ಬಳ್ಳಾರಿ,ಫೆ.16: ಆಯುಶ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸಾರ್ವಜನಿಕ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಅವರು ಹೇಳಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಆರೋಗ್ಯ ವಸ್ತು ಪ್ರದರ್ಶನ ಉದ್ದೇಶಿಸಿ ಅವರು ಮಾತನಾಡಿದರು.
ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ವಾರ್ಷಿಕ 5 ಲಕ್ಷಗಳ ವರೆಗೆ ಮತ್ತು ಎಪಿಎಲ್ ಕಾರ್ಡ ಹೊಂದಿದ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷಗಳವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ ಎಂದು ತಿಳಿಸಿದರು.
ಇದರ ಜೊತೆಗೆ ಈ-ಸಂಜೀವಿನಿ ಯೋಜನೆಯಡಿಯಲ್ಲಿ ವೈದ್ಯರ ಬಳಿ ತೆರಳಿ ಹಣ ವೆಚ್ಚ ಮಾಡುವ ಬದಲಾಗಿ ತಮ್ಮ ಮನೆಯಿಂದಲೆ ತಜ್ಞ ವೈದ್ಯರ ಸೇವೆಯನ್ನು ಪಡೆಯಲು ಅವಕಾಶವಿದ್ದು ತಮ್ಮ ಆಂಡ್ರಾಯ್ಡ್ ಮೋಬೈಲ್ ಮೂಲಕ ಸದುಪಯೋಗ ಪಡೆಯಲು ಕೊರಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಉಮೇಶಕುಮಾರ ಅವರು
ಆರೋಗ್ಯ ವಸ್ತು ಪ್ರದರ್ಶನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಕೂಲಿ ಕಾರ್ಮಿಕರಿಗೆ ಅವರು ಇರುವ ಸ್ಥಳಗಳಿಗೆ ತೆರಳಿ ವೈದ್ಯಕೀಯ ಸೇವೆ ನೀಡುತ್ತಿರುವುದು ಶ್ಲಾಘನೀಯವಾದದು. ಪ್ರತಿಯೊಬ್ಬರು ಇದರ ಸದುಪಯೋಗ ಪಡೆಯಲು ತಿಳಿಸಿದರು.
ಈ ಸಂದರ್ಭದಲ್ಲಿ ಗುಗ್ಗರಹಟ್ಟಿಯ ವೈದ್ಯಾಧಿಕಾರಿಗಳಾದ ಡಾ.ಗುಪ್ತಾ ಶಾಹೀನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಾಂತಮ್ಮ ಉಪ್ಪಾರ, ರಾಘವ ಶೆಟ್ಟಿ, ಮಹಮ್ಮದ್ ರಫಿ, ಖುರ್ಶಿದಾ ಬೇಗಂ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಉಮಾಮಹೇಶ್ವರಿ, ರಷ್ಮೀ, ಸಿಬ್ಬಂದಿಯವರಾದ ನರಸಿಂಹಮುರ್ತಿ ದೇವರಾಜ್, ಈರಯ್ಯ ಹಿರೇಮಠ, ಹಾಗೂ ಸಿಬ್ಬಂದಿಯವರು ಹಾಜರಿದ್ದರು.
ವಸ್ತು ಪ್ರದರ್ಶನದೊಂದಿಗೆ ಕೊವಿಡ್ ಲಸಿಕೆ, ರಕ್ತದೊತ್ತಡ ಹಾಗೂ ಸಕ್ಕರಕಾಯಿಲೆ ಪರೀಕ್ಷೆ ಸಹ ಕೈಗೊಂಡು ಕ್ಷಯರೋಗ, ಕುಷ್ಠರೋಗ, ಮಾನಸಿಕ ಆರೋಗ್ಯ, ಡೆಂಗ್ಯು – ಚಿಕುನ್ಗುನ್ಯಾ, ಮುಂತಾದವುಗಳ ಬಗ್ಗೆ ಜಾಗೃತಿ ನೀಡಲಾಯಿತು.