರೀತಿಯಾಗಿ ಲಸಿಕೆ ನೀಡಿರುವ ಅಂಕಿ ಅಂಶಗಳು ವ್ಯತ್ಯಾಸ ಹಾಗೂ ಬಾಕಿ ಉಳಿಯದಂತೆ ಮಾಹಿತಿಯನ್ನು ಕ್ರೂಢೀಕರಿಸಿ ದಾಖಲಿಸುವಂತೆ ತಿಳಿಸಿದರು.
ಕೋವಿಡ್ ಲಸಿಕೆ ಪಡೆಯದ ಜನರಿಗೆ ಕೋವಿಡ್ ಕುರಿತು ಜಾಗೃತಿ ಅರಿವು ಮೂಡಿಸಿ ಲಸಿಕೆ ನೀಡುವಂತೆ ತಿಳಿಸಿದರಲ್ಲದೆ ಆರ್. ಟಿ.ಪಿ.ಸಿ.ಆರ್ ಮತ್ತು ರ್ಯಾಟ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಸೂಚಿಸಿದರು.
ಪ್ರತಿ ಗ್ರಾಮಗಳಲ್ಲಿಯೂ ಶೇಕಡ ನೂರರಷ್ಟು ಲಸಿಕೆಯನ್ನು ನೀಡಬೇಕು ಎಂದರಲ್ಲದೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಪಡೆದು ಮನೆಮನೆಗೆ ತೆರಳಿ ಲಸಿಕೆ ನೀಡುವಂತೆ ಸೂಚಿಸಿದರು.
ತಾಲ್ಲೂಕು ವೈದ್ಯಾಧೀಕಾರಿಗಳು ಹಾಗೂ ಪಿ.ಹೆಚ್.ಸಿ, ಪಿ.ಡಿ.ಒ ಗಳು ಸಭೆಗಳನ್ನು ನಡೆಸಿ ಕೋವಿಡ್ ಲಸಿಕೆ ನೀಡಲು ಸೂಕ್ತ ಗಮನಹರಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾಕ್ಟರ್ ಸತೀಶ್ ಅವರು ಮಾತನಾಡಿ ಹೋಮ್ ಐಸೋಲೇಶನ್ ನಲ್ಲಿರುವವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಕಳುಹಿಸಬೇಕು ಹಾಗೂ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಬೇಕು, ಶಾಲಾ ಕಾಲೇಜುಗಳಲ್ಲಿ ಅದರಲ್ಲೂ ನರ್ಸಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಹಾಗೂ ಪಾಸಿಟಿವ್ ಬಂದಿರುವ ಪ್ರಕರಣಗಳು ದಾಖಲಾಗುತ್ತಿಲ್ಲ ಇದರ ಬಗ್ಗೆ ಸೂಕ್ತ ಗಮನ ಹರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಆರ್.ಸಿ. ಹೆಚ್ ಅಧಿಕಾರಿ ಕಾಂತರಾಜ್, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ. ವಿಜಯ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ನಾಗೇಶ್ ಆರಾಧ್ಯ ಹಾಗೂ ಮತ್ತಿತರ ವೈದ್ಯಾಧಿಕಾರಿಗಳು ಇದ್ದರು.