ಜಿಲ್ಲೆಯಾದ್ಯಂತ ಮಾಸ್ಕ್ ಕಾರ್ಯಾಚರಣೆ ಮಾಸ್ಕ್ ಧರಿಸದಿದ್ರೇ ದಂಡ:ಬಳ್ಳಾರಿಯಲ್ಲಿ ಮುಂದುವರಿದ ಕಾರ್ಯಾಚರಣೆ:ಸ್ವತಃ ಫಿಲ್ಡಿಗಿಳಿದ ಎಸ್ಪಿ ಅಡಾವತ್,ಆಯುಕ್ತೆ ಗೆಹ್ಲೋಟ್!

0
173

ಬಳ್ಳಾರಿ, ಏ.18 : ಬಳ್ಳಾರಿಯಲ್ಲಿ ಮಾಸ್ಕ್ ಧರಿಸದಿದ್ರೇ ದಂಡ ಪ್ರಯೋಗದ ಕಾರ್ಯಾಚರಣೆ ಅತ್ಯಂತ ಪರಿಣಾಮಕಾರಿ ಭಾನುವಾರವೂ ಮುಂದುವರಿದಿದೆ. ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿಗೊಡಗೂಡಿ ಸ್ವತಃ ಫಿಲ್ಡಿಗಿಳಿದರು.
ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆ ಮಾರ್ಗ,ತೇರು ಬೀದಿ,ಜೈನ್ ಮಾರುಕಟ್ಟೆ, ಮೋತಿ ಸರ್ಕಲ್ ಸೇರಿದಂತೆ ವಿವಿಧೆಡೆ ಸುತ್ತಾಡಿ ಮಾಸ್ಕ್ ಧರಿಸದ ಜನರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಸ್ಥಳದಲ್ಲಿಯೇ ಅನೇಕರಿಗೆ ದಂಡ ವಿಧಿಸಿದರು. ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಆಧಾರದ ಮೇರೆಗೆ ಕೆಲ ಅಂಗಡಿಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ಕೂಡ ಇದೇ ಸಂದರ್ಭದಲ್ಲಿ ಜಾರಿ ಮಾಡಿದರು.
ಕೆಲ ನಿರ್ಗತಿಕರಿಗೆ ಇದೇ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್ ಅವರು ಮಾಸ್ಕ್ ಗಳನ್ನು ನೀಡಿ,ಇನ್ಮುಂದೆ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದರು.
ಎಸ್ಪಿ ಸೈದುಲು ಅಡಾವತ್ ಅವರು ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ದೃಷ್ಟಿಯಿಂದ ಮಾರ್ಕಿಂಗ್ ಮಾಡಬೇಕು. ಮಾಸ್ಕ್ ಧರಿಸದವರನ್ನು ಯಾವುದೇ ಕಾರಣಕ್ಕೂ ಅಂಗಡಿಗಳ ಒಳಗಡೆ ಬಿಟ್ಟುಕೊಳ್ಳಬಾರದು, ಅಂಗಡಿಗಳಲ್ಲಿ ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್ ಕಡ್ಡಾಯವಾಗಿರಬೇಕು ಮತ್ತು ಗ್ರಾಹಕರಿಗೆ ತಪಾಸಣೆ ಮಾಡಿಯೇ ಒಳಬಿಡಬೇಕು. ಸಾಮಾಜಿಕ ಅಂತರ ಪಾಲಿಸಬೇಕು; ಇದು ಎಲ್ಲರ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಒಂದು ವೇಳೆ ಉಲ್ಲಂಘಿಸಿದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು ಮತ್ತು ಎಫ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಕೋವಿಡ್ ನಿಯಮ‌ ಉಲ್ಲಂಘಿಸುವ ಅಂಗಡಿಗಳಿಗೆ ನಾನ್ ಎಸಿ ಅಂಗಡಿಗಳಿಗೆ 5ಸಾವಿರ ದಂಡ, ಎಸಿ ಸೌಲಭ್ಯವಿರುವ ಅಂಗಡಿಗಳಿಗೆ 10 ಸಾವಿರ ಮತ್ತು ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.
ಮಲಬಾರ್ ಗೋಲ್ಡ್ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ ಸೈದುಲು ಅಡಾವತ್ ಹಾಗೂ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದಿರುವುದಕ್ಕೆ ಮಳಿಗೆಯಲ್ಲಿನ ವ್ಯವಸ್ಥಾಪಕರಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು;ಅಲ್ಲಿಗೆ ಬಂದಿದ್ದ ಗ್ರಾಹಕರಿಗೂ ಕೋವಿಡ್ ಬಿಸಿ ಮುಟ್ಟಿಸಿದರು. ದಂಡ ವಿಧಿಸಲು ಪೊಲೀಸ್ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿಗೆ ಸೂಚಿಸಿದರು.
ನಂತರ ಅದೇ ರಸ್ತೆ್ಯಯಲ್ಲಿ ಯಾವುದೇ ರೀತಿಯ ಅನುಮತಿ ಪಡೆದುಕೊಳ್ಳದೇ ನಡೆಸುತ್ತಿದ್ದ ಸ್ನೂಕರ್ ಶಾಪ್ ಗೆ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ ಮತ್ತು ಪಾಲಿಕೆ ಆಯುಕ್ತರು ಅನುಮತಿ ಪಡೆಯದಿರುವುದನ್ನು ಖಚಿತಪಡಿಸಿಕೊಂಡು ಅಂಗಡಿಯನ್ನು ಸೀಜ್ ಮಾಡಿ ಕ್ಲೋಸ್ ಮಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಸೊಂಕಿನ ಪ್ರಮಾಣ ದಿನೇದಿನೇ‌ ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಪಾಲನೆ ಹಾಗೂ ಸ್ಯಾನಿಟೈಸರ್ ಬಳಕೆ ಅತ್ಯಂತ ಅನಿವಾರ್ಯವಾಗಿದೆ. ಜನರು ಇದರ ಗಂಭೀರತೆಯನ್ನು ಅರಿತುಕೊಳ್ಳಬೇಕು ಎಂದು ಎಸ್ಪಿ‌ ಸೈದುಲು ಅಡಾವತ್ ಅವರು ಹೇಳಿದರು.
ನಗರ ಪ್ರದೇಶದಲ್ಲಿ ಮಾಸ್ಕ್ ಧರಿಸಿದೇ ಓಡಾಡುತ್ತಿದ್ದಲ್ಲಿ 250 ರೂ. ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 100 ರೂ. ದಂಡ ವಿಧಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದಿರುವುದಕ್ಕೆ ದಂಡ ವಿಧಿಸುವ ಕಾರ್ಯಾಚರಣೆ ಶುರು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರಮೇಶ,ಪೊಲೀಸ್ ಅಧಿಕಾರಿಗಳಾದ ನಾಗರಾಜ ಲ,ಹಾಲೇಶ ಹಾಗೂ ಪೊಲೀಸ್ ಸಿಬ್ಬಂದಿ, ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here