ಜಿಲ್ಲೆಯಾದ್ಯಂತ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದ ಡಿಸಿ ಮಾಲಪಾಟಿ: ಸಂಡೂರು,ಸಿರಗುಪ್ಪ ತಹಸೀಲ್ದಾರರ ದಿಢೀರ್ ಕಾರ್ಯಾಚರಣೆ,5 ಜನ ನಕಲಿ ವೈದ್ಯರು ವಶಕ್ಕೆ

0
223


ಬಳ್ಳಾರಿ: ಜಿಲ್ಲಾಧಿಕಾರಿಗಳ ಖಡಕ್ ಸೂಚನೆ ಮೇರೆಗೆ ಸಂಡೂರು ತಹಸೀಲ್ದಾರ್ ರಶ್ಮೀ ಹಾಗೂ ಸಿರಗುಪ್ಪ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ವಿವಿಧೆಡೆ ಶನಿವಾರ ದಿಢೀರ್ ಕಾರ್ಯಾಚರಣೆ ನಡೆಸಿ 5 ಜನ ನಕಲಿ ವೈದ್ಯರನ್ನು ಪತ್ತೆಹಚ್ಚಿ,ಅವರು ನಡೆಸುತ್ತಿದ್ದ ಕ್ಲಿನಿಕ್ ಸೀಜ್ ಮಾಡಲಾಗಿದ್ದು, ಈ ನಕಲಿ ವೈದ್ಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂಡೂರು ತಾಲೂಕಿನ ಸೋವೆನಹಳ್ಳಿಯಲ್ಲಿ ಯಾವುದೇ ವಿದ್ಯಾರ್ಹತೆ ಇಲ್ಲದೇ ಕರ್ನೂಲ್ ಮೂಲದ ಎಂ.ಷಣ್ಮಖುಡು ಹಾಗೂ ರಾಮು ಎನ್ನುವವರು ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸಂಡೂರು ತಹಸೀಲ್ದಾರ್ ರಶ್ಮಿ ಎಚ್.ಜೆ ಹಾಗೂ ಆರೋಗ್ಯ ಇಲಾಖೆಯ ಡಾ.ಕೋಟ್ರೇಶ್ ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿ ನಡೆಸಿದ ಸಂದರ್ಭದಲ್ಲಿ 37 ವರ್ಷದ ಷಣ್ಮುಖುಡು ಹಾಗೂ 33 ವರ್ಷದ ರಾಮು ಎನ್ನುವವರು ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಪಡೆದ ಯಾವುದೇ ಅಧಿಕೃತ ದಾಖಲೆಗಳು ಹೊಂದಿರಲಿಲ್ಲ. ವೈದ್ಯಕೀಯ ಪದವಿ ಪಡೆಯದಿರುವುದು ಕಂಡುಬಂದಿದೆ.

ತಾವು ಅಸಲಿ ಡಾಕ್ಟರ್‍ಗಳೆಂದು ಜನರನ್ನು ನಂಬಿಸಿ ಚಿಕಿತ್ಸೆ ನೀಡಿ ಮೋಸ ಮಾಡುತ್ತಿದ್ದರು. ಸದರಿ ವ್ಯಕ್ತಿಗಳ ಕ್ಲಿನಿಕ್ ಸಂಪೂರ್ಣ ಜಪ್ತಿ ಮಾಡಲಾಗಿದ್ದು, ಆ ವ್ಯಕ್ತಿಗಳ ವಿರುದ್ಧ ಐಪಿಸಿ 420 ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮಗಳ ಕಾಯ್ದೆ ಹಾಗೂ ನಿಯಮ 2007 ಮತ್ತು 2009ರ ಕಲಂ 194 ಅಡಿ ಕಾನೂನು ಕ್ರಮಕೈಗೊಳ್ಳುವಂತೆ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗೆಣತಿಕಟ್ಟೆಯಲ್ಲಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದಾಖಲೆಗಳಿರದೇ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಗುರುಬಸವರಾಜ ಎ.ಎಂ ಅವರ ಮೇಲೆ ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ರಶ್ಮಿ ನೇತೃತ್ವತ ತಂಡ ಕ್ಲಿನಿಕ್ ಸಂಪೂರ್ಣ ಜಪ್ತಿ ಮಾಡಿಕೊಂಡು ಗುರುಬಸವರಾಜರನ್ನು ಬಂಧಿಸಿ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹರಪನಳ್ಳಿ ತಾಲೂಕಿನ ತೌಡೂರು ಗ್ರಾಮದವರಾದ 44 ವರ್ಷದ ಗುರುಬಸವರಾಜ ಅವರು ಗೆಣತಿಕಟ್ಟೆ ಜನರಿಗೆ ಅಸಲಿ ಡಾಕ್ಟರ್ ಅಂತ ನಂಬಿಸಿ ಚಿಕಿತ್ಸೆ ನೀಡುತ್ತಿದ್ದ ಎಂದು ದಾಳಿ ಸಂದರ್ಭದಲ್ಲಿ ತಿಳಿದುಬಂದಿದೆ.

ಇದೇ ರೀತಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದಾಖಲೆಗಳನ್ನಿಟ್ಟುಕೊಳ್ಳದೇ ತಾವೇ ಅಸಲಿ ಡಾಕ್ಟರ್‍ಗಳೆಂದು ನಂಬಿಸಿ ಚೋರನೂರು ಗ್ರಾಮದ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಕಲ್ಕತ್ತಾ ಮತ್ತು ಆಂಧ್ರಪ್ರದೇಶ ಮೂಲದ ವಿಜಯಕುಮಾರ್ ಮತ್ತು ವಿಶ್ವಜೀತ್ ಮೌಲ್ಲಿ ಅವರ ಕ್ಲಿನಿಕ್ ಕೂಡ ಸೀಜ್ ಮಾಡಲಾಗಿದ್ದು, ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಎಚ್.ಜೆ.ರಶ್ಮೀ ಅವರು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಈ ಕಾರ್ಯಾಚರಣೆ ಮುಂದುವರಿಯಲಿದ್ದು,ನಕಲಿ ವೈದ್ಯರ ಮೇಲೆ ಕಟ್ಟುನಿಟ್ಟಿನ ಕ್ರಮಕಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವ ಡಿಸಿ ಮಾಲಪಾಟಿ ಅವರು “ಹಳ್ಳಿ ಜನಗಳ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡು ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ; ಜನರು ಕೋವಿಡ್ ತಗುಲಿದ ನಂತರ ಗಂಭೀರವಾದಾಗ ಕೋವಿಡ್ ಆಸ್ಪತ್ರೆಗಳಿಗೆ ಬರುತ್ತಿದ್ದು,ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತಹಸೀಲ್ದಾರರುಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ” ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here