ಉಡುಪಿ, ಅಕ್ಟೋಬರ್ 16: ಕರ್ನಾಟಕ ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ ಶೆಟ್ಟಿ ಅವರು ಇಂದು ಜಿಲ್ಲೆಯ ಕೋವಿಡ್ ಲಸಿಕಾ ಕೇಂದ್ರಗಳು, ಶಾಲೆಗಳು ಮತ್ತು ಮಹಿಳಾ ರಾಜ್ಯ ನಿಲಯ, ಸಖಿ ಒನ್ ಸಾಟ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸಿದರು.
ಉಡುಪಿ ಕೆ.ಎಂ. ಮಾರ್ಗದಲ್ಲಿನ ಹಳೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ನ್ಯಾಯಮೂರ್ತಿಗಳು ,ಇದುವರೆಗೆ ಈ ಕೇಂದ್ರದಲ್ಲಿ ಪ್ರಥಮ ಡೋಸ್ ಲಸಿಕೆ ಪಡೆದಿರುವ ಸಂಖ್ಯೆ ಮತ್ತು ಎರಡನೇ ಡೋಸ್ ಪಡೆಯಲು ಬಾಕಿ ಇರುವವರ ಸಂಖ್ಯೆ ಕುರಿತು ಮಾಹಿತಿ ಪಡೆದು, 2 ನೇ ಡೋಸ್ ಪಡೆಯಲು ಬಾಕಿ ಇರುವ ಎಲ್ಲರಿಗೂ ತಪ್ಪದೇ ಲಸಿಕೆ ನೀಡಿ,ಅವರಿಗೆ ಎರಡನೇ ಡೋಸ್ ಪಡೆಯುವ ಬಗ್ಗೆ ಮಾಹಿತಿ ನೀಡಿ, ಕೇಂದ್ರಕ್ಕೆ ಬಂದು ಲಸಿಕೆ ಪಡೆಯಲು ಕ್ರಮ ಕೈಗೊಳ್ಳಿ , ಅರ್ಹ ಎಲ್ಲಾ ನಾಗರೀಕರು 2 ಡೋಸ್ ಲಸಿಕೆ ಪಡೆಯುವುದರಿಂದ ಕೋವಿಡ್ ನಿಂದ ಸಂಪೂರ್ಣ ಸುರಕ್ಷೆ ಪಡೆಯಲು ಸಾಧ್ಯವಾಗಲಿದೆ ಎಂದರು.
ಉಡುಪಿಯ ಬೋರ್ಡ್ ಸ್ಕೂಲ್ ಗೆ ಭೇಟಿ ನೀಡಿದ ನ್ಯಾಯಮೂರ್ತಿಗಳು ತಾವು ಇದೇ ಶಾಲೆಯಲ್ಲಿ ಕಲಿತ ದಿನಗಳನ್ನು,ತಮ್ಮ ಸ್ನೇಹಿತರನ್ನು ಮತ್ತು ಅಧ್ಯಾಪಕರನ್ನು ನೆನಪು ಮಾಡಿಕೊಂಡರು ,ಈ ಶಾಲೆಯಲ್ಲಿ ಕಲಿತ ಹಲವು ಮಂದಿ ಉನ್ನತ ಹುದ್ದೆಗೇರಿದ್ದು, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.
ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿ,ಅಲ್ಲಿನ ಸ್ವಚ್ಚತೆ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು, ಇಲ್ಲಿನ ಮಹಿಳೆಯರು ಸಿದ್ದಪಡಿಸುವ ಉತ್ನನ್ನಗಳಿಗೆ ಮಾರುಕಟ್ಟೆಯಲ್ಲಿನ ದರ ನೀಡುವ ಬಗ್ಗೆ ಸಂಬ0ದಪಟ್ಟವರಿಗೆ ಸೂಚನೆ ನೀಡುವಂತೆ ತಿಳಿಸಿದ ಅವರು, ಮಹಿಳೆಯರಿಗೆ ಎಂಬ್ರಾಯಡರಿ ಸೇರಿದಂತೆ ಮತ್ತಿತರ ಕೌಶಲಯುಕ್ತ ತರಬೇತಿ ನೀಡಿ ,ಅವರು ಹೆಚ್ಚಿನ ಆರ್ಥಿಕ ಲಾಭ ಪಡೆಯುವಂತೆ ನೋಡಿಕೊಳ್ಳಿ ಎಂದರು . ಸಖಿ ಒನ್ ಸ್ಟಾಪ್ ಸೆಂಟರ್ ಪರಿಶೀಲನೆ ನಡೆಸಿದರು.
ಹನುಮಂತನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್,ಡಿಹೆಚ್ಓ ಡಾ.ನಾಗಭೂಷಣ ಉಡುಪ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ, ಡಿಡಿಪಿಐ ನಾಗೂರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.