ಭಾಗಮಂಡಲ, ತಲಕಾವೇರಿ ಹಾಗೂ ಪಾಡಿ ಇಗ್ಗುತಪ್ಪ ದೇವಾಲಯ ಪುಣ್ಯ ಕ್ಷೇತ್ರ ‘ದೇವಸ್ಥಾನ ಪಟ್ಟಣ’ ಎಲ್ಲರ ಅಭಿಪ್ರಾಯ ಪಡೆದು ಅಗತ್ಯ ಕ್ರಮ: ಡಾ.ಬಿ.ಸಿ.ಸತೀಶ

0
83

ಮಡಿಕೇರಿ ಜ.05 :-ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ಪಾಡಿ ಇಗ್ಗುತಪ್ಪ ಪುಣ್ಯ ಕ್ಷೇತ್ರಗಳನ್ನು ‘ದೇವಸ್ಥಾನ ಪಟ್ಟಣ’ ಅಥವಾ ‘ತೀರ್ಥ ಕ್ಷೇತ್ರ’ವೆಂದು ಪರಿಗಣಿಸಲು ವಿವಿಧ ಸಂಘ ಸಂಸ್ಥೆಗಳು ಕೋರಿಕೆ ಸಲ್ಲಿಸಿರುವ ಮನವಿ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಿಂದ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಭಾಗಮಂಡಲ, ತಲಕಾವೇರಿ, ಪಾಡಿ ಇಗ್ಗುತ್ತಪ್ಪ ಪವಿತ್ರ ಕ್ಷೇತ್ರಗಳನ್ನು ದೇವಸ್ಥಾನ ಪಟ್ಟಣ ಅಥವಾ ತೀರ್ಥ ಕ್ಷೇತ್ರವೆಂದು ಪರಿಗಣಿಸುವಲ್ಲಿ ಮತ್ತೊಂದು ಸಭೆ ಆಹ್ವಾನಿಸಲಾಗುವುದು, ಭಾಗಮಂಡಲ ಗ್ರಾ.ಪಂ.ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುವುದು. ಹಾಗೆಯೇ ಸ್ಥಳೀಯ ಎಲ್ಲಾ ಹಂತದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದರು.
ಮೊದಲ ಹಂತದಲ್ಲಿ ಸ್ಥಳೀಯರ ವಿಶ್ವಾಸ ಪಡೆಯುವುದು, ವಸ್ತ್ರ ಸಂಹಿತೆ ಜಾರಿಗೊಳಿಸುವುದು, ಭದ್ರತೆ ಹೆಚ್ಚಿಸಬೇಕಿದೆ. ಜೊತೆಗೆ ಮದ್ಯ ಮಾರಾಟ ಮಳಿಗೆ ಸ್ಥಳಾಂತರ ಬಗ್ಗೆ ನಿಯಮಾನುಸಾರ ಕ್ರಮವಹಿಸಲಾಗುವುದು. ದೇವಸ್ಥಾನ ನಗರ ಅಥವಾ ತೀರ್ಥ ಕ್ಷೇತ್ರವೆಂದು ಪರಿಗಣಿಸುವಲ್ಲಿ ಎಲ್ಲರ ಅಭಿಪ್ರಾಯ ಪಡೆದು ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಸಭೆಯ ಆರಂಭದಲ್ಲಿ ಮಾತನಾಡಿದ ಪ್ರಮುಖರಾದ ಎಂ.ಬಿ.ದೇವಯ್ಯ ಅವರು ಭಾಗಮಂಡಲ, ತಲಕಾವೇರಿ, ಇಗ್ಗುತ್ತಪ್ಪ, ಓಂಕಾರೇಶ್ವರ ಹಾಗೂ ಇರ್ಪು ರಾಮೇಶ್ವರ ದೇವಾಲಯ ಪ್ರದೇಶವನ್ನು ದೇವಸ್ಥಾನ ನಗರಿ ಅಥವಾ ತೀರ್ಥಕ್ಷೇತ್ರವೆಂದು ಪರಿಗಣಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು.
