ಮಡಿಕೇರಿ ಫೆ.23:-ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಜರುಗಿತು. ವೈದ್ಯಕೀಯ ದಾಖಲಾತಿಗಳ ಕಾನೂನು ಅಂಶಗಳು ವೈದ್ಯಕೀಯ ಅಭ್ಯಾಸಕ್ಕೆ ಸಂಬಂಧಿಸಿದ ಕಾನೂನು ಅಂಶಗಳ ಬಗ್ಗೆ ಸಂಸ್ಥೆಯ ಯುವ ವೈದ್ಯರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ವಿಶಾಲ್ ಕುಮಾರ್ ಅವರು ಕ್ಲಿನಿಕಲ್ ಅಭ್ಯಾಸದಲ್ಲಿ ಕಾನೂನು ಅಂಶಗಳನ್ನು ತಿಳಿದುಕೊಳ್ಳುವ ಮಹತ್ವದ ಬಗ್ಗೆ ತಿಳಿಸಿದರು.
ವೈದ್ಯಕೀಯ ಅಧೀಕ್ಷಕರಾದ ಡಾ.ಮಂಜುನಾಥ್ ಎಸ್. ಅವರು ತಮ್ಮ ಸೇವಾನುಭವದಲ್ಲಿನ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ಮತ್ತು ಕಾನೂನು ತೊಡಕುಗಳು ಒಬ್ಬರ ವೃತ್ತಿಜೀವನದಲ್ಲಿ ಹೇಗೆ ತೊಂದರೆ ಉಂಟುಮಾಡಬಹುದು ಎಂಬುದನ್ನು ಯುವ ವೈದ್ಯರಿಗೆ ಮನದಟ್ಟು ಮಾಡಿದರು.
ಮೈಸೂರು ಜನರಲ್ ಸರ್ಜನ್ ಡಾ|| ಬಿ.ಜಿ.ಪೊನ್ನಪ್ಪ, ಅವರು ವೈದ್ಯಕೀಯ ದಾಖಲಾತಿಗಳ ಪ್ರಾಮುಖ್ಯತೆಯನ್ನು ತಿಳಿಸಿದರು. “ಕಾನೂನು ಎಲ್ಲಾ ಪ್ರಕರಣಗಳಲ್ಲಿ ಪುರಾವೆ ಕೇಳುತ್ತದೆ. ಹಾಗಾಗಿ ನೀವು ನಡೆಸಿರುವ ಪ್ರತಿಯೊಂದು ಚಿಕಿತ್ಸಾ ವಿವರಗಳನ್ನು ಕೇಸ್ ಶೀಟ್ನಲ್ಲಿ ಲಿಖಿತವಾಗಿ ದಾಖಲಿಸಿ” ಎಂದು ತಿಳಿ ಹೇಳಿದರು. ಯುವ ವೈದ್ಯರುಗಳಾಗಿ ಹೊರಬರುತ್ತಿರುವ ಎಲ್ಲಾ ಗೃಹ ವೈದ್ಯರುಗಳಿಗೆ ಸೆಕ್ಷನ್ 340 ‘ಎ’ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಮಣಿ, ಹಿರಿಯ ವಕೀಲರಾದ ಎಂ.ಎ.ನಿರಂಜನ, ಡಿವೈಎಸ್ಪಿ. ಜಿ.ಎಸ್.ಗಜೇಂದ್ರ ಪ್ರಸಾದ್ ಮಾತನಾಡಿದರು. ನ್ಯಾಯಶಾಸ್ತ್ರ ವಿಭಾಗ ಸಂಘಟನಾ ಕಾರ್ಯದರ್ಶಿ, ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರಾದ ಡಾ.ಉಮೇಶ್ ಬಾಬು ಅವರು ಸ್ವಾಗತಿಸಿದರು. ಡಾ. ಪ್ರೇರಣಾ ಪ್ರಾರ್ಥಿಸಿದರು, ಡಾ.ಶ್ವೇತಾ ಅವರು ವಂದಿಸಿದರು.