ಪವಿತ್ರ ಕ್ಷೇತ್ರದಲ್ಲಿ ಅಪವಿತ್ರ ನಡೆಯುತ್ತಿದ್ದು, ಪವಿತ್ರ ಕ್ಷೇತ್ರಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ಗಂಗೆಯಷ್ಟೆ ಪವಿತ್ರ ಕಾವೇರಿ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಉಳ್ಳಿಯಡ ಎಂ.ಪೂವಯ್ಯ ಅವರು ಮಾತನಾಡಿ ತಲಕಾವೇರಿ ಭಾಗಮಂಡಲದಲ್ಲಿ ಮದ್ಯ, ಮಾಂಸದ ಅಂಗಡಿ ತೆರೆದು ಅಶುಚಿತ್ವ ಉಂಟಾಗಿದೆ. ಇದರಿಂದ ಭಕ್ತಾಧಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಆದ್ದರಿಂದ ದೇವಾಲಯಗಳ/ ತೀರ್ಥಕ್ಷೇತ್ರದ ಊರು, ಪಟ್ಟಣವೆಂದು ಪ್ರಕಟಿಸಲು ಅಗತ್ಯ ಕ್ರಮವಹಿಸಬೇಕು ಅವರು ಮನವಿ ಮಾಡಿದರು.
ರವಿ ಚಂಗಪ್ಪ ಅವರು ಮಾತನಾಡಿ ಭಾಗಮಂಡಲ, ತಲಕಾವೇರಿ, ತಣ್ಣಿಮಾನಿ, ಚೇರಂಗಾಲ, ಕೋರಂಗಾಲ ಸೇರಿದಂತೆ ಸುಮಾರು 800 ಎಕರೆ ಭೂಮಿ ತಲಕಾವೇರಿ ವ್ಯಾಪ್ತಿಗೆ ಬರುತ್ತದೆ ಎಂದರು.
ಚೆಯ್ಯಂಡ ಸತ್ಯ ಅವರು ಮಾತನಾಡಿ ಮೂಲ ನಿವಾಸಿಗಳಿಗೆ ಯಾವುದೇ ರೀತಿ ಧಕ್ಕೆಯಾಗಬಾರದು. ಭಾಗಮಂಡಲದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿ, ಭಾಗಮಂಡಲದಿಂದ ತಲಕಾವೇರಿಗೆ ಸರ್ಕಾರಿ ಬಸ್‍ನಲ್ಲಿ ಹೋಗಿ-ಬರಲು ವ್ಯವಸ್ಥೆ ಮಾಡಬೇಕು. ಜೊತೆಗೆ ತಲಕಾವೇರಿಯಲ್ಲಿ ಪೂಜಾ ಸಮಯವನ್ನು ನಿಗಧಿ ಮಾಡಬೇಕು. ಪ್ಲಾಸ್ಟಿಕ್ ನಿಷೇಧ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.
ಹೋಟೆಲ್ ಅಸೋಷಿಯೇಷನ್‍ನ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಅದೇ ರೀತಿ ಧಾರ್ಮಿಕ ಕ್ಷೇತ್ರಗಳನ್ನು ಧಾರ್ಮಿಕ ಕ್ಷೇತ್ರಗಳನ್ನಾಗಿಯೇ ಉಳಿಸಬೇಕು ಎಂದು ಅವರು ತಿಳಿಸಿದರು.
ತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿಯ ಮಾಜಿ ಕಾರ್ಯದರ್ಶಿ ಜಿ.ರಾಜೇಂದ್ರ ಅವರು ಮಾತನಾಡಿ ಭಾಗಮಂಡಲ, ತಲಕಾವೇರಿ ದೇವಾಲಯ ವ್ಯವಸ್ಥಾಪನಾ ನೂತನ ಸಮಿತಿ ಅಸ್ತಿತ್ವ ಬರಬೇಕು ಎಂದು ಒತ್ತಾಯಿಸಿದರು.
ಅಲ್ಲಿನ ಆಡಳಿತಾಧಿಕಾರಿ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ದೇವಾಲಯ ವ್ಯವಸ್ಥಾಪನ ಸಮಿತಿ ಇದ್ದರೆ ಇನ್ನಷ್ಟು ಕೆಲಸ ಮಾಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಲಕಾವೇರಿ, ಭಾಗಮಂಡಲ ಮತ್ತು ಪಾಡಿ ಇಗ್ಗುತ್ತಪ್ಪ ದೇವಾಲಯಗಳಲ್ಲಿ ಭದ್ರತೆ ಹೆಚ್ಚಿಸಬೇಕು. ಜೀವ ನದಿ ಕಾವೇರಿ ಮಾತೆ ಬೆಂಗಳೂರು ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ನೀರು ಒದಗಿಸುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
‘ತಲಕಾವೇರಿ-ಭಾಗಮಂಡಲ ದೇವಾಲಯದಲ್ಲಿ ಭಕ್ತಾಧಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಹಾಗೂ ಭಕ್ತಾಧಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ‘ಜಿಲ್ಲಾ ಮಟ್ಟದ ಸಮಿತಿ ರಚನೆ’ಯಾಗಬೇಕು. ತಪಸ್ಸಿನಂತೆ ಕೆಲಸ ಮಾಡುವವರನ್ನು ಸಮಿತಿಗೆ ಸೇರ್ಪಡೆ ಮಾಡಬೇಕು ಎಂದು ಜಿ.ರಾಜೇಂದ್ರ ಅವರು ಸಲಹೆ ಮಾಡಿದರು.
ರತನ್ ತಮ್ಮಯ್ಯ ಅವರು ಮಾತನಾಡಿ ತಲಕಾವೇರಿ-ಭಾಗಮಂಡಲ ‘ಟೆಂಪಲ್ ಸಿಟಿ’ ಆದಲ್ಲಿ ಮಾತ್ರ ಅಲ್ಲಿ ಶಾಂತಿ ನೆಮ್ಮದಿಗೆ ಸಹಕಾರಿಯಾಗಲಿದೆ. ಆದ್ದರಿಂದ ಪ್ರವಾಸಿ ಸ್ಥಳದಿಂದ ಈ ಕ್ಷೇತ್ರಗಳನ್ನು ತೆಗೆಯಬೇಕು ಎಂದರು.
ಮಂಜು ಚಿನ್ನಪ್ಪ ಅವರು ಮಾತನಾಡಿ ಭಕ್ತರ ಭಾವನೆಗೆ ಬೆಲೆ ಕೊಡಬೇಕು. ಪವಿತ್ರ ಕ್ಷೇತ್ರವನ್ನು ಉಳಿಸಬೇಕು. ಕೊಡಗಿನ ಜನರು ಗುರುತಿಸಿಕೊಳ್ಳುವುದೇ ಕಾವೇರಿ ನದಿ ಹುಟ್ಟುವ ಸ್ಥಳದಿಂದ ಬಂದಿದ್ದೇವೆಂದು. ಆದ್ದರಿಂದ ಸ್ಥಳೀಯರ ಭಾವನೆಯನ್ನು ಪರಿಗಣಿಸಬೇಕು ಎಂದು ಅವರು ಸಲಹೆ ಮಾಡಿದರು.
ಪವನ್ ಪೆಮ್ಮಯ್ಯ ಅವರು ಮಾತನಾಡಿ ದೇವಸ್ಥಾನ ನಗರ ಅಥವಾ ತೀರ್ಥಕ್ಷೇತ್ರವೆಂದು ಪರಿಗಣಿಸುವ ನಿಟ್ಟಿನಲ್ಲಿ ಸ್ಥಳೀಯರ ವಿಶ್ವಾಸ ಪಡೆಯಬೇಕು. ಪ್ರವಾಸಿಗರಿಗೆ ಮಾಂದಲ್ ಪಟ್ಟಿಯೂ ಒಂದೇ, ಪುಣ್ಯಕ್ಷೇತ್ರ ತಲಕಾವೇರಿಯೂ ಒಂದೇ ಎಂಬ ಭಾವನೆ ಇದೆ. ಆದ್ದರಿಂದ ಈ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಬೇಕು ಎಂದು ಅವರು ನುಡಿದರು.
ಡಾಟಿ ಪೂವಯ್ಯ ಅವರು ಮಾತನಾಡಿ ಕಾವೇರಿ ಮಾತೆಯೂ ಪ್ರಾಕೃತಿಕ ಮಾತೆಯಾಗಿದ್ದು, ಕೊಡಗಿನ ಜನರ ಕುಲದೇವಿಯಾಗಿದ್ದಾಳೆ. ಭಾಗಮಂಡಲದಲ್ಲಿ ಕೋಳಿ ಮತ್ತು ಸರಾಯಿ ಅಂಗಡಿ ಇದ್ದು, ನೋಡಲು ಅಸಹ್ಯವಾಗುತ್ತದೆ. ಆದ್ದರಿಂದ ದೇವಾಲಯ ಪಟ್ಟಣವೆಂದು ಪ್ರಕಟಿಸಬೇಕು. ಯಾರ ಹೊಟ್ಟೆಯನ್ನು ಒಡೆಯುವುದು ಬೇಡ. ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಸಲಹೆ ಮಾಡಿದರು.
ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಅವರು ಮಾತನಾಡಿ ಕೊಡಗಿನ ಜನರಿಗೆ ತಲಕಾವೇರಿ ದೇವಾಲಯ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ಇಲ್ಲಿ ಅಪವಿತ್ರವಾದರೆ ನೋವಾಗುತ್ತದೆ. ಆದ್ದರಿಂದ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು. ಪ್ರವಾಸಿ ತಾಣದಿಂದ ತಕ್ಷಣ ತೆಗೆಯಬೇಕು ಎಂದು ಅವರು ಒತ್ತಾಯಿಸಿದರು.
ಭಾಗಮಂಡಲ-ತಲಕಾವೇರಿ ದೇವಾಲಯವನ್ನು ದೇವಸ್ಥಾನ ಪಟ್ಟಣವೆಂದು ಪರಿಗಣಿಸಲು ಕೆಲವರ ವಿರೋಧ ಇರಬಹುದು. ಆದರೆ ಅಲ್ಲಿನ ಸ್ಥಳೀಯರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಭಕ್ತಾಧಿಗಳ ಭಾವನೆ ಗೌರವಿಸಬೇಕು ಎಂದರು.
ರಾಜು ಬೋಪಯ್ಯ ಅವರು ಮಾತನಾಡಿ ಕಾವೇರಿ ಕ್ಷೇತ್ರದಲ್ಲಿ ಎಲ್ಲವೂ ಸರಿಯಾಗಿದ್ದರೆ, ಕೊಡಗು ಸಮೃದ್ಧವಾಗಿರುತ್ತದೆ. ಆದ್ದರಿಂದ ಟೆಂಪಲ್ ಟೌನ್ ಎಂದು ಆಗಲೇಬೇಕು ಎಂದರು.
ಮಾಚಿಮಾಡ ರವೀಂದ್ರ ಅವರು ಮಾತನಾಡಿ ತಲಕಾವೇರಿ-ಭಾಗಮಂಡಲ ಪುಣ್ಯ ಕ್ಷೇತ್ರವು ಹುಟ್ಟಿನಿಂದ ಸಾವಿನವರೆಗೆ ಭಾವನಾತ್ಮಕ ಸಂಬಂಧವಿದೆ. ಆದ್ದರಿಂದ ಕೆಲವು ಕಟ್ಟುಪಾಡುಗಳನ್ನು ಜಾರಿ ಮಾಡಬೇಕು. ಸ್ಥಳೀಯರ ಭಾವನೆ ಪರಿಗಣಿಸಬೇಕು ಎಂದರು.
ಮಾದೇಟ್ಟಿರ ಬೆಳ್ಯಪ್ಪ ಅವರು ಮಾತನಾಡಿ ತಲಕಾವೇರಿ-ಭಾಗಮಂಡಲ ವಿಷಯ ಬಂದಾಗ ವಿವಾದಗಳು ಸೃಷ್ಟಿಯಾಗುತ್ತವೆ. ಇದನ್ನು ತಪ್ಪಿಸಬೇಕು. ಸಂಕುಚಿತ ಮನೋಭಾವದಿಂದ ಹೊರಬಂದು ಸಮನ್ವಯತೆ ಸಾಧಿಸಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು,. ತಲಕಾವೇರಿ ಭಾಗಮಂಡಲ ವಿವಾದಾತ್ಮಕ ಕ್ಷೇತ್ರವಾಗಬಾರದು ಎಂದು ಅವರು ಕೋರಿದರು.
ಸೋಮಯ್ಯ ಅವರು ಮಾತನಾಡಿ ಭಾಗಮಂಡಲದಿಂದ ತಲಕಾವೇರಿ ವರೆಗೆ ರಸ್ತೆ ಬದಿ ಇರುವ ಹೋಂ ಮೇಡ್ ವೈನ್ ಮಾರಾಟ ಮಳಿಗೆಯನ್ನು ಸ್ಥಗಿತಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಸುನಿಲ್ ಅವರು ಮಾತನಾಡಿ ಅಂತರ್ಜಾಲದಲ್ಲಿ ತಲಕಾವೇರಿ ಭಾಗಮಂಡಲ ಪ್ರವಾಸಿ ಕ್ಷೇತ್ರವೆಂದು ಇದ್ದು, ಕೂಡಲೇ ಬದಲಿಸಬೇಕು ಎಂದರು.
ಮೋಂತಿ ಗಣೇಶ್ ಅವರು ಮಾತನಾಡಿ ತಲಕಾವೇರಿ ಭಾಗಮಂಡಲ ಸಂಬಂಧಿಸಿದಂತೆ ದೇವಸ್ಥಾನ ಪಟ್ಟಣ ಆಗುವ ತನಕ ಮದ್ಯ ಅಂಗಡಿಗಳನ್ನು ಮುಚ್ಚಿಸಬೇಕು. ಪ್ರವಾಸಿಗರು ಅಡುಗೆ ಮಾಡುವುದನ್ನು ನಿಲ್ಲಿಸಬೇಕು. ವಸ್ತ್ರ ಸಂಹಿತೆ ಪಾಲಿಸಬೇಕು ಎಂದರು.
ಹರೀಶ್ ಮಾದಪ್ಪ ಅವರು ಮಾತನಾಡಿ ಭಾಗಮಂಡಲದಲ್ಲಿ ತಲಕಾವೇರಿಗೆ ತೆರಳುವ ಸಂದರ್ಭದಲ್ಲಿ ವಾಹನ ಶುಲ್ಕ ಪಡೆಯುತ್ತಿದ್ದಾರೆ. ಭಕ್ತಾಧಿಗಳಿಂದ ಯಾವುದೇ ಕಾರಣಕ್ಕೂ ವಾಹನ ಶುಲ್ಕ ಪಡೆಯಬಾರದು. ಪ್ರವಾಸಿಗರಿಂದ ಪಡೆಯಲಿ ಎಂದು ಅವರು ಹೇಳಿದರು.
ಭಕ್ತರೊಬ್ಬರು ಭಾಗಮಂಡಲ ತಲಕಾವೇರಿಯಲ್ಲಿ ಸೂಚನಾ ಫಲಕವನ್ನು ಅಳವಡಿಸಬೇಕು. ಸಮರ್ಪಕ ಮಾಹಿತಿ ನೀಡುವವರನ್ನು ನಿಯೋಜಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಪೊಲೀಸ್ ಇನ್ಸ್‍ಪೆಕ್ಟರ್ ವೆಂಕಟೇಶ್, ಭಾಗಮಂಡಲ-ತಲಕಾವೇರಿ ದೇವಾಲಯದ ಇಒ ಕೃಷ್ಣಪ್ಪ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